Saturday 23 March 2013

ಬದುಕಿನ ಹೋರಾಟದ ನಡುವೆ ಸಾವನ್ನ ಸ್ವಾಗತಿಸಿದವ ರಾಂಡಿ ಪಾಶ್‌...

ಧನಂಜಯ ಮಡಿಕೇರಿ















ಒಬ್ಬ ಶಿಕ್ಷಕನನ್ನು ಎಲ್ಲಾ ವಿದ್ಯಾರ್ಥಿಗಳು ನೆನಪಿಸಿಕೊಳ್ಳುವುದಕ್ಕೆ ಸಾದ್ಯವಿಲ್ಲ, ಸಾಧ್ಯವಿದ್ದರೂ ಜೀವನ ಪರ್ಯ್ಯಂತ ನೆನಪು ಇಟ್ಟುಕೊಳ್ಳುವವರು ಕೆಲವೇ ಮಂದಿ. ಅಂತೆಯೇ ಸಮ್ಮೇಳನಗಳು ಕೂಡ ಒಂದಷ್ಟು ದಿವಸ ಕಳೆದ ನಂತರ ಸಾಕಷ್ಟು ಸಮ್ಮೇಳನಗಳು ನಡೆದಿತ್ತು ಅಂತ ನೆನೆಸಿಕೊಳ್ಳುವ ಜನ ಕೂಡ ಇದ್ದೇ ಇರುತ್ತಾರೆ. ಮಾತ್ರವಲ್ಲ ಇಂತಹ ಸಮಾರಂಭಗಳನ್ನು ಜನ ನೋಡುವ ದೃಷ್ಟಿಕೋನ ಮಾತ್ರ ಬೇರೆ ಬೇರೆಯಾಗಿರುತ್ತದೆ. ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಗಮನ ಸೆಳೆದದ್ದು ಪುಸ್ತಕ ಮಳಿಗೆಗಳು. ಸಾಹಿತ್ಯ ಪರ ಪುಸ್ತಕಗಳಿಗೆ ಬೆಂಗಳೂರು,ಮಂಗಳೂರು,ಮೈಸೂರು ಎಂದು  ಕೊಡಗಿನಲ್ಲಿ  ಅಲೆಯುವ ಜನರಿದ್ದಾರೆ ಜೊತಗೆ ಆನ್ ಲೈನ್ ಮೂಲಕ ಖರೀದಿಸುವ ಜನರು ಇದ್ದಾರೆ. ಆದರೆ ಅದು ಹಣವಿದ್ದ ಮಂದಿಗೆ ಮಾತ್ರ ಸಾಧ್ಯ. ಸಾಹಿತ್ಯ ಸಮ್ಮೇಳನಗಳು ಇಂತಹ ಹಸಿವನ್ನು ಕಡಿಮೆ ಮಾಡಿ ಓದಿನ ಹಸಿವು ಹೆಚ್ಚಿಸುವ ಕಡೆ ಗಮನ ನೀಡುತ್ತದೆ.
       ಅಂತೆಯೇ ಕೊಡಗು ಜಿಲ್ಲಾ ೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆ ನನಗೆ ಒಂದು ಒಳ್ಳೆಯ ಪುಸ್ತಕ ಖರೀದಿಗೆ ದಾರಿ ಮಾಡಿತು. ನನ್ನಂತೆಯ ಅದೆಷ್ಟು ಜನರು ಪುಸ್ತಕ ಪ್ರೀತಿಸುವ ಜನರು ಇರಲ್ಲ. ಅದೇನೇ ಇರಲಿ ಬಹಳ ಮುಖ್ಯವಾಗಿ ಮಕ್ಕಳಿಗೆ ಅದರ ಅವಶ್ಯಕತೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ. ಅಂತೆಯೇ ಕೊಡಗು ಜಿಲ್ಲಾ ೯ನೆ ಸಾಹಿತ್ಯ ಸಮ್ಮೇಳನದಲ್ಲಿ ನಾನು ಖರೀದಿಸಿದ ಪುಸ್ತಕ “ ದಿ.