Monday, 22 December 2025

 ಶ್ರದ್ದಾಂಜಲಿ...ಶ್ರೀನಿವಾಸನ್ 


ಸಿನಿಮಾಗಳಲ್ಲಿ ನಟಿಸಿದ್ದರೂ ಬದುಕು ಸಾಗಿಸಲು ಹಣವಿಲ್ಲದ ಒಬ್ಬ ಯುವಕ. ಆತನಿಗೆ ಒಬ್ಬಳು ಪ್ರೇಯಸಿ  ಆದರೆ ಪ್ರೀತಿಯನ್ನು ಪೋಷಿಸಲು ಆರ್ಥಿಕ ಶಕ್ತಿ ಇರಲಿಲ್ಲ.ಅಂತಹ ಸಂಕಷ್ಟದ ಹೊತ್ತಲ್ಲಿಒಬ್ಬ ಕ್ರೈಸ್ತ ( ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನ ಹೊಂದಿದ ಇನೋಸಿಯಂಟ್ )ತನ್ನ ಹೆಂಡತಿಯ ಕೈ ಬಳೆಯನ್ನು ಗಿರವಿ ಅಂಗಡಿಯಲ್ಲಿಟ್ಟು ಅದರಲ್ಲಿ ಬಂದ ಹಣ  400 ರೂಪಾಯಿ ನೀಡಿದ, ಮತ್ತೊಬ್ಬ ಮುಸ್ಲಿಂ (ಮೇರು ನಟ ಮಮ್ಮೂಟ್ಟಿ) “ನಾಳೆ ನನ್ನ ಮದುವೆ ನನಗೆ 2000 ಹಣದ ಅವಶ್ಯಕತೆ ಇದೆ ಎಂದಾಗ 2000  ಕೊಟ್ಟು, ನಾನು ಮದುವೆಗೆ ಬರುತ್ತೇನೆ ಎಂದಾಗ ನೀವ್ಯಾರು ಬರುವುದು ಬೇಡ ಎಂದು ಸಂಭಂದಿಕರ ಮನೆಗೆಲ್ಲ ಆಟೋ ಮಾಡಿಕೊಂಡು ನಾಳೆ ನನ್ನ ಮದುವೆ ಆದರೆ ನೀವ್ಯಾರು ಬರುವುದು ಬೇಡ ಅಂತ ಹೇಳೊಕೆ ಬಂದೆ ಎಂದು ಹೇಳಿದ,  ಆ ಮೇರು ನಟ ಬೇರೆ ಯಾರು ಅಲ್ಲ ಮಲಯಾಳಂ ಚಿತ್ರರಂಗ ಕಂಡ ನಟ,ನಿರ್ದೇಶಕ, ನಿರ್ಮಾಪಕ, ಕಥೆಗಾರ ಶ್ರೀನಿವಾಸನ್. ಆ ಹಣದಲ್ಲಿ ಒಬ್ಬ ಹಿಂದು ಹುಡುಗಿಗೆ ತಾಳಿ ಕಟ್ಟಲಾಯಿತು. ರಿಜಿಸ್ಟರ್ ಆಫೀಸ್ ಆವರಣದಲ್ಲಿ, ಸದ್ದಿಲ್ಲದೆ, ಸಂಭ್ರಮವಿಲ್ಲದೆ ಆದರೆ ಮಾನವೀಯತೆಯಿಂದ ತುಂಬಿದ ಮದುವೆ ನಡೆಯಿತು.
ಇಲ್ಲಿ ಪ್ರಶ್ನೆ ಏನು ಗೊತ್ತಾ?
ಯಾವ ಧರ್ಮ? ಯಾರ ಧರ್ಮ? ಯಾವ ಜಾತಿ? ಯಾವ ಮತ? ಅಲ್ಲಿ ಇದ್ದದ್ದು ಒಂದೇ ಒಂದು ಧರ್ಮ ಅದು  ಮಾನವ ಧರ್ಮ, ಧರ್ಮಗಳು ಗೋಡೆಯಲ್ಲ ಸೇತುವೆಗಳಾಗಬೇಕು. ಜಾತಿ ಗುರುತಾಗಬಾರದು, ಗುಣ ಗುರುತಾಗಬೇಕು ಮತಗಳು ಮತಾಂತರಕ್ಕೆ ಅಲ್ಲ, ಹೊಸ ಮನ್ವಂತರಕ್ಕೆ ಕಾರಣವಾಗಬೇಕು. ಹಸಿದವನಿಗೆ ಊಟ ಕೊಟ್ಟ ಕೈ ಅದು ಯಾವ ಧರ್ಮದು ಎನ್ನುವುದಕ್ಕಿಂತ, ಅದು ಮನುಷ್ಯನ ಕೈ ಎನ್ನುವುದೇ ಮುಖ್ಯ. ಕಣ್ಣೀರು ಒರೆಸುವ ಹೃದಯ ಅದು ಯಾವ ದೇವರನ್ನು ಪೂಜಿಸುತ್ತದೆ ಎನ್ನುವುದಕ್ಕಿಂತ, ಅದು ಮನುಷ್ಯತ್ವವನ್ನು ನಂಬುತ್ತದೆ ಎನ್ನುವುದೇ ಸಾಕು.
ಕಡೆಯದಾಗಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಕಚ್ಚಾಡುವವರಿಗೆ ಒಂದು ಪ್ರಶ್ನೆ:
“ನಿಮ್ಮ ಧರ್ಮ ಮನುಷ್ಯನಾಗಿ ನಡೆದುಕೊಳ್ಳಲು ಕಲಿಸದಿದ್ದರೆ ,ಅದನ್ನು ನೀವು ನಿಜವಾಗಿಯೂ ಪಾಲಿಸುತ್ತಿದ್ದೀರಾ?”ಎಲ್ಲ ಧರ್ಮಗಳಿಗೂ ಗೌರವ ಇರಲಿ,ಆದರೆ ಮಾನವೀಯತೆಗೆ ಮೊದಲ ಸ್ಥಾನ ಇರಲಿ.ಯಾಕೆಂದರೆ ಧರ್ಮ ಮನುಷ್ಯನಿಗಾಗಿ,ಮನುಷ್ಯ ಧರ್ಮಕ್ಕಾಗಿ ಅಲ್ಲ.

Tuesday, 9 December 2025

 ಏನಾದರೂ ಆಗು, ಮೊದಲು ಮಾನವನಾಗು

                                                         

       
ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನುಡಿ ಪ್ರಚಲಿತದಲ್ಲಿದೆ “ಪಂಪನಿಂದ ಕುವೆಂಪು ತನಕ” ಮನುಷ್ಯ ಜಾತಿ ತಾನೊಂದೇ ವಲಂ ಎಂದು ಘೋಷಿಸಿದ ಪಂಪ ವರ್ಣ ಗೋಪುರದ ತುತ್ತ ತುದಿಯವನು ಅದರ ನಂತರ ಬಂದ ಬಸವಣ್ಣ ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಜಾತಿ ಪದ್ಧತಿಯನ್ನು ಮೇಲ್ತರದಳಷ್ಟೇ ವಿರೋಧಿಸುತ್ತಾರೆ ಆದರೆ ಆಧುನಿಕ ಸಂದರ್ಭದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿ ನಿಷ್ಟೂರ ಅಭಿಪ್ರಾಯಗಳಿಂದ ಕೊಚ್ಚಿ ಹಾಕಿದ ಕುವೆಂಪು ವರ್ಣ ಗೋಪುರದ ಅತ್ಯಂತ ಕೆಳಗಿನ ಶ್ರೇಣಿಯ ಮೊದಲ ಶೂದ್ರ ಲೇಖಕ.  ಮನುಜ ಮತ ವಿಶ್ವಪಥ ಎಂಬ ಪರಿಕಲ್ಪನೆಯಲ್ಲಿ ವಿಶ್ವಮಾನವ ಸಂದೇಶವನ್ನು ಹುಟ್ಟು ಹಾಕಿದ್ದ ಕುವೆಂಪು ಸರ್ವಕಾಲಕ್ಕೂ ಮೇಲ್‌ಸ್ತರದಲ್ಲಿ ನಿಲ್ಲುತ್ತಾರೆ.

