Saturday 13 August 2011

ಕೊಡಗಿನ ಸುತ ಕಾದಂಬರಿಗಾರ ಭಾರತೀಸುತ......!

ಕೆ.ಎಸ್.ಧನಂಜಯ,ಮಡಿಕೇರಿ




ಚಿತ್ರ೧.ಭಾರತೀಸುತ. ಚಿತ್ರ ೨.(ಕಯ್ಯಾರ ಕಿಞ್ಞಣ್ಣ ರೈ ಕುಳಿತವರು, ನಿಂತವರು, ರಾಮಚಂದ್ರ, ಶ್ರೀ ಎನ್ ಮಹಾಭಲೇಶ್ವರ ಭಟ್, ಭಾರತೀಸುತರ ಶಿಷ್ಯರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ.ಪಿ.ರಮೇಶ್, ಕಾರ್ಯದರ್ಶಿ ಬಿ.ಎ.ಷಂಶುದ್ದೀನ್, ಮತ್ತು ಭಾರತೀಸುತರ ಪತ್ನಿ ಶ್ರೀಮತಿ ನಾಗವೇಣಿ ಭಾರತೀಸುತ.)

ಭಾರತೀಸುತ ಎನ್ನುವ ಹೆಸರನ್ನು ಕನ್ನಡ ಸಾಹಿತ್ಯ ಲೋಕ ಸಂಪೂರ್ಣ ಮರೆತು ಹೋಗಿದೆ ಎಂದರೆ ಅದು ಉತ್ಪ್ರೇಕ್ಷೆಯಲ್ಲ ಎಂದೆ ನನ್ನ ಭಾವನೆ. ಎಸ್ ಆರ್ ನಾರಯುಣರಾವ್ ಸಂಪೂರ್ಣ ಮರೆಗೆ ಸರಿಯುತ್ತಿರುವ ಹೆಸರು. ಬಹುಶ: ಬಯಲು ದಾರಿ, ಗಿರಿಕನ್ಯೆ, ಹುಲಿ ಹಾಲಿನ ಮೇವು,ಮಾತ್ರವಲ್ಲ ಎಡ ಕಲ್ಲು ಗುಡ್ಡದ ಮೇಲೆ ಇವು ಚಲನ ಚಿತ್ರವಾಗಿ ಎಲ್ಲರಿಗೂ ಗೊತ್ತು ಆದರೆ ಅದರ ಮೂಲ ಲೇಖಕರನ್ನು ಮಾತ್ರ ಕೇಳಬೇಡಿ ಎನ್ನುವವರು ನಮ್ಮ ಮದ್ಯೆ ಕೂಡ ಇದ್ದಾರೆ. ಚಿತ್ರ ಸೂಪರ್ ಆಗಿದೆ ಅಷ್ಟೆ ಬೇರೇನು ಕೇಳಬೇಡಿ.     ಭಾರತಿ ಸುತ ಮೂಲತಃ ಕಾದಂಬರಿಕಾರ ಅಂತ ಹೇಳುತ್ತಿರಾ ಅಥವಾ ಕವಿ ಎಂದು ಹೇಳುತ್ತಿರಾ , ಹೋರಾಟಗಾರ ಎನ್ನುತ್ತೀರಾ ? ಇದು ನಿಮಗೆ ಬಿಟ್ಟ ವಿಷಯ ಆದರೆ ನಾನು ಮಾತ್ರ ಹೋರಾಟಗಾರನ ಸಾಹಿತ್ಯ ಅಂತ ಉಲ್ಲೇಖಿಸ ಬಲ್ಲೆ.
ಇರುಲಿನಲ್ಲಿ ದಾರಿಗಾಣದೆ
   ನೊಂದಿಹೆ ನಾನು
ಕಲ್ಮುಳ್ಳುಗಳನ್ನು ತುಳಿದಿಹೆನು
ಅಂತ್ಯವಿಲ್ಲದ ಕಡಲಿನಂತೆ
   ಹರಡಿಹುದು
ಭೀಕರ ಯಾಮಿನಿಯು....