ಲಾಸ್ಟ್ ಲೆಕ್ಚರ್” ಇದು ಅಮೇರಿಕದ ಕಂಪ್ಯೂಟರ್ ವಿಜ್ಞಾನಿ ರಾಂಡಿ ಪಾಶ್‌ ತನ್ನ ಹುಟ್ಟು, ಬಾಲ್ಯದ ಮತ್ತು ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ದಾಖಲಿಸಿದ ಪುಸ್ತಕ. ಇದನ್ನು ನಮ್ಮ ಮೈಸೂರಿನ ಹುಡುಗ ಉಮೇಶ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ ಜೊತೆಗೆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ ಜಂಟಿಯಾಗಿ ನೀಡುವ ಅರಳು ಸಾಹಿತ್ಯ ಪ್ರಶಸ್ತಿ ಕೂಡ ಬಂದಿದೆ. ರಾಂಡಿ ಪಾಶ್‌   ಅಮೇರಿಕದ ದಂತ ಕಥೆ ಡಾ. ರಾಂಡಿ ಪಾಶ್‌ ಅಮೇರಿಕದ ಕಾರ್ನಿಗ್ ಮೆಲನ್ ವಿಶ್ವವಿದ್ಯಾಲಯದಲ್ಲಿ ೧೯೮೮ ರಿಂದ ೧೯೯೭ರವರೆಗೆ ಕಂಪ್ಯೂಟರ್ ಸೈನ್ಸಿನ ಪ್ರೊಫೆಸರ್, ವಿಜ್ಞಾನಿಯಾಗಿ, ಕೆಲಸ ಮಾಡಿದ್ದಾರೆ. ಅನಂತರ ಗೂಗಲ್, ಅಡೋಬ್ ಮುಂತಾದ ಕಡೆ ಕೆಲಸ ಮಾಡಿದ್ದಾರೆ ಜಗತ್ತಿನ ಮಹಾನ್ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಇವರು ಮಡದಿ ಜೈ,  ಮಕ್ಕಳಾದ ಡೈಲಾನ್,ಲೋಗನ್, ಮತ್ತು ಚೋಲೆ ಎಂಬ ಮೂವರು ಹೆಣ್ಣು ಮಕ್ಕಳ ತಂದೆ. ತನ್ನ ೩೭ನೆ ವಯಸ್ಸಿಗೆ ಮದುವೆಯಾಗಿ ತನ್ನ ೪೭ ವರ್ಷಕ್ಕೆ ಕ್ಯಾನ್ಸರ್ ಎಂಬ ಹೆಮ್ಮಾರಿಗೆ ಬಲಿಯಾಗಿ ತನ್ನ ಬದುಕನ್ನು ಕಳೆದುಕೊಂಡವ ರಾಂಡಿ ಪಾಶ್‌. ಸಾವು ತನ್ನ ಕಣ್ಣ ಮುಂದೆ ಸುತ್ತುತ್ತಿದ್ದರು ಬದುಕಿನಲ್ಲಿ ವಿಜ್ಞಾನಿ,ಗಗನ ಯಾತ್ರಿ, ಐ.ಪಿ.ಎಸ್ ಅಧಿಕಾರಿ ಆದವನ ಸಾಹಸದ ಚಿತ್ರಣ ದಿ. ಲಾಸ್ಟ್ ಲೆಕ್ಚರ್.
       ಹಣವಿದ್ದರೆ ಬೇರೆಯವರಿಗೆ ತೊಂದರೆ ಮಾಡಬಹುದು, ಬದುಕನ್ನು ಕೊಂಡು ಕೊಳ್ಳಬಹುದು, ಏನು ಬೇಕಾದರೂ ಸಾಧಿಸಬಹುದು ಎಂದು ಕೆಟ್ಟ ಯೋಚನೆ ಮಾಡುವವರು ಈ ಪುಸ್ತಕ ಓದುವ ಅವಶ್ಯಕತೆ ಇದೆ. ಏಕೆಂದರೆ ರಾಂಡಿ ಪಾಶ್‌ ಹುಟ್ಟು ಶ್ರೀಮಂತ ಮೂರು ತಲೆಮಾರಿಗೆ ಬೇಕಾಗುವಷ್ಟು ಬ್ಯಾಂಕ್ ಬ್ಯಾಲನ್ಸ್ ಇತ್ತು. ಆದರು ಅದನ್ನು ದುಂದುವೆಚ್ಚ ಮಾಡಲಿಲ್ಲ. ಸಣ್ಣದೊಂದು ಬಿ.ಪಿ.ಸುಗರ್ ಬಂದರೆ ತಲೆ ಮೇಲೆ ಕೈ ಇಟ್ಟು ಪ್ರಪಂಚವೇ ಮುಳುಗಿ ಹೋಯಿತು ಎಂದು ಕುಳಿತುಕೊಳ್ಳುವ ತನ್ನ ಬದುಕಿಗೆ ಇತಿಶ್ರೀ ಹಾಡಿಕೊಳ್ಳುವ ಜನರನ್ನು ನಾವು ನೋಡುತ್ತಿದ್ದೇವೆ.ಅಂತಹ ಎಲ್ಲಾ ನೋವುಂಡು ದಿನ ಕಳೆಯುತ್ತಿರುವ ಮಂದಿಗೆ ಈ ಪುಸ್ತಕ ಸಂಜೀವಿನಿ ಆಗಬಲ್ಲದು.