ಕುವೆಂಪು ಮೌಲ್ಯಗಳ ಆವರಣದಲ್ಲಿ ಬದುಕಿದವರು, ಬದುಕು ಅವರಿಗೆ ಅತ್ಯಂತ ಮಹತ್ವಪೂರ್ಣವಾದದ್ದು ಬದುಕಿನ ಸ್ವಚ್ಛಂದತೆಯನ್ನು ಬಿಡಿ ಬಿಡಿಯಾಗಿ ತೆಗೆದುಕೊಂಡವರಲ್ಲ, ಸಮಗ್ರವಾದದ್ದು ಆತ್ಮೀಯವಾದದ್ದು ಏನಿದೆಯೋ ಅದೆಲ್ಲವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಬಾಳಿನ ಸಮಸ್ತ ಸಂವೇದನೆಗಳಿಗೂ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ನಿಸರ್ಗದ ಹುಚ್ಚು, ಅಸಮಾನತೆಯ ಕಿಚ್ಚು, ಶೋಷಣೆಯ ಅಸಹ್ಯ, ಇವು ಅವರ ಬರವಣಿಗೆಯಲ್ಲಿ ಹೆಚ್ಚಾಗಿ ಗೋಚರಿಸುವಂತದ್ದು. ಮಾನವೀಯತೆ ಸರ್ವ ಸಮಾನತೆ ಸಮತಾವಾದವನ್ನು ಬೋಧಿಸುವ ಕುವೆಂಪು, ವರ್ಗ ಸಂಘರ್ಷಕ್ಕಾಗಲಿ ಶೋಷಣೆಗಾಗಲಿ ತೀವ್ರ ವಿರೋಧಿ.  ಎಲ್ಲರ ಬದುಕು ಸರಳವೋ ಸುಂದರವೂ ಆಗಬೇಕು ವಿಶ್ವ ಶಾಂತಿ ನೆಲೆಸಿರಬೇಕು ಎಂದು ಅಪೇಕ್ಷಿಸುವ ಅವರು ಮನುಷ್ಯನನ್ನು ಕಿತ್ತು ತಿನ್ನುವ ಪರಿಸ್ಥಿತಿಯನ್ನು ಕಿಂಚಿತ್ತು ಸಹಿಸುತ್ತಿರಲಿಲ್ಲ. ಅಜ್ಞಾನ ಅಂಧಕಾರಗಳು ತೊಲಗಿ ಬದುಕಿನ ಬಡತನ ನಿವಾರಣೆಯಾಗಿ ಎಲ್ಲರೂ ಒಂದಾಗಿ ಸೋದರ ಮನೋಭಾವದಿಂದ ಬಾಳಬೇಕು ಎಂಬುವುದು ಅವರ ಜೀವನದ ಆಶಯವಾಗಿತ್ತು. ಆ ಮೂಲಕ ಅವರು ಸಾರ್ವಜನಿಕವಾಗಿ ಕೊಡುವ ಕರೆ ಇಂದಿಗೂ ರಿಂಗಣಿಸುತ್ತಿದೆ

ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ

ಮತಿಯಿಂದ ದುಡಿಯಿರೈ ಲೋಕ ಹಿತಕ್ಕೆ

ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು

 ಸೇರಿರೈ ಮನುಜ ಮತಕ್ಕೆ ವಿಶ್ವ ಪಥಕ್ಕೆ

ಜಾತಿ, ಮತ, ದೇವರುಗಳ ನೆಲೆಗಳಿಂದ ಹೊರಬಂದು, ನಿಸರ್ಗದ ನೆಲೆಯಲ್ಲಿ ನಾವೆಲ್ಲರೂ ಮನುಜ ಮತವೆಂಬ ಒಂದೇ ಗುಂಪಿನವರು ಎಂಬ ವಾಸ್ತವವನ್ನು ಅರಿತುಕೊಂಡು, ಪರಸ್ಪರ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳಬೇಕೆಂಬ ಆಶಯದೊಂದಿಗೆ ವಿಶ್ವ ಮಾನವ ಸಂದೇಶದಲ್ಲಿ ಪಂಚ ಮಂತ್ರಗಳನ್ನು ಪ್ರತಿಪಾದಿಸುತ್ತಾರೆ ಪ್ರತಿಯೊಂದು ಮಗುವೂ ಹುಟ್ಟುತ್ತಲೆ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವ ಮಾನವನ್ನಾಗಿ, ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು. ಕುವೆಂಪುರವರ ಜಲಗಾರ ಮತ್ತು ಶೂದ್ರ ತಪಸ್ವಿ ಸಮಾಜದ ಅವೈಚಾರಿಕ ರೋಗಗ್ರಸ್ತ ಮನೋಭಾವಕ್ಕೆ ಹಿಡಿದ ಕನ್ನಡಿಗಳಾಗಿವೆ. ಕುವೆಂಪು ವೈಜ್ಞಾನಿಕ ಸಮಾಜದ ತಳಹದಿಯ ಮೇಲೆ ತಮ್ಮ ವರ್ಗ ಸ್ವರೂಪ ಧೋರಣೆಗಳನ್ನ ಬೆಳೆಸಿಕೊಂಡವರು, ಸರ್ವರಿಗೂ ಸಮಪಾಲು ಸಮ ಬಾಳು ಎನ್ನುವುದು ಅವರ ಬದುಕಿನ ಧ್ಯೇಯವಾಗಿತ್ತು. ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲ ಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮುಂದೆ ಮತ-ಮೌಢ್ಯ ಒಪ್ಪಿಗೆಯಾಗದು. ಆಚಾರ್ಯ ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.

ಮನುಜಮತವಿಶ್ವಪಥಸರ್ವೋದಯಸಮನ್ವಯಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".

            ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆಸುವವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ 'ತನ್ನ' ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು. ಯಾವ ಒಂದು ಗ್ರಂಥವೂ 'ಏಕೈಕ ಪರಮ ಪೂಜ್ಯ' ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು ಸರ್ವಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದದ್ದು ಆ ಗುರು ಈ ಆಚಾರ್ಯ ಆ ಧರ್ಮಶಾಸ್ತ್ರ ಈ ಮನಸ್ಮೃತಿ ಮೊದಲಾದವು ಏನೇ ಹೇಳಲಿ ಎಲ್ಲವನ್ನು ವಿಮರ್ಶಿಸುವ ಪರೀಕ್ಷಿಸುವ ಓರೇಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಕುವೆಂಪು ಈ ನಾಡಿನ ಇತಿಹಾಸದಲ್ಲಿ ಈ ನಾಡ ನೆಲದ ಬದುಕಿನಲ್ಲಿ ಕೆಂಡದುಂಡೆಯಾಗಿ ನಿಸರ್ಗ ಪ್ರೀತಿ ಪೋಣಿಸಿದ ಹಸಿರ ದಂಡೆಯಾಗಿ ಸಮ ಸಮಾಜದ ಆಶಯವಾಗಿ ಯಾವತ್ತೂ ಇರುತ್ತಾರೆ. ಅವರ ತಕಾರಾರು ಇರುವುದು ಮೌಢ್ಯ ಅಜ್ಞಾನ ಮತ್ತು ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಾ ಸಾಮಾಜಿಕ ಅನಾರೋಗ್ಯವನ್ನು ಹರಡುತ್ತಿರುವವರ ವಿರುದ್ಧ. ಜಾತಿ ಮತಗಳು ಈ ದೇಶದ ಜನರ ಬದುಕಿಗೆ ಬಡಿದಿರುವ ಭೀಕರ ರೋಗಗಳು ವ್ಯಕ್ತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲದಂತ ಮಾಡಿರುವ ಈ ಕೋಟೆಗಳನ್ನು ನೆಲಸಮ ಮಾಡಿದಾಗ ಮಾತ್ರ ಬದುಕು ಸುಂದರವಾಗಿರಲು ಸಾಧ್ಯ. ಅವರ ಮಾರ್ಗದರ್ಶಕ ಮಾತನ್ನು ನೆನೆಯುವ ಮತ್ತು ಅದರಂತೆ ನಡೆದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ ಆದ್ದರಿಂದ ಕುವೆಂಪು ಇಂದಿಗೂ ಎಂದಿಗೂ ಪ್ರಸ್ತುತವೆನಿಸುತ್ತಾರೆ.

Thursday, 4 December 2025

 ಮಾತಿನಾಚೆ ನಗುವ ಮಿಂಚ

     ಹೇಗೆ ಹಿಡಿದು ತೋರಲಿ? 🥰🥰

                              

            ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ನಮ್ಮ ದಾರಿಗಳು ಒಂದೇ ದೀಪದಿಂದ ಬೆಳಗಿದವು, ನಂತರ ಬೇರೆ ದಿಕ್ಕಿನಲ್ಲಿ ಹರಡಿಕೊಂಡವು. ಆದರೆ ಬೆಳಕು ಒಂದೇ ಆಗಿದ್ದರಿಂದ, ದೂರವಾದರೂ ನಾನು ನಿನ್ನ ನೆರಳನ್ನು ನನ್ನೊಳಗೆ ಎಂದೂ ಕಳೆದುಕೊಂಡಿರಲಿಲ್ಲ. ಜಗತ್ತು ನಮ್ಮಿಬ್ಬರ ಭೇಟಿಗೆ ಎಷ್ಟು ಬಣ್ಣಗಳು, ಎಷ್ಟು ಅರ್ಥಗಳು, ಎಷ್ಟು ವ್ಯಾಖ್ಯಾನಗಳನ್ನು ನೀಡಲಿ ನಾವು  ಎನಾಗಿದ್ದೆವೋ, ಹೇಗಿದ್ದೇವು, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬರಿಗೊಬ್ಬರು ಏನು, ಹೇಗೆ ನಡೆದುಕೊಂಡೆವು ಎಂದು ನಮ್ಮಿಬ್ಬರಿಗಷ್ಟೇ ಗೊತ್ತು. ಪ್ರತಿ ದಿನ ನಿನ್ನ ನೆನಪು ನನ್ನ ಹೃದಯಕ್ಕೆ ಅಂಟಿಕೊಂಡೇ ಇರುತ್ತದೆ. ಆದರೆ ಈ ನೆನಪುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಹಂಚಿಕೊಂಡರೆ ನೋವು ಹೆಚ್ಚುತ್ತದೆ, ಮೌನಿಸಿದ್ದರೆ ಹೃದಯ ತುಂಬಿ ಕಕ್ಕುತ್ತದೆ.