ಸಂಗಡಿಗರೆನಗಿಲ್ಲ 
     ದಾರಿಯಲ್ಲಿ
ಎಕಾಂಗಿ ನಾನಾಗಿ ಇಡುತಲಿಹೆನು ಹೆಜ್ಜೆಗಳನ್ನು
 ಮುಂದೆ.....( ಕವನ ಅಪೂರ್ಣ ಮಾಡಿದ್ದೇನೆ.)
     ಇದು ಕವಿಯಾಗದ ಭಾರತೀಸುತರ ಒಂದು ಕವನದ ಸಾಲು  ಕವಿತೆ ಓದಿದಾಗ ಅವರ ಸಂಪೂರ್ಣ ಚಿತ್ರವನ್ನು ನೀಡದೆ ಹೋದರು ಇವರನ್ನು ತದೇಕ ಚಿತ್ತದಿಂದ ಗಮನಿಸುವಂತೆ ಮಾಡುವಲ್ಲಿ  ಕವನ ಯಶಸ್ಸಾಗುತ್ತದೆ. ಭಾರತೀಸುತ ಹುಟ್ಟು ಹೋರಾಟಗಾರ ಅದು ಅವರ ಕಾದಂಬರಿಗಳಲ್ಲಿ ಸಿನಿಮಾಗಳಲ್ಲಿ ಎದ್ದು ಕಾಣುವ ಅಂಶ. ಮಾನವ ಜನಾಂಗಕ್ಕೆ ಕಳಂಕವಾಗಿದ್ದ  ಅಸ್ಪೃಶ್ಯತೆಯು ಸೇರಿದಂತೆ  ಮೌಡ್ಯಗಳ ವಿರುದ್ದದ ಸಾಹಿತ್ಯ ರಚನೆಯ ಅಗತ್ಯವನ್ನು ಅವರು ಅರ್ಥ ಮಾಡಿಕೊಂಡಿದ್ದರು. ಕೇವಲ 61 ವರ್ಷಗಳ ತಮ್ಮ ಬಾಳ್ವೆಯಲ್ಲಿ ಭಾರತೀಸುತರು 64 ಕೃತಿಗಳನ್ನು ಬರೆದಿದ್ದು ಅವುಗಳಲ್ಲಿ 32 ಕಾದಂಬರಿಗಳು, 8 ಕಥಾ ಸಂಕಲನಗಳು, ವಯಸ್ಕರ ಶಿಕ್ಷಣದ ಬಗ್ಗೆ 3 ಕೃತಿಗಳು ಹಾಗೂ ಮಕ್ಕಳಿಗಾಗಿ  21 ಪುಸ್ತಕಗಳನ್ನು. ಇನ್ನು ಕೆಲವು ಹಸ್ತ ಪ್ರತಿಯಲ್ಲಿದ್ದು, ಪುಸ್ತಕ ರೂಪದಲ್ಲಿ ಬರಬೇಕಾಗಿದೆ. ಇಂತಹ ಮಹಾನ್ ಸಾಹಿತಿಯನ್ನು ಕನ್ನಡ ಸಾರಸತ್ವ ಲೋಕ ಮರೆತಿರುವು ದುರಂತವೆ ಸರಿ. ಆದರೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ್ನು ಅವರ ಇಬ್ಬರು ಶಿಷ್ಯಂದಿರು ಮುನ್ನಡೆಸುತ್ತಿದ್ದಾರೆ, ಅಧ್ಯಕ್ಷರಾದ ಶ್ರೀ.ಟಿ.ಪಿ.ರಮೇಶ್ ಮತ್ತು ಪ್ರಧಾನ ಕಾರ್ಯದರ್ಶಿಯಾದ ಶ್ರೀ.