       ಇಲ್ಲಿ ಗಮನಿಸ ಬೇಕಾದ ಮುಖ್ಯ ವಿಷಯವೆಂದರೆ ರಾಂಡಿ ಪಾಶ್‌ಗೆ ಹಣಕ್ಕೆ ಏನು ಸಮಸ್ಯೆ ಇರಲಿಲ್ಲ. ಬಾಲ್ಟಿಮೋರ್ ನ ಜಾನ್ಸ್ ಹಾಪ್ ಕಿನ್ಸ್ ಆಸ್ಪತ್ರೆಯ ಹೆಸರಾಂತ ವೈದ್ಯ ಡಾ. ಆಲ್ ಫ್ರೆಡ್ ಕ್ವಿನಾನ್ಸ್ ತನ್ನನ ಉಳಿಸಿ ಬಿಡುತ್ತಾನೆ ಎಂಬ ನಂಬಿಕೆಯು ಇತ್ತು, ಆದರೆ  I am sorry dear, cancer is in final stage ಅಂದನಲ್ಲ ಆಗ ಒಂದು ಸರಳ ಸತ್ಯ ರಾಂಡಿ ಪಾಶ್‌ಗೆ ಅರ್ಥವಾಗಿ ಬಿಟ್ಟಿತ್ತು. ಬದುಕಿನಲ್ಲಿ ಅಧಿಕಾರ ಶಾಯಿಯ ವಿರುದ್ದ, ಗೆಳೆಯರ ವಿರುದ್ದ, ವ್ಯವಸ್ಥೆಯ ವಿರುದ್ದ ಹೋರಾಡಿ ಗೆಲ್ಲಬಹುದೇ ಹೊರತು ಸಾವಿನ ವಿರುದ್ದ ಅಲ್ಲ. ಪುಸ್ತಕಕ್ಕೆ ಮುನ್ನುಡಿ ಬರೆದ ವಿಶ್ವೇಶ್ವರ ಭಟ್ ರು ಹೀಗೆ ಹೇಳುತ್ತಾರೆ.
       ಸಾವಿನ ಬಗ್ಗೆ ಮಾತನಾಡುವುದು ಬರೆಯುವುದು ಸುಲಭ, ಸಾವು ಹೀಗೆಯೇ ಬರಲಿ ಎಂದು ಆಸೆ ಪಡುವುದು ಸುಲಭ, ಅಥವಾ ನನ್ನ ಸಾವು ಈಗೆಯೇ ಬರುತ್ತೆ ಎಂದು ಕಲ್ಪಿಸಿಕೊಳ್ಳುವುದು ಇನ್ನು ಸುಲಭ,ತನ್ನ ಪ್ರೀತಿಯ ಮಡದಿಗೆ ‘’ ನೋಡು ಇಂದು ನಿನ್ನ ಹುಟ್ಟು ಹಬ್ಬ ಅಲ್ಲವೇ? ನಿನ್ನ ಹುಟ್ಟು ಹಬ್ಬವನ್ನು ನನ್ನ ಜೊತೆ ನೀನು ಆಚರಿಸಿಕೊಳ್ಳುವುದು ಇದೆ ಕೊನೆ. ಮುಂದಿನ ನಿನ್ನ ಹುಟ್ಟಿದ ಹಬ್ಬಕ್ಕೆ ನಾನು ಇರಲ್ಲ ಎಂದು ಮಡದಿಯ ಹಣೆಗೆ ಹೂ ಮುತ್ತನಿಟ್ಟು Life is beautiful, be happy always ಎಂದು ಹೇಳುವುದು ಇದೆಯಲ್ಲ ಅದು ಕಷ್ಟದ ಕೆಲಸ.
ಮಾತ್ರವಲ್ಲ ಹಾಗೇ ಹೇಳಬೇಕಾದರೆ ಒಂದು ಗಟ್ಟಿ ಗುಂಡಿಗೆಯು ಬೇಕಾಗುತ್ತದೆ. ರಾಂಡಿ ಪಾಶ್‌ ಅಂತ ಆತ್ಮವಿಶ್ವಾಸವನ್ನು ಸಾಧಿಸಿದ ಸಾಧಕ. ಪುಸ್ತಕವನ್ನು ಓದಿದ ಮಂದಿಗೂ ಅದು ಬಂದರೆ ಪುಸ್ತಕದ ಅನುವಾದಕನ ಶ್ರಮ ಸಾರ್ಥಕ.