         ಸಾಕಷ್ಟು ಬಾರಿ ನೀನು ನಮ್ಮ ಮನೆಗೆ ಬಂದು  ಉಳಿದು ಹೋಗಿದ್ದೆ. ಆ ದಿನಗಳ ಬೆಳಕು ಇಂದಿಗೂ ನನ್ನ ಮನೆಯಲ್ಲಿ ಜೀವಂತವಾಗಿದೆ. ನಿನ್ನ ಜೊತೆ ಕೈ ಕೈ ಹಿಡಿದು ನದಿಯ ದಡದಲ್ಲಿ ನಡೆದ ಆ ಹಾದಿಗಳುಇಂದಿಗೂ ನನ್ನ ಜೀವನದ ಅತ್ಯಂತ ಪವಿತ್ರ ನೆನಪುಗಳೇ. ನೀನು ಜಗತ್ತಿಗೆ ಕಣ್ಮರೆಯಾಗಿರಬಹುದು ಆದರೆ ನಿನ್ನ ಸ್ಪರ್ಶ, ನಿನ್ನ ಮಾತು ನಿನ್ನ ನೋಟ ಪ್ರತಿ ಕ್ಷಣವೂ ನನ್ನೊಳಗೆ ಜೀವಂತ. ಹೇಗೆ ಮರೆಯಲಿ ನಿನ್ನ ?  ಹೇಗೆ ಮರೆಯಲಿ ನಿನ್ನೊಡನೆ  ಕಳೆದ ಆ ಜೀವನದ  ಚಿಕ್ಕ ಚಿಕ್ಕ ಅಮೂಲ್ಯ ಕ್ಷಣಗಳನ್ನು ? ನಿನ್ನನ್ನು ಪ್ರೀತಿಯಿಂದ, ಕಣ್ಣೀರಿನಿಂದ, ಸ್ಮರಣೆಯಿಂದ ಸ್ಮರಿಸುತ್ತಾ ಈ ಸಾಲುಗಳನ್ನು ಬರೆಯುತ್ತಿರುವೆ ಬರೆಯುವಾಗ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿದೆ. ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ , ಜಗತ್ತಿನ ಪಾಲಿಗೆ ನೀನು ಸತ್ತಿರಬಹುದು ನನಗೆ ನನ್ನೋಳಗೆ ಇನ್ನೂ ಜೀವಂತ ಇರುತ್ತೀಯ. ಪ್ರೀತಿಯೆಂದರೆ ಒಂದೇ ದಾರಿಗೆ ನಡೆಯಬೇಕೆಂಬ ನಿಯಮವಿಲ್ಲ ಎಂಬುದನ್ನು ನನ್ನ  ಜೀವನವೇ ಆಗಿದ್ದಾಗ ನೀನೆ ನನಗೆ ಹೇಳಿಕೊಟ್ಟ ಪಾಠ. ಬಾಲ್ಯದಲ್ಲಿ ಹಿಡಿದ ನಿನ್ನ ಕೈಯ ಬಿಸಿಯ ಸ್ಪರ್ಶ ಇನ್ನು ಹಾಗೇಯೆ ಇದೆ ಇಂದಿಗೂ ನೀನು ನನ್ನ ಕೈ ಬಿಟ್ಟಿಲ್ಲ ಎನ್ನುವ ನೆನಪು ಕಾಲ ಬದಲಾಯಿತು, ಜೀವನ ನಮ್ಮನ್ನು ಬೇರೆ ಮನೆಗಳಿಗೆ, ಬೇರೆ ಕರ್ತವ್ಯಗಳಿಗೆ ಕರೆದೊಯ್ದಿತು, ನಾನೂ ನನ್ನ ಬದುಕನ್ನು ಕಟ್ಟಿಕೊಂಡೆ,ನೀನೂ ನಿನ್ನ ಸಂತೋಷವನ್ನು ಹುಡುಕಿಕೊಂಡೆ. ಆದರೂ ಹೃದಯದ  ಮೌನ ಮೂಲೆಯಲ್ಲಿ ನಾವು ಇಬ್ಬರೂ ಪರಸ್ಪರ ಬಾಗಿಲು ತೆರೆದಿಟ್ಟಿದ್ದೆವು ಬರುವೆಯಾ ಎಂಬ ನಿರೀಕ್ಷೆಗೆ ಅಲ್ಲ,ಬರಲಿಲ್ಲ ಎಂಬ ಮೌನ ಗೌರವಕ್ಕೆ. ಇಂದು ನೀನು ಈ ಲೋಕದಲ್ಲಿಲ್ಲವೆಂಬ ಸುದ್ದಿ ಹೃದಯಕ್ಕೆ ಸುಳಿಯಂತೆ ತಾಗಿದಾಗ, ನಾನು ಕಣ್ಣೀರಲ್ಲಿ ಹುಡುಕಿದ್ದು ನಿನ್ನ ನೋವಲ್ಲ ನಿನ್ನ ಸಂತೋಷ ಎಂದಿಗೂ ನಾನು ಬಯಸಿದ್ದು ನೀನು ಎಲ್ಲೋ ಒಂದು ಕೋಣೆಯಲ್ಲಿ ಶಾಂತವಾಗಿರು ಎಂದು ಆದರೆ ಇಂದು ನಿನ್ನದಾಗಿ ಉಳಿದಿರುವುದು ಒಂದು ಮೌನ ಪ್ರೀತಿ, ಒಂದು ಮಧುರ ನೆನಪು, ಮತ್ತು ನನ್ನ ಹೃದಯದ ಒಳಗಿನ ಶಾಶ್ವತ ಸ್ಥಳ. ನೀನು ಇಲ್ಲದೆ ಜೀವನ ಮುಂದುವರಿದರೂ,ನಿನ್ನ  ನೆನಪುಗಳಿಲ್ಲದೆ ಅದು ಸಂಪೂರ್ಣವಲ್ಲ. ನೀನು ಬದುಕಿದ್ದ ದಿನಗಳು ಪ್ರೀತಿಯ ಅರ್ಥ ಕಲಿಸಿದವು. ನೀನು ಇಲ್ಲದ ದಿನಗಳು ನೆನಪಿನ ಮೌಲ್ಯ ಕಲಿಸುತ್ತಿವೆ. ಇಂದು ನೀನು ಕಣ್ಣಿಗೆ ಕಾಣದಿದ್ದರೂ ನಿನ್ನ ಪ್ರೀತಿ ಮತ್ತು ನೀನು ಎಂದಿಗೂ ಮಸುಕಾಗುವುದಿಲ್ಲ. 
    ನೀ ಬಂದೆ ಬೆಳಗಿದೆ, ರೂಪ ಕೊಟ್ಟೆ ನಂತರ ಶಾಂತವಾಗಿ ಮತ್ತೊಂದು ಲೋಕದತ್ತ ಹೊರಟು ಹೋದೆ. ನಾವು ಹಂಚಿಕೊಂಡ ಮೌನ ಕ್ಷಣಗಳು, ನಗು, ನೋವುಗಳು ಇವೆಲ್ಲಾ ಈಗ ನನ್ನ ಆತ್ಮದ ಒಂದು ಭಾಗ. ನಿನ್ನನ್ನು ಈ ಲೋಕದಿಂದ ಕರೆಯುವ ದೇವರ ನಿರ್ಧಾರವನ್ನು ಎಂದೂ ನಾನು ಪ್ರಶ್ನೆ ಮಾಡಲ್ಲ ನೀನು ಈ ಜಗತ್ತಿನಿಂದ ನಿರ್ಗಮಿಸಿದನ್ನು ನಾನು ದುಃಖದಿಂದ ಅಲ್ಲ ಭಕ್ತಿಯಿಂದ ಸ್ವೀಕರಿಸುತ್ತೇನೆ ಬಹುಶಃ ನಿನ್ನ ಆತ್ಮಕ್ಕೆ ಈ ಮನುಷ್ಯ ಜೀವನ ಸಾಕಾಗಲಿಲ್ಲ ಎನಿಸುತ್ತಿದೆ , ಆ ದೇಹ ಇನ್ನೊಂದು ಶಾಂತಿಯ ದಾರಿಯನ್ನು ಬಯಸಿತೋ ಎನೋ ?  ಅದನ್ನು ನಾನು ಗೌರವಿಸುತ್ತೇನೆ. ಇಷ್ಟೂ ತನಕ ಎಲ್ಲೀಯೋ ಸುಖದಿಂದ  ಇದ್ದೀಯ ಎನ್ನುವ ಖುಷಿ ಇತ್ತು ಇನ್ನೂ ಆ ಖುಷಿಯೂ ಇಲ್ಲ,  ನೀನು ಇಲ್ಲವೆಂಬ ಸುದ್ದಿ ಕೇಳಿದಾಗ ಅದು ನನ್ನನ್ನು ನೆಲಕ್ಕೊರಗಿಸಿತು ಆದರೆ ಅಲ್ಲೇ ಬಿದ್ದಿದ್ದಾಗ ಆಕಾಶದತ್ತ ನೋಡಿದ ಕ್ಷಣದಲ್ಲಿ ಒಂದು ಸ್ಪಷ್ಟತೆ ಒಳಗೆ ಮೂಡಿತು ಪ್ರೀತಿ ಎಂದರೆ ದೇಹದ ವಿಷಯವಲ್ಲ ಅದು ಆತ್ಮದ ಸಂಬಂಧ, ಪರಸ್ಪರ ದೇಹಕ್ಕೆ ಯಾವತ್ತೂ ನಾವು ಆದ್ಯತೆ ನೀಡಲಿಲ್ಲ  ಎನ್ನುವುದು ಬೇರೆ ಮಾತು. ಇಂದೂ ಕೂಡ  ರಾತ್ರಿ ಗಾಳಿ ಮೃದುವಾಗಿ ಸ್ಪರ್ಶಿಸಿದಾಗ ಅದರೊಳಗೆ ನಿನ್ನ ಮೌನ ಸಾನ್ನಿಧ್ಯವಿದೆ ಪ್ರಾರ್ಥನೆಗೆ ಕೈ ಜೋಡಿಸಿದಾಗ ನಿನ್ನ ನೆನಪಿನ ದೀಪ ಬೆಳಗುತ್ತದೆ  ನಕ್ಷತ್ರಗಳನ್ನು ನೋಡಿದಾಗ ನಿನ್ನ ಶಾಂತ ನಗು ಅದರ ಬೆಳಕುಗಳಲ್ಲಿ ಕರಗುತ್ತದೆ. ನೀನು ಈಗ ದೇವರ ಅಂಗಳದಲ್ಲಿ, ಲೋಕದ ನೋವುಗಳಿಂದ ದೂರ,ಶುದ್ಧ ಬೆಳಕಿನ ನಡುವೆ  ಅಲ್ಲಿ ನಿನ್ನ ಆತ್ಮ ಶಾಂತವಾಗಿರುವ ವಿಚಾರ ನನ್ನ ಮನಕ್ಕೆ ಆರಾಮ ಈ ಜನ್ಮ ನಮ್ಮನ್ನು ದೂರವಿಟ್ಟರೂ, ಮತ್ತೊಂದು ಜನ್ಮದ ಮಾರ್ಗದಲ್ಲಿಈ ಪ್ರೀತಿಯ ಬೆಳಕು ಮತ್ತೆ ನಮ್ಮನ್ನು ಸೇರ್ಪಡಿಸಬಹುದು ಭಗವಂತನ ಇಚ್ಚೆಯಂತೆ ಇಂದಿಗೂ ನೀನು ನನ್ನ ಪ್ರಾರ್ಥನೆಗಳಲ್ಲಿ, ನನ್ನ ಮೌನಗಳಲ್ಲಿ, ನನ್ನ ಹೃದಯದ ನಿಶ್ಶಬ್ದ ದೇವಾಲಯದಲ್ಲಿಎಂದೂ ಬೆಳಗುತ್ತಿರುವೆ ನಿನಗಾಗಿ ನಿನ್ನ ನೆನಪಿಗಾಗಿ ನಾವು ಹಂಚಿಕೊಳ್ಳದ ಬದುಕಿಗಾಗಿ ಪ್ರೀತಿಯೊಂದು ನಿರಂತರ ಕಾಯುತ್ತೆ ಸುಮ್ಮನೆ ನಗುತ್ತಾ.