ಬಿ.ಎ.ಷಂಶುದ್ದೀನ್ ಇವರ ಮುಂದಾಳತ್ವದಲ್ಲಿ ಎರಡು ಕಾರ್ಯಕ್ರಮ ದೊಡ್ಡ ಮಟ್ಟಿಗೆ ನಡೆದಿದೆ. ಒಂದು ಕನ್ನಡ ಸಾಹಿತ್ಯ ಪರಿಷತ್ ನಿಂದ ಸಂಸ್ಮರಣೆ ಕಾರ್ಯಕ್ರಮವಾದರೆ ಮತ್ತೊಂದು ಸಾಹಿತ್ಯ ಅಕಾಡೆಮಿ ಸಂಯೋಗದಲ್ಲಿ ನಡೆದ ಭಾರತೀಸುತರ ಸಾಹಿತ್ಯದಲ್ಲಿ ವಿಮರ್ಶೆ ಈಗೆ ಎರಡು ಕಾರ್ಯಕ್ರಮಗಳನ್ನು  ಜಿಲ್ಲೆ ಸಂಯೋಜಿಸಿ ಅವರನ್ನು ಸಾಹಿತ್ಯ ಲೋಕಕ್ಕೆ ನೆನಪಿಸುವಂತ ಕೆಲಸ ಮಾಡಿದೆ ಜೊತೆಗೆ ಮಡಿಕೇರಿ ಹತ್ತಿರದ ಭಾರತೀಸುತ ವಾಸವಾಗಿದ್ದ  ಬಿಳಿಗೇರಿ ಗ್ರಾಮಕ್ಕೆ ಹೋಗುವ ರಸ್ತೆಗೆ ಭಾರತಿಸುತ ರಸ್ತೆ ಎಂದು ನಾಮಕರಣವನ್ನು ಕೂಡ ಪರಿಷತ್ತು ಮಾಡಿದೆ. ಭಾರತೀಸುತ  ಸಾಹಿತ್ಯದ ಸ್ಮರಣೆ ಕೇವಲ  ಜಿಲ್ಲೆಯ ಕೆಲಸ ಮಾತ್ರವಲ್ಲ ಸಾಹಿತ್ಯ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸುವವರ ಕೆಲಸವು ಆಗಬೇಕು.ಎಕೆಂದರೆ ಭಾರತೀಸುತರು ಕನ್ನಡ ಸಾರಸತ್ವ ಲೋಕದ ಪ್ರತಿಭಾವಂತ ಸಾಹಿತಿ.
    ದಿನಾಂಕ 15.5.1915  ರಂದು ಜನ್ಮ ತಾಳಿದ  ನಾರಯಣರಾವ್ ಹುಟ್ಟಿದ್ದು ಮಡಿಕೇರಿ ಸಮೀಪದ ಬಿಳಿಗಿರಿಯಲ್ಲಿ. ಪಂಜೆ ಮಂಗೇಶರಾಯರ ಶಿಷ್ಯರಾದ ಇವರು ವಿಧ್ಯಾರ್ಥಿಯಾಗಿದ್ಧಾಗಲೆ ತಮ್ಮ ಸಾಹಿತ್ಯದ  ಗೀಳು ಬೆಳೆಸಿಕೊಂಡಿದ್ದರು ಮೊದಲು ಬರೆದ ಕವನವನ್ನು ಪಂಜೆಯವರಲ್ಲಿ ತೋರಿಸಿ  ಪ್ರಸಂಸಿಲ್ಪಟ್ಟ ಭಾರತೀಸುತರು ಬಹುಶಃ ಹಿಂದಿರುಗಿ ನೋಡಲೇ ಇಲ್ಲಾ ಅನಿಸುತ್ತೆ.