Thursday, 30 March 2017

ಘಟ್ಟದಿಂದ ಬೆಟ್ಟದ ಕೆಳಗೆ ನೋಡಿದ ಕಾರ್ತಿಕ್ ................

ಧನಂಜಯ ಮಡಿಕೇರಿ

          ಹಸ್ತಕ್ಕೆ ಬರಿ ನಕ್ಕೆ ಓದುತ್ತಾ  ಓದುತ್ತಾ ಮಸ್ತಕಕ್ಕಿಟ್ಟು ಗಂಭೀರವಾದೆ, ವಿಸ್ತರದ ದರ್ಶನಕ್ಕೆ ತುತ್ತ ತುದಿಯಲ್ಲಿ ನಿನ್ನ ಪುಸ್ತಕಕ್ಕೆ ಕೈ ಮುಗಿದೆ. ಇದು ಕವಿ ಕುವೆಂಪು ಕಗ್ಗ ಓದಿದ ನಂತರ ಊದಿದ  ಕಹಳೆ " ಕಾಡು ಹಾದಿಯ ಜಾಡು ಹತ್ತಿ " ಕಾರ್ತಿಕ್ ಮಾಡಿದ ಪ್ರಯಾಣ ಓದುಗನಿಗೆ ಎಲ್ಲೂ  ಪ್ರಯಾಸವಾಗುವುದಿಲ್ಲ. ತಮ್ಮ ಮೊದಲ ಪ್ರಯತ್ನದಲ್ಲಿ ಮಲೆನಾಡು ಅದರ ಸೌಂದರ್ಯ ಮತ್ತು ಅನಿವಾರ್ಯತೆ , ದಿನ ನಿತ್ಯದ ಬದುಕಿನಲ್ಲಿ ಸಾಮನ್ಯ ಬದುಕಿನ  ದರ್ಶನ , ಅದನ್ನು ಸಾಹಿತ್ಯಕ್ಕೆ ಇಳಿಸಿದ ರೀತಿ ಸುಂದರವಾಗಿದೆ . ಪಶ್ಚಿಮ ಘಟ್ಟದ ತಪ್ಪಲಿನ ಮಂದಿಗೆ ತುಳು , ಬ್ಯಾರಿ , ಮಲಯಾಳಂ ಹವ್ಯಕ ಕನ್ನಡ ಸಮಸ್ಯೆಯೆಂದು ನನಗನಿಸುವುದಿಲ್ಲ. ಹಾಗಾಗಿ ಕೃತಿಯಲ್ಲಿ ಭಾಷೆ ಕಷ್ಟವಾಗದೆ ಇಷವಾಗಿ ಓದಿಸಿ ಕೊಂಡು ಹೋಗುತ್ತದೆ.
        “ಅವಳೊಂದು ಪುಟ್ಟ ಕೊಳ ನನ್ನ ಬಾಳಿನ ಜೀವ ಜಲ”  ಎನ್ನುವ ಹಾಗೆ ಮಲೆನಾಡು, ಸಹ್ಯಾದ್ರಿ, ಪಶ್ಚಿಮ ಘಟ್ಟ ಯಾವುದೇ ಹೆಸರಿನಿಂದ ಕರೆಯಿರಿ  ಜೀವ ಸಂಕುಲಕ್ಕೆ ಅದರ ಅನಿವಾರ್ಯತೆ ಏನು? ಆ ಪ್ರಕೃತಿ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆ ಎನ್ನುವುದನ್ನು ದಂಗೆಯ ದಿನಗಳು ನೆನಪಿಸಿದರೆ. ಬನದ ಹರಕೆಯೊಂದಿಗೆ ಆನೆಯ ಆಗಮನವಾಗುತ್ತೆ, ಅದರೊಂದಿಗೆ ಆನೆಗೆ ನಾವು ಅರಣ್ಯದ ಮಧ್ಯೆ ಅಷ್ಟು ಕೆರೆ ತೆಗೆಸಿದ್ದೇವೆ, ಅದಕ್ಕೆ ಆಹಾರಕ್ಕೆ ಬೇಕಾಗಿರುವ ಮರಗಳನ್ನು ಬೆಳೆಸಿದ್ದೇವೆ, ಎನ್ನುವ ಶಾಸಕನೊಬ್ಬ ಏಕ ಕಾಲದಲ್ಲಿ ಆನೆ ಮತ್ತು ಪ್ರಜೆಗೆ ಮೋಸಮಾಡುತ್ತಾನೆ  ಕೃತಿಕಾರ ಆತನನ್ನು ಬೆತ್ತಲಾಗಿಸಿದ್ದಾರೆ. ಮಧ್ಯದಲ್ಲಿ ಚಿಕಿತ್ಸೆಗೆ ಇಟ್ಟಿದ್ದ ಹಣ ಕಳೆದು ಹೋಗುತ್ತೆ ಅಂತಹ ಸಂಧರ್ಭದಲ್ಲಿ ಧರ್ಮ ಮತ್ತು ಜಾತಿಗಿಂತ ಹೆಚ್ಚಾಗಿ ಮಾನವೀಯತೆ ರಾರಾಜಿಸುತ್ತದೆ, ಎಲ್ಲೋ ಒಂದು ಕಡೆ ಕೃತಿಯ ಜಾಡು ಹಿಡಿದು ಹೊರಟಾಗ ಕೃತಿಕಾರ ಹೇಳಿದಂತೆ ಮಹಾಗುರು ತೇಜಸ್ವಿಗೆ ಸಿಕ್ಕ ಮರ-ಗಿಡ, ಹಳ್ಳಿಯ ಭಾಷೆ-ಬೈಗುಳ ಸಾಹಿತ್ಯದ  ಎಲ್ಲವೂ ಮಹಾಗುರುವನ್ನು ನೆನೆಪಿಸಿವಂತೆ ಮಾತನಾಡುತ್ತೆ. ದೂರದ ಬೆಟ್ಟ ನುಣ್ಣಗೆ ಎನ್ನುವಂತೆ ಬಣ್ಣ ಬಣ್ಣದ ಮುಖವಾಡದ ಬೆಂಗಳೂರು  ಈ ಮೊದಲೆ ನಮ್ಮ ಮನಸಿನಲ್ಲಿ ಮೂಡಿದ ಚಿತ್ರ ಸ್ಪಷ್ಟವಾಗುವಂತೆ ಮಾಡುತ್ತೆ.

     ಕೆಲವೊಂದು ಹೊಡೆತಗಳು ನಮ್ಮ ಬಡತನಕ್ಕೆ ಸ್ವಾಭಿಮಾನಕ್ಕೆ ಮತ್ತು ಅಸಾಯಕತೆಗೆ ಬಿದ್ದ ಏಟುಗಳು ಎಂದು ಕೃತಿಕಾರರೇ ಹೇಳಿರುವ ಹಾಗೆ ಅದು ಹಾಗೆ ಆಗಿದ್ದರೆ ಮಾತ್ರ ನಮ್ಮ ಕಾರ್ಯವಾಗಲಿ ಕವನ ಕಾವ್ಯವಾಗಲಿ ಗಟ್ಟಿತನ ಪಡೆದುಕೊಳ್ಳುವುದಕ್ಕೆ ಸಾಧ್ಯ.. ನೀರಿನ ಮಹತ್ವದಿಂದ ಮೊದಲುಗೊಂಡು ನೀರೆಯ ನೋವಿನೊಂದಿಗೆ ಅಂತ್ಯವಾಗುವ ಕೃತಿ ತನ್ನ ಬಾಲ್ಯದೊಂದಿಗೆ ನಲಿಯುತ್ತಾ-ಕಲಿಯುತ್ತಾ ಒಂದು ಪ್ರೀತಿಯ  ಕಥೆಗೆ ಬಂದು ನಿಂತಿರುವುದು ಅಭಿನಂದನಾರ್ಹ. ಮುಂದಿನ ದಿನಗಳಲ್ಲಿ ಕೃತಿಕಾರನ ಲೇಖನಿಯಿಂದ ಮತ್ತಷ್ಟು ಬರಹ ಮೂಡಬಹುದು ಎಂದು ನಿರೀಕ್ಷೆ ನನ್ನದು. 

Friday, 27 November 2015

ಗಾಯದ ಹೂವುಗಳು ಮತ್ತು ನಲ್ಮೆಯ ಸತೀಶ್......

ಧನಂಜಯ ಮಡಿಕೇರಿ.

ಕಾಜೂರು ಶಾಲೆ ಹತ್ತಿರ ಇರುವ ಪಶುವೈದ್ಯ ಶಾಲೆ ಬಳಿ ಆಲದ ಮರವಿದೆ ಅದರ ಬೇರುಗಳನ್ನು ಹಿಡಿದು ಉಯ್ಯಾಲೆ ಆಡಿದ ನೆನಪು ಮಾತ್ರ ನನಗೆ ಇರುವುದು. ಆದರೆ ನೀವು ಮರವನ್ನೇರಿ ಅದರ ಶೃಂಗದಲ್ಲಿ ನಿಂತು ಹೊರ ಜಗತ್ತನ್ನು ನೋಡಿದ ರೀತಿ ಮಾತ್ರ ಅದ್ಭುತ. ಹಾಗಂತ ನಿಮ್ಮ ಗಾಯದ ಹೂವುಗಳು ನನ್ನಲ್ಲಿ ಪಿಸುಗುಟ್ಟಿದವು. ಗಾಯದ ಹೂವುಗಳು ಕವನ ಸಂಕಲನ ನಿಮ್ಮ ದೈನಂದಿನ ಗೆಳೆಯರು ಯಾರು ? ನಿಮ್ಮ ಆದ್ಯತೆ ಏನು  ಎನ್ನುವುದನ್ನು ನನಗೆ ಅರ್ಥೈಸಿದೆ.
        ಇರುವೆಯ ಮೂಲಕ ಪ್ರಾರಂಭವಾಗುವ ನಿಮ್ಮ ಕವಿತೆ ಎಲ್ಲಾ ಕಡೆ ಇರುವೆ ಎನ್ನುವ ಸಂದೇಶದೊಂದಿಗೆ ಅದು ಊದುಗೋಳವೆ, ಖಾಲಿ ಡಬ್ಬ, ಚಪ್ಪಲಿಗಳು ಏನೇ ಆಗಿರಲಿ ಅದನ್ನು ನಿಮ್ಮ ಬರವಣಿಗೆ ಮೂಲಕ ಸ್ಪರ್ಶಿಸಿದ ರೀತಿ ಅದ್ಭುತವಾಗಿದೆ. ಕವಿತೆಗಳು ಅಸ್ವಸ್ಥವಾಗಿದೆ ವೈದ್ಯನಿಗೆ ಕೊಡಲು ಕಾಸಿಲ್ಲದೆ ಹಾಸಿಗೆಯ ಮೇಲೆ ನರಳುತ್ತಲೇ ಇವೆ ಎನ್ನುವುದು ನಿಮ್ಮ ಹೃದಯ ವಿಶಾಲತೆ ಅಲ್ಲದೆ ಬೇರೇನು ? ಇರಬಹುದು ನಿನ್ನೆ ಹುಟ್ಟಿದನ್ನು ಬೀದಿಯಲ್ಲಿ ಮೊನ್ನೆ ಹುಟ್ಟಿದನ್ನು ಚರಂಡಿಯಲ್ಲಿ ಎಸೆದಿರಬಹುದು. ಅದಕ್ಕೂ ಹಿಂದಿನದನ್ನು ಪೆನ್ನು ಇಂಕುಗಳೊಂದಿಗೆ  ಬೆಂಕಿ ಹಚ್ಚಿ ಸುಟ್ಟಿರಬಹುದು ಅದು ಅತಿಯಾಗಿ ಗಾಯಗೊಂಡವೇ ? ಎನ್ನುವುದು ನನ್ನ ಸಾತ್ವಿಕ ಪ್ರಶ್ನೆ. ಹಾಗಾದರೆ  ಗಡಿನಾಡ ಸಂಚಾರಿ, ಶಕ್ತಿ, ವಿಜಯ ಕರ್ನಾಟಕ, ಕನ್ನಡ ಪ್ರಭ, ಉದಯವಾಣಿ, ಅವಧಿ, ಪಂಜು ಮುಂತಾದ ಕಡೆ ನುಸುಳಿದವು ಗಾಯದ ಹೂವುಗಳು ಅಲ್ಲವೇ.? ಹೌದು, ಅವೆಲ್ಲವೂ ಗಾಯದ ಹೂವುಗಳೇ ಅದನ್ನು ಸಾಹಿತ್ಯ ಲೋಕಕ್ಕೆ ಸಮರ್ಪಿಸಿದ್ದಿರಿ ಮುಲಾಮು ಹಚ್ಚುವವರು ಹಚ್ಚಲಿ ? ಕೆರೆದು ಗಾಯ ಮಾಡುವವರು  ಮಾಡಲಿ  ತಪ್ಪೇನು.?
 ನಿಮ್ಮ ಕಾವ್ಯ ಕೃಷಿಯಲ್ಲಿ ನನಗೆ ಕಂಡಿದ್ದು ಸೂಕ್ಷ್ಮತೆ, ಬದುಕಿನ ಪದರುಗಳನ್ನು ನೀವು ಪ್ರವೇಶಿಸಿದ ರೀತಿ, ಅದರ ಒಳಹೊಕ್ಕು ನೋಡಿದ ರೀತಿ ಮತ್ತು ಅನಾವರಣಗೊಳಿಸಿದ ಶೈಲಿ, ಅನುಭವ, ಕೋಮಲತೆ, ತೀಕ್ಷಣತೆ ಮತ್ತು ಕಾವ್ಯ ಕೃಷಿಯಲ್ಲಿ ನಿಮಗಿರುವ ಪ್ರಭುದ್ದತೆ ಭಕ್ತಿ ಎಲ್ಲವನ್ನು ನಾನು ಕಂಡೆ.
        ಸಾಹಿತ್ಯ ಲೋಕದ ಜನಪ್ರಿಯ ಕವಿಗಳ ಸಾಲಿಗೆ ಸೇರುವ ಎಲ್ಲಾ ರೀತಿಯ ಅರ್ಹತೆ  ಮತ್ತು ಸಾಮರ್ಥ್ಯ ಗಾಯದ ಹೂವುಗಳಿಗೆ ಇದೆ. ಆ ಮೂಲಕ ಕವಿಯಾದ ನಿಮಗೂ ಇದೆ ಎಂದು ಸಾಕ್ಷಿಕರಿಸಿದ್ದಿರಿ. ಗಾಯದ ಹೂವುಗಳ ಬುಟ್ಟಿಯಲ್ಲಿ ಭಾಷೆ, ಮಣ್ಣಿನ ಸತ್ವ, ಪ್ರಕೃತಿಯ ವೈಭವ, ಹಕ್ಕಿಗಳ ಚಿಲಿಪಿಲಿ, ಪ್ರತಿಭಟನೆ, ಆಧುನಿಕ ಬದುಕು, ಅದರೊಳಗಿನ ಜಟಿಲತೆ, ಕುಟಿಲತೆ ಎಲ್ಲವೂ ಅನಾವರಣಗೊಳಿಸುವ ನಿಮ್ಮ ಶ್ರಮ ಇಷ್ಟವಾಯಿತು. ಪ್ರಕೃತಿ ಮತ್ತು ಮನುಷ್ಯನ ನಡುವೆ ನಿಂತು ಜಗತ್ತನ್ನು ನೋಡಿದ ದೃಷ್ಟಿಕೋನ ನನಗೆ ಒಟ್ಟಾರೆ ನಿಮ್ಮ ಕವನ ಸಂಕಲನ ಓದಿಕೊಂಡು ಹೋದಾಗ  ಇಷ್ಟವಾಗಿದ್ದು. ಕವಿತೆಯನ್ನು ಕ್ಲೀಷ್ಟತೆಯ ಗೂಡಾಗಿಸದೆ ಇಷ್ಟವಾಗಿ ಓದಿಕೊಂಡು ಹೋಗುವಂತೆ ಮಾಡಿದ ನಿಮ್ಮ ಶ್ರಮ ಸಾರ್ಥಕವಾಗಿದೆ . ನಿಮ್ಮ ಲೇಖನಿಯಿಂದ ಹೆಚ್ಹು ಹೆಚ್ಚು ಕವಿತೆಗಳು ಮೂಡಲಿ ಬದುಕು ಸುಂದರವಾಗಿರಲಿ.

Wednesday, 24 July 2013

ಬಿಗ್ ಬಾಸ್ ಮತ್ತು ಧೋನಿ ಮಧ್ಯೆ ನಗಣ್ಯವಾದ ಸೈನಿಕ ?