     ವಿಧ್ಯಾರ್ಥಿ ಜೀವನದಲ್ಲಿ ತಂದೆಯಿಲ್ಲದೆ ತಬ್ಬಲಿಯಾಗಿ ಚಿಕ್ಕಪ್ಪನ ಆಸರೆಯಲ್ಲಿ ಬದುಕುತ್ತಿದ್ದ ನಾರಯಣರಾಯರನ್ನು ಸೆಳೆದ್ದದ್ದು ಗಾಂಧೀಜಿಯವರ ಸ್ವಾತಂತ್ರ ಚಳುವಳಿ ಇಂತಹ ಚಳುವಳಿಯಲ್ಲಿ ಸೇರ್ಪಡೆಯಾದ ಇವರು ಶಾಲೆಯಿಂದ ಅಮಾನತ್ತಿನ ಶಿಕ್ಷೆಗೆ ಒಳಗಾಗಿ  ಜೈಲುವಾಸವನ್ನು ಅನುಭವಿಸುತ್ತಾರೆ. ತನ್ನ ಸ್ವಂತ ಬದುಕಿನ ಯೋಚನೆ ಮಾಡದ ಭಾರತೀಸುತರು ಬ್ರೀಟಿಷರ ವಿರುದ್ದ ಘೋಷನೆ ಕೂಗಿ ಛಡಿ ಏಟಿನ ಶಿಕ್ಷೆಗೂ ಗುರಿಯಾಗುತ್ತಾರೆ. ಪರಿಣಾಮ ಮನೆಯಲ್ಲೂ ವಿರೋಧ ಕಟ್ಟಿಕೊಂಡು ಮನೆಯ ಬಾಗಿಲು ಇವರ ಪಾಲಿಗೆ ಮುಚ್ಚಿದಾಗ  ಊರಿನಲ್ಲಿ ಇದ್ದು ಮಾಡುವುದಾದರು ಏನು? ಎಂಬ ನಿರ್ಧಾರಕ್ಕೆ ಬಂದು ಕೇರಳ ರಾಜ್ಯದ ವಯನಾಡಿಗೆ ಹೋಗಿ ಅಲ್ಲಿ ಕೂಲಿ ಕೆಲಸ ಮಾಡಿ ಬದುಕನ್ನು ಸಾಗಿಸುತ್ತಿರುತ್ತಾರೆ ಸ್ವಾತಂತ್ರ ಚಳುವಳಿಯಲ್ಲಿ ಸಕ್ರೀಯರಾಗಿದ್ದ ಅವರನ್ನು ಆಂಗ್ಲ ಸರ್ಕಾರ 1932 ರಲ್ಲಿ ಸೆರೆಮೆನೆಗೆ ಕಳುಹಿಸುತ್ತದೆ ಅಲ್ಲಿ ಇವರಿಗೆ ಹಿರಿಯ ಕಮ್ಯನಿಷ್ಟ್ ಮುಖಂಡರಾದ ನಂಬೂದರಿಪಾಡ್ ಮತ್ತು ಎ.ಕೆ ಗೋಪಾಲನ್ ಎಂಬ ಎಡಪಂಥಿಯ ವಿಚಾರ ಧಾರೆಯ ನಾಯಕರ ಸಹವಾಸ ಸಿಗುತ್ತದೆ. ಹೀಗೆ ಮಂದುವರಿದ್ದು ಕೊಡಗಿನ ಕಣಿವೆ ಗ್ರಾಮದ ರಾಮಾಸ್ವಾಮಿ ಕಣಿವೆಯಲ್ಲಿ ಮತ್ತು ಮಡಿಕೇರಿಯಲ್ಲಿ ಅಧ್ಯಪಕರಾಗಿ ದುಡಿಯುತ್ತಾರೆ.