ಧನಂಜಯ ಮಡಿಕೇರಿ

ಸೈನ್ಯ ,ಚಾಂಪಿಯನ್ ಟ್ರೋಫಿ ಮತ್ತು ಬಿಗ್ ಬಾಸ್ ಈ ಮೂವರಲ್ಲಿ ಯಾರು ಹಿತವರು ಎಂಬ ಪ್ರಶ್ನೆ ಉದ್ಭವವಾದರೆ ನಿಮ್ಮ ಉತ್ತರ ಏನು? ಆದರೆ ನನ್ನ ಉತ್ತರ ಮಾತ್ರ ಸೈನ್ಯ. ಇತ್ತೀಚಿಗೆ ಮುಗಿದ ಚಾಂಪಿಯನ್ ಟ್ರೋಫಿ ಕ್ರಿಕೇಟ್, ಇತ್ತೀಚಿಗೆ ಮುಗಿದ ಈ ಟಿ.ವಿ ಕನ್ನಡ ವಾಹಿನಿಯ ಬಿಗ್ ಬಾಸ್ ಇವು ಮೂರು ವಿಷಯಗಳನ್ನು ಗಮನಿಸಿದಾಗ ನನಗೊಂದು ಪ್ರಶ್ನೆ ಉದ್ಭವವಾಯಿತು ಅದನ್ನು ನಿಮ್ಮ ಮುಂದೆ ಇಟ್ಟು ಬಿಡುವ ಎನ್ನುವ ಕಸರತ್ತು ಈ ಲೇಖನ.

    ನಮ್ಮ ಈ ಟಿ.ವಿ ಕನ್ನಡ ವಾಹಿನಿಯಲ್ಲಿ  ಮೂಡಿ ಬಂದ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದ ಪ್ರಥಮ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆ ಈ ವಾಹಿನಿಗೆ ಇದ್ದರೂ, ಸಮಾಜಕ್ಕೆ ಈ ಕಾರ್ಯಕ್ರಮದ  ಮೂಲಕ ಸಂದೇಶ ಇಲ್ಲದೇ ಹೋದರು ಈ ಕಾರ್ಯಕ್ರಮದ ಮೂಲಕ ಅದರ ಟಿ.ಆರ್.ಪಿ ( ಟೆಲಿವಿಷನ್ ರೇಟಿಂಗ್ ಪಾಯಿಂಟ್) ಜಾಸ್ತಿಯಾಗಿದ್ದು ಮಾತ್ರ ಸುಳ್ಳಲ್ಲ. ಕೆಲವು ದೃಶ್ಯಗಳನ್ನು ನಾನು ಕೂಡ ವೀಕ್ಷಣೆ ಮಾಡಿದ್ದೇನೆ ನನ್ನಂತೆ ಹಲವರು ವೀಕ್ಷಿಸಿ ಇದೆಂತಾ ಕಾರ್ಯಕ್ರಮ ಎನ್ನುತ್ತಾ ಸಂಪೂರ್ಣ ಅಧ್ಯಾಯ ಮುಗಿಯುವವರೆಗೆ ನೋಡಿದವರು ಅದೇಷ್ಟೋ ಮಂದಿ ನಮ್ಮ  ಮಧ್ಯೆ ಇದ್ದಾರೆ. ಒಟ್ಟಿನಲ್ಲಿ ಸಮಾಜಕ್ಕೆ ಸಂದೇಶವಿಲ್ಲದೆ ಮುಕ್ತಾಯಗೊಂಡ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಎನ್ನುವುದು ಮಾತ್ರ ಸುಳ್ಳಲ್ಲ.
ಇನ್ನು ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ ಟ್ರೋಫಿ ಕ್ರಿಕೇಟ್, ಭಾರತದ ಮಟ್ಟಿಗೆ ಕ್ರಿಕೇಟ್ ಒಂದು ಜನಪ್ರಿಯ ಕ್ರೀಡೆ  ಏನೋ  ಸರಿ, ಅದಕ್ಕಿರುವ  ಜನ ಬೆಂಬಲ  ಬೇಡವೆಂದರೂ ನಮ್ಮ  ದೇಶದಲ್ಲಿ  ಅದಕ್ಕಾಗಿ ತುಡಿಯುವ ಮಿಡಿಯುವ ಸಾಕಷ್ಟು ಮಸಸ್ಸುಗಳು ನಮ್ಮ ಮಧ್ಯೆ ಇವೇ. ಅದು ಪರೋಕ್ಷವಾಗಿ ಆ ಕ್ರೀಡೆಗೆ ಇರುವ ಜನಪ್ರಿಯತೆಯು  ಹೌದು. ಒಂದು ಕಾಲದಲ್ಲಿ ಜಂಟಲ್ ಮ್ಯಾನ್ ಗೇಮ್ ಎಂಬ ಹೆಗ್ಗಳಿಕೆ ಇದ್ದ ಕ್ರಿಕೇಟ್ ಕ್ರಮೇಣವಾಗಿ ಆ ಪಟ್ಟವನ್ನು ಕಳೆದುಕೊಂಡರು, ಅದರ ಜನಪ್ರಿಯತೆ ಮಾತ್ರ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿರುವುದು ಕೂಡ ಅಷ್ಟೇ ಸತ್ಯ. ಕೆಲವರಿಗೆ ಕ್ರಿಕೇಟ್ ಜೂಜು, ಮನೋರಂಜನೆ ಮತ್ತೆ ಕೆಲವರಿಗೆ ಅದೊಂದು ಸೋಮಾರಿಗಳನ್ನು ಸೃಷ್ಟಿಸುವ ಕ್ರೀಡೆ ಹಲವರಿಗೆ ಅದೊಂದು ಧರ್ಮ. ಒಟ್ಟಿನಲ್ಲಿ ಅವರವರ ಭಾವಕ್ಕೆ ಭಕುತಿಗೆ. ಇತ್ತೀಚೆಗೆ ಮುಕ್ತಾಯವಾದ ಚಾಂಪಿಯನ್ ಟ್ರೋಫಿ  ಕ್ರಿಕೇಟ್ ಮ್ಯಾಚ್ ಫಿಕ್ಸಿಂಗ್ ಮತ್ತು ಹಗರಣಗಳಿಂದ ಕುಸಿದ ಭಾರತೀಯ ಕ್ರಿಕೇಟ್ ಗೆ  ಚೇತರಿಕೆ ನೀಡುವುದರೊಂದಿಗೆ ಮತ್ತಷ್ಟು ಅದರ ಮಾರುಕಟ್ಟೆಯನ್ನು ಹೆಚ್ಚಿಸಿಕೊಂಡಿದೆ ಎನ್ನಬೇಕು.
      ಇವೆರಡನ್ನೂ ಅವಲೋಕಿಸಿದರೆ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಮನರಂಜನೆಗೆ ಸೀಮಿತವಾಗಿ ಸಮಾಜಕ್ಕೆ ಯಾವುದೇ ಸಂದೇಶವಿಲ್ಲದ ಕಾರ್ಯಕ್ರಮವಾದರೆ, ಚಾಂಪಿಯನ್ ಟ್ರೋಫಿ ಕ್ರಿಕೇಟ್ ಕೇವಲ ಮನರಂಜನೆಗೆ ಸೀಮಿತವಾಯಿತು. ಆದರೆ ಉತ್ತರಖಂಡ ರಾಜ್ಯದಲ್ಲಿ ನಡೆದ ರಾಷ್ಟ್ರೀಯ ದುರಂತ ಒಂದಷ್ಟು ನೋವು, ದೇಶದ ಸೈನಿಕರು ಮತ್ತು ಅದರ ಕಾರ್ಯದ ಬಗ್ಗೆ ದೇಶದ ಎಲ್ಲಾ ಜನರ ಅಂತರಂಗದ ದೃಷ್ಟಿಯನ್ನು ತೆರೆಸಿದ್ದು ಸುಳ್ಳಲ್ಲ. ದೇಶದ ಸೈನ್ಯದ ಅಂಗವಾಗಿರುವ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ITBP) ತಂಡ ಮತ್ತು ಅದರ ಜವಾನರು ಜೀವದ ಹಂಗು ತೊರೆದು ನಮ್ಮ ಜನರ ಕೆಲಸ ಮಾಡಿದ್ದು ಇದೆಯಲ್ಲ ಅದು ಇಂದಿನ ಯುವ ಪೀಳಿಗೆಗೆ ನಮ್ಮ ದೇಶ ಎಂದರೆ ಏನು ? ಅಲ್ಲಿಯ ಜನರು ಯಾರು ನಮಗೆ ಏನು ಸಂಭಂದ ಮತ್ತು ನಾವು ಅವರಿಗಾಗಿ ಏಕೆ ಕೆಲಸ ಮಾಡಬೇಕು? ಎನ್ನುವುದನ್ನು ಮಾಡಿ ತೋರಿಸಿದರಲ್ಲ ಅದು ನಿಜವಾದ ಸಂದೇಶ. (ಅದನ್ನು ಎಷ್ಟು ಮಂದಿ ಇಷ್ಟ ಪಟ್ಟಿದಾರೋ ನೋಡಿದ್ದಾರೋ ಅದು ಬೇರೆ ವಿಷಯ) ಅದು ದೇಶದ ಸಾಕಷ್ಟು ಮಂದಿಯ ಅಂತರಂಗದ ದೃಷ್ಟಿ ತೆರೆಸಿರುವುದು ಸುಳ್ಳಲ್ಲ. ದೇಶದ ಸೈನ್ಯವೆಂದರೇನು ಅದರ ಕೆಲಸವೇನು ಅದರ ಬದ್ದತೆಗಳು ಏನು? ಎಂದು ಅದನ್ನು ದೇಶದ ಜನರಿಗೆ ಮೂಲೆ ಮೂಲೆ ತಲುಪಿಸಿದ ಕೀರ್ತಿ ಮಾತ್ರ ನಮ್ಮ ದೃಶ್ಯ ಮಾಧ್ಯಮಗಳದ್ದು ಮತ್ತು ಸಾಮಾಜಿಕ ತಾಣಗಳದ್ದು. ಇದನ್ನೆಲ್ಲ ಯೋಚಿಸಿದರೆ ನಾವು ಎಲ್ಲೋ ಒಂದು ಕಡೆ ಮಾತಿಗೆ ಸೀಮಿತವಾಗುತ್ತಿದ್ದೇವೆ. ನಮ್ಮ ನುಡಿ ನಡೆಯಷ್ಟು ತೂಕವಿಲ್ಲ, ಇದರ ಮಧ್ಯೆ ನಾವು ಗಮನಿಸ ಬೇಕಾದ ವಿಷಯವೆಂದರೆ ಚಾಂಪಿಯನ್ ಟ್ರೋಫಿ ಗೆದ್ದ ಪ್ರತಿಯೊಬ್ಬ ಆಟಗಾರನಿಗೆ ಒಂದು ಕೋಟಿ ಬಹುಮಾನ , ಸಮಾಜಕ್ಕೆ  ಯಾವುದೇ ಸಂದೇಶವಿಲ್ಲದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ೫೦ ಲಕ್ಷ, ದೇಶಕ್ಕಾಗಿ ತನ್ನ ಸಂಸಾರ ಮಕ್ಕಳನ್ನು ತೊರೆದು ಅದೆಷ್ಟೋ ಕಿ.ಮೀ ದೂರದಲ್ಲಿ ಈ ದೇಶ ನನ್ನ ತಾಯಿ , ಇಲ್ಲಿಯ ಜನರು ನನ್ನ ಸಂಸಾರ ಎಂದು ದುಡಿಯುತ್ತಿರುವ ಸೈನಿಕ ತನ್ನ ಮಕ್ಕಳನ್ನು ಅನಾಥವಾಗಿಸಿ ಮಡದಿಯನ್ನು ವಿಧವೆಯಾಗಿಸಿ ದೇಶಕ್ಕಾಗಿ ದುಡಿಯುತ್ತಾ ಮಡಿದರೆ ಕೇವಲ ೨೦ ಲಕ್ಷ.! ದುರಂತವೆಂದರೆ ಇದಲ್ಲವೇ ? 
ನಾವು ಈ ದೇಶದಲ್ಲಿ ಒಂದು ನೂರಾ ಇಪ್ಪತ್ತೆರಡು ಕೋಟಿ ಜನರಿದ್ದೇವೆ ಏನು ಪ್ರಯೋಜನ.? ತಲಾ ಒಂದು ರುಪಾಯಿ ನೀಡಲು ನಮಗೆ ಯೋಗ್ಯತೆ ಇಲ್ಲವೇ.? ದೇಶದ ಸಾರ್ವಜನಿಕ ವ್ಯವಸ್ಥೆ, ಸೈನಿಕನ ಬಗ್ಗೆ ಗಂಟೆಗಟಲೆ ಮಾತನಾಡುವ ನಾವು ನಮಗಿರುವ ಬದ್ದತೆ ಇದೇನಾ ಎನ್ನುವುದು ಪ್ರಶ್ನೆ ಮಾಡಿಕೊಳ್ಳಬೇಕಿದೆ. ಒಬ್ಬ ಸೈನಿಕನಾಗಲಿ ಅಥವಾ ಒಬ್ಬ ಸಾಮಾನ್ಯ ವ್ಯಕ್ತಿಯಾಗಲಿ ಯೋಚಿಸ ಬೇಕಾಗಿರುವುದು ನಾವು ಹುಟ್ಟಿದ್ದು ಇಲ್ಲಿ, ನನ್ನನ್ನು ಕಾಪಾಡಿದ್ದು ಈ ದೇಶದ ಸಾರ್ವಜನಿಕ ವ್ಯವಸ್ಥೆ, ನನ್ನನ್ನು ಬೆಳೆಸಿ ಕಾಪಾಡಿ ನನಗೆ ಸಮಾಜದಲ್ಲಿ ಒಂದು ಗೊತ್ತಾದ ಸ್ಥಾನ ನೀಡಿದ್ದು ಈ ದೇಶದ ಕಾನೂನು ಕಟ್ಟುಪಾಡು. ಇಂತಹ ಸನ್ನಿವೇಶದಲ್ಲಿ ನಮ್ಮ ದೇಶಕ್ಕೆ ಸೈನಿಕರು ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಾಗೇ ನಾವು ಮಾಡಿಕೊಂಡಿದ್ದೆವೆಯೇ? ಚಾಂಪಿಯನ್ ಟ್ರೋಫಿ ಪಂದ್ಯಕ್ಕೆ ರಕ್ಷಣೆ ಕೊಟ್ಟಿದ್ದು ಆ ದೇಶದ ರಕ್ಷಣಾ ಪಡೆ, ಬಿಗ್ ಬಾಸ್ ಕಾರ್ಯಕ್ರಮಕ್ಕೆ ರಕ್ಷಣೆ ಕೊಟ್ಟಿದ್ದು ಆ ರಾಜ್ಯದ ಭದ್ರತಾ ಪಡೆ ಇವೆಲ್ಲವನ್ನೂ ನಿರ್ಭಯ ಮತ್ತು ನಿರ್ಭೀತಿಯಿಂದ ಸದಾ ನೋಡುತ್ತಿರಿ ಎಂದು ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವುದು ನಮ್ಮ ದೇಶದ ಸೈನಿಕ ವ್ಯವಸ್ಥೆ. ಆದರೆ ಅಂತಹ ಒಬ್ಬ ಸೈನಿಕ ಮೃತಪಟ್ಟಾಗ ನಾವು ಒಂದು ನೂರಾ ಇಪ್ಪತ್ತೆರಡು ಕೋಟಿ ಜನರಿದ್ದರೂ ನಾವು ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸುತ್ತಿಲ್ಲವಲ್ಲ ಇದನ್ನು ನಾವು ಆತ್ಮ ವಿಮರ್ಶೆ ಮಾಡಿಕೊಳ್ಳ ಬೇಕಾಗಿದೆ. ಜೊತೆಗೆ ಈ ದೇಶದ ಸೈನಿಕನಾಗಲಿ ಒಬ್ಬ ಸಾಮನ್ಯ ಪ್ರಜೆಯಾಗಲಿ ಮೃತಪಟ್ಟಾಗ ಅವರ ಸಂಭಂದಿಕರಿಗೆ ಆಗುವ ನೋವು ನಮ್ಮ ನೋವು ಕೂಡ ಆಗಿರಲಿ ಎನ್ನುವುದೇ ನಮ್ಮ ಕಳಕಳಿ ಏನಂತಿರಾ..?