     ಭಾರತೀಸುತರು ಯಾಕೆ ಪ್ರಚಾರಕ್ಕೆ ಬರಲಿಲ್ಲ ಎನ್ನುವುದಕ್ಕೆ '' ಬ್ರಹ್ಮಗಿರಿ'' ( ಅವರ ಮಿತ್ರರಾದ ಎನ್ ಮಹಾಭಲೇಶ್ವರ ಭಟ್, ದಿ!!.ಕೆ ಸಚ್ಚಿದಾನಂದಯ್ಯ ಮತ್ತು ಎಲ್ ಆರ್ ಭಟ್ ರವರ ಸಂಪಾದಕಕತ್ವದಲ್ಲಿ ಮೂಡಿ ಬಂದ ಅಭಿನಂದನಾ ಗ್ರಂಥ) ಹಿರಿಯ ಸಾಹಿತಿ ಪ್ರೊ. ದೇಜೆಗೌರವರು ಅವರು ಮಠ ಕಟ್ಟಿದವರಲ್ಲ, ಪಂಥ ನಿರ್ಮಿಸಿದವರಲ್ಲ,ಸವಾಲೆಸದವರಲ್ಲ, ಶಿಷ್ಯರನ್ನು ಛೂ ಬಿಟ್ಟವರಲ್ಲ, ರಾಜಕೀಯಮಾಡಿದವರಲ್ಲ, ಆದ್ದರಿಂದ ಅವರು ಲೋಕದ ಗಮನ ಸೆಳೆಯಲಿಲ್ಲ ಅವರು ಸೃಷ್ಟಿಸಿರುವ ಸಾಹಿತ್ಯ ಗುಣಮೌಲ್ಯ ಪ್ರಮಾಣಗಳಲ್ಲಿ ಹಿರಿದಾದ್ದಾದರು ಅದಕ್ಕನುಗುಣವಾಗಿ ಪ್ರಾಶಸ್ತ್ಯ ಅವರ ಜೀವಿತ ಸಮಯದಲ್ಲಿ ದೊರೆಯದಿದ್ದದ್ದು ಪ್ರಾಜ್ಞರ ಮನಸ್ಸಿನಲ್ಲಿ ಕಳವಳ ಉಂಟುಮಾಡುವಂತ ವಿಚಾರವಾಗಿದೆ. ಇದು  ಕಾಲದಲ್ಲೆ ಭಾರತೀಸುತರಿಗೆ ದೊರೆತ ದೊಡ್ಡ ಪ್ರಶಸ್ತಿ. ಅದು ಇವರೊಬ್ಬರಿಂದ ಮಾತ್ರವಲ್ಲ ಹಾ.ಮ.ನಾಯಕ್, ಕಾವ್ಯನಂದ,ಕಯ್ಯಾರ ಕಿಞ್ಞಣ್ಣ ರೈ,ಜಿ.ಟಿ ನಾರಯಣರಾವ್, ಡಾ!! ಚಿದಾನಂದ ಮೂರ್ತಿ, ಪ್ರೊ.ಅಮೃತ ಸೋಮೇಶ್ವರ, ಡಾ. ಕಮಲಾ ಹಂಪನಾ, ಮುಂತಾದವರ ಅಭಿಪ್ರಾಯವು ಬಹುತೇಕ ಇದೆ ಆಗಿದೆ.  ಕೃತಿ ಭಾರತೀಸುತರ ವೈಯುಕ್ತಿತ ಬದುಕು,ಹೋರಾಟ,ವೃತ್ತಿ, ಬಡವರ ಬಗ್ಗೆ ಕಾಳಜಿ ಈಗೆ ಎಲ್ಲಾ ಮುಖವನ್ನು ಅನಾವರಣ ಮಾಡುತ್ತದೆ.
   ಭಾರತೀಸುತರ ಕಾದಂಬರಿಯಲ್ಲಿ ಹೋರಾಟದ ಛಾಯೆ ಮತ್ತು ಬಹಳಷ್ಟು ಕಾದಂಬರಿಗಳಲ್ಲಿ ಕೊಡಗು ಮತ್ತು ಕೇರಳ ಛಾಯೆ ಹೆಚ್ಚಾಗಿ ಇದೆ. ತಮ್ಮ ಸಾಹಿತ್ಯದಲ್ಲಿ ಅವರು ಎಂದಿಗೂ ದುಡಿಯುವ ಜನರ ಪರವಾಗಿಯೆ ಇದ್ದರು ಎಂಬುವದು ಎದ್ದು ಕಾಣುವ ಅಂಶ.