Sunday, 21 July 2013

ಕಟ್ಟ ಕಡಕಡ ಇಲ್ಲದೇ ಹೋದರೆ ಡಿಡಾ ಡಿಡ್ ಡಾ ಇದೆಯಲ್ಲ.....!

ಧನಂಜಯ ಮಡಿಕೇರಿ                     
ಅಮ್ಮ ನಾನು ನ್ಯುಯಾರ್ಕ್ ನಗರಕ್ಕೆ ವಿಧ್ಯಾಭ್ಯಾಸ ಮಾಡುವ ಸಲುವಾಗಿ ಹೋಗುತ್ತಿದ್ದೇನೆ, ನಿನ್ನ ಸಂಪರ್ಕವಿಲ್ಲದೇ,ನಿನ್ನ ಪ್ರೀತಿ ಇಲ್ಲದೆ ಹೇಗೆ ಇರಲಿ ಅಮ್ಮ?ನಿನ್ನನ್ನು ಸಂಪರ್ಕಿಸುವ ಒಂದು ಸಂಪರ್ಕ ಮಾಧ್ಯಮವನ್ನು ನಾನು ಕಂಡು ಹಿಡಿಯುತ್ತೇನೆ ಆ ಮೂಲಕ ನಿನ್ನನ್ನು ನಾನು ಸಂಪರ್ಕ ಮಾಡುತ್ತೇನೆ ಎಂಬುದನ್ನು ತಿಳಿಸಿದವನೇ ಸ್ಯಾಮುಯಲ್  ಎಪ್.ಬಿ.ಮೊರ್ಸ್. ಎಪ್ರಿಲ್ 27, 1791 ರಿಂದ 1872 ಎಪ್ರಿಲ್ 2 ರವರೆಗೆ ಬಾಳಿ ಬದುಕಿದ ಮೊರ್ಸ್ ಜಗತ್ತು ನಿನ್ನೆವರೆಗೆ ಕಳುಹಿಸುತ್ತಿದ್ದ ಟೆಲಿಗ್ರಾಂ ಸಂದೇಶದ ಜನಕ ಎನ್ನಲೇ ಬೇಕು.  
ಆತನ ಮೊರ್ಸ್ ಕೋಡ್ ಬಳಸಿ ನಿನ್ನೆಯವರೆಗೆ ಕಳುಹಿಸುತ್ತಿದ್ದ ಟೆಲಿಗ್ರಾಂ ಸಂದೇಶ  ಮುಕ್ತ ಸಾರ್ವಜನಿಕ ಸೇವೆಯಿಂದ ನಿಂತು ಹೋಗಿರಬಹುದು, ಆದರೆ ದೇಶದ ಸೇನೆ ಮತ್ತು ಪೊಲೀಸ್ ಇಲಾಖೆಯಲ್ಲಿ ಇದು ಇನ್ನು ಜೀವಂತವಾಗಿದೆ. ಇದು ಪೋಸ್ಟ್ ಆಫೀಸ್ ನಲ್ಲಿ ಕಟ್ಟ ಕಡಕಡ ಆದರೆ ಪೊಲೀಸ್ ಮತ್ತು ಸೇನೆಯಲ್ಲಿ ಡಿಡಾ ಡಿಡ್ ಡಾ ಆಗಿ ಇನ್ನು ಚಾಲ್ತಿಯಲ್ಲಿದೆ. ಅದನ್ನು ಕೇಳುತ್ತಾ ಹೋದಂತೆ ಒಂದು ಸುಂದರ ಸಂಗೀತ ಕೇಳಿದಾಗೆ ಅನುಭವವಾಗುತ್ತೆ. ಅದೇನೆ ಇರಲಿ ಒಬ್ಬ ತಾಯಿಯ ಸಂಪರ್ಕಕ್ಕೆ ಸಾಧನೆ ಮಾಡಿದ ಒಂದು ಕೆಲಸ ಆತನ ತಲೆಮಾರಿನಿಂದ ತಲೆಮಾರಿನವರೆಗೆ ಈ ಜಗತ್ತಿನಲ್ಲಿ ಚಾಲ್ತಿಯಲ್ಲಿತ್ತು ಎಂದರೆ ಆತನ ಸಾಧನೆಗೆ ಇದಕಿಂತ ದೊಡ್ಡ ಪುರಸ್ಕಾರ ಬೇಕಿಲ್ಲ ಅನಿಸುತ್ತೆ.
 ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್ ನಗರದಿಂದ ಇಂಗ್ಲೆಂಡ್ ತನಕ ಸಮುದ್ರದಲ್ಲಿ ಕೇಬಲ್ ಹಾಕಿ ಸಂದೇಶ ಕಳುಹಿಸುವುದರೊಂದಿಗೆ ಒಂದು ಬದಿಯಿಂದ ಶಬ್ದ ತರಂಗಗಳನ್ನು ವಿದ್ಯುತ್ ತರಂಗಕ್ಕೆ ಬದಲಾಯಿಸಿ ನಂತರ ಅದು ಸ್ವೀಕೃತಿವಾಗುವಾಗ, ಮತ್ತೆ ಶಬ್ದ ತರಂಗವಾಗಿ ಪರಿವರ್ತನೆಯಾಗಿ ಸಂದೇಶ ಸ್ವಿಕೃತವಾಗುವ ಒಂದು ಮಾಧ್ಯಮ. ಈ ಮೊರ್ಸ್ ವಿದ್ಯೆಯಲ್ಲಿ ಪರಿಣತಿ ಇಲ್ಲದೆ ಸಂದೇಶವನ್ನು ತಪ್ಪಾಗಿ ಸ್ವೀಕರಿಸಿ ಅದನ್ನು ತಪ್ಪಾಗಿ ಜನರಿಗೆ ಕೊಟ್ಟು ಆ ಮೂಲಕ ಸಾಕಷ್ಟು ತಪ್ಪುಗಳಿಗೆ ಮತ್ತು ಟೀಕೆಗಳಿಗೆ ಅಂಚೆ ಇಲಾಖೆ ಒಳಗಾಗಿದೆ.ಇಂದು ಬೆಳೆಯುತ್ತಿರುವ ತಂತ್ರಜ್ಞಾನದ ಮೂಲಕ  ಅದು ಕೂಡ ಇತಿಹಾಸದ ಪುಟ ಸೇರಿದೆ. ದೇಶದ ಕಟ್ಟ ಕಡೆಯ ಸಂದೇಶ ದೂರದರ್ಶನದ ನ್ಯೂಸ್ ವಿಭಾಗದ ಅಶ್ವಿನಿ ಮಿಶ್ರಾರವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ  ಕಳುಹಿಸಿದ “success and happiness in life’’ ಸಂದೇಶ ಕೊನೆಯ ಟೆಲಿಗ್ರಾಂ ಸಂದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತದ ಮಟ್ಟಿಗೆ 1850 ರಲ್ಲಿ ಮೊದಲ ಬಾರಿಗೆ ಪ್ರಾಯೋಗಿಕ ಟೆಲಿಗ್ರಾಪ್ ಮಾರ್ಗ ಕೊಲ್ಕತಾ ಮತ್ತು ಡೈಮಂಡ್ ಹಾರ್ಬರ್ ಮಧ್ಯೆ ಪ್ರಾರಂಭವಾಯಿತು. 1851 ರಲ್ಲಿ ಬ್ರಿಟೀಶ್ ಈಸ್ಟ್ ಇಂಡಿಯ ಕಂಪನಿಯ ಬಳಕೆಗೆ ಈ ಸೇವೆಯನ್ನು ಬಳಸಲಾಯಿತು 1853 ರಲ್ಲಿ ಇದರ ಸೇವೆಗೆ ಪ್ರತ್ಯೇಕ ಇಲಾಖೆ,1854 ರಲ್ಲಿ ಭಾರತಾದ್ಯಂತ 4000 ಮೈಲು ಟೆಲಿಗ್ರಾಂ ಲೈನ್ ನಿರ್ಮಾಣ, 1885 ಭಾರತೀಯ ಟೆಲಿಗ್ರಾಪ್ ಖಾಯಿದೆ ಜಾರಿ,1902ರಲ್ಲಿ ವೈರ್ಲೆಸ್ ಸಂಪರ್ಕ ಬಳಸಿ ಬಳಕೆ, 1927 ರಲ್ಲಿ ಭಾರತ ಮತ್ತು ಬ್ರಿಟನ್ ಮಧ್ಯೆ  ರೇಡಿಯೋ ಟೆಲಿಗ್ರಾಪ್ ವ್ಯವಸ್ಥೆ. 1995 ರಲ್ಲಿ ಅಂತರ್ಜಾಲ ಭಾರತಕ್ಕೆ ಕಾಲಿಟ್ಟ ನಂತರ ಇದರ ಅಂತ್ಯದ ದಿನಕ್ಕೆ ಕ್ಷಣಗಣನೆ ಆರಂಭವಾಯಿತು. ಆದರೆ ಸೇನೆ ಮತ್ತು ಪೊಲೀಸ್ ವ್ಯವಸ್ಥೆಯಲ್ಲಿ ಇಂದಿಗೂ ಘೋರ ಅರಣ್ಯದ ಮಧ್ಯೆಯಿಂದ ತಂತಿ ರಹಿತ ಸಂದೇಶ ಕಳುಹಿಸುವಲ್ಲಿ ಈ ಮಾಧ್ಯಮ ಯಶಸ್ವಿಯಾಗಿದೆ. ಆ ಮೂಲಕ ಜಮ್ಮು ಕಾಶ್ಮೀರ ಮತ್ತು ಇತರ ಸಂಪರ್ಕವೇ ಇಲ್ಲದ ಗಡಿಗಳಲ್ಲಿ ಯಾವುದೇ ಒಂದು ಅನಾಹುತ ಮತ್ತು ಸಾವು ನೋವು ಸಂಭವಿಸಿದಾಗ ಅಲ್ಲಿಂದ sos (…---…save our souls) ಎಂಬ ಸಂದೇಶ ರವಾನೆಯಾಗುತ್ತದೆ. ಆ ಮೂಲಕ ಭದ್ರತಾ ವ್ಯವಸ್ಥೆಯಲ್ಲಿ ತಂತಿ ರಹಿತ ಸಂದೇಶವಾಗಿ ಇನ್ನು ಚಾಲ್ತಿಯಲ್ಲಿದೆ. ಇದರಲ್ಲಿ ಸಂಪೂರ್ಣ A ಯಿಂದ  Z,ವರೆಗೆ ಮತ್ತು  1 ರಿಂದ 9 ವರೆಗೆ ಜೊತೆಗೆ ಎಲ್ಲಾ ಸಂಕೇತಗಳಿಗೆ ಇದರಲ್ಲಿ ಒಂದು ಚುಕ್ಕಿ ಮತ್ತು ಒಂದು ಅಡ್ಡ ಗೆರೆಯ ಮೂಲಕ ಗುರುತಿಸಲಾಗಿದೆ ಅಂತಾರಾಷ್ಟ್ರೀಯ ಭಾಷೆಯಲ್ಲಿ ಇದಕ್ಕೆ ಕ್ರಮವಾಗಿ.di –daa ಎಂದು ಕರೆಯಲಾಗುತ್ತದೆ. ಇಂದು 160 ವರ್ಷಗಳ ಇತಿಹಾಸವಿರುವ ಸಂದೇಶ ಪ್ರಕಾರ ಸಾರ್ವಜನಿಕ ಸೇವೆಯಿಂದ ಮರೆಗೆ ಸರಿಯುತ್ತಿರಬಹುದು, ಆದರೆ ಸಾರ್ವಜನಿಕರಿಂದ ಅಲ್ಲ, ಇಂದು ಸ್ಯಾಮುಯಲ್ ಮೊರ್ಸ್ ನಮ್ಮಿಂದ ಮರೆಗೆ ಸರಿದಿರಬಹುದು ಆದರೆ ಆತನ ಮೋರ್ಸ್ ಕೋಡ್ ಅಲ್ಲಾ..