     ಭಾರತಿಸುತರ ಕಾದಂಬರಿಯದ  ಗಿರಿಕನ್ಯೆಯು  ಪಣಿಯರ ಜೀವನವನ್ನು ಒಳಗೊಂಡಿದರೆ, ಬಯಲುದಾರಿ ಶ್ರೀಮಂತ ಬದುಕಿನ ಕುಟುಂಬದ  ಪ್ರೇಮ ಜೀವನವನ್ನು ಸಾರಿದರೆ, ಹುಲಿ ಹಾಲಿನ ಮೇವು ಕೊಡವರ ಜೀವನ ಪದ್ದತಿಯನ್ನು ಸಾರುತ್ತದೆ ಹಾಗೇಯೆ ಎಡ ಕಲ್ಲು ಗುಡ್ಡದ ಮೇಲೆ ಒಂದು ತ್ರಿಕೋಣ ಪ್ರೇಮ ಕಥನ. ಭಾರತಿಸುತರ ಸಾಮಾಜಿಕ, ಐತಿಹಾಸಿಕ ಕಾದಂಬರಿಗಳ ನಡುವೆ "ಕಾಲಯಾನ" ಎಂಬ ವೈಜ್ಞಾನಿಕ ಕಾದಂಬರಿಯೂಯನ್ನು ಕೂಡ ಬರೆದ್ದಿದ್ದಾರೆ  ಬೃಹತ್ ಕಾದಂಬರಿಗಳ ನಡುವೆ ಭಾರತಿಸುತರ ಮಿನಿ ಕಾದಂಬರಿಗಳು ಯಶಸ್ವಿಯಾಗಿವೆ. ಪೆಟ್ರೇಟಿಯಾ, ಕಂದನನ್ನು ಕದ್ದವನು, ಇಲಿ ಮತ್ತು ಹಾವು  ಮೂರು ಕೃತಿಗಳು ಭಾರತಿಸುತರ ವೈಷಿಷ್ಠವಾದ ಕೊಡುಗೆಗಳು. ಜೊತೆಗೆ ತಲೆ ತಿರುಕ, ಯೋಧ, ದೊರೆ ಮಗಳು, ಮತ್ತು ಇರಾನಿನ ವೀರರು, ಇವು ಅನುವಾದ ಕೃತಿಗಳು.ಕಾದಂಬರಿ ಹಾಗೂ ಕಥಾ ಕ್ಷೇತ್ರಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿರು ಭಾರತೀಸುತರು ಮಕ್ಕಳ ಸಾಹಿತ್ಯದಲ್ಲೂ ಹಿಂದೆ ಬಿದ್ದಿಲ್ಲ ಎನ್ನುವುದು ಅಷ್ಟೇ ಮುಖ್ಯ. ಕಳ್ಳರ ಫಜೀತಿ, ಮಂತ್ರದ ಕೊಳಲು,ಹೋತನ ಬೆನ್ನೇರಿದ ತೋಳ,ಕಾಣೆಯಾದ ಕಬ್ಬಿಣರಾಯ,ಹನ್ನೊಂದು ಹಂಸಗಳು,ಹುಲಿಗಳ ದಿಬ್ಬಣ,ಸಿಗೋರ,ಕಾವೇರಿ,ನಳದಮಯಂತಿ ಇತ್ಯಾದಿ. ಜೊತೆಗೆ ವಯಸ್ಕರ ಸಾಹಿತ್ಯಕ್ಕು ಭಾರತೀಸುತರ ಕೊಡುಯನ್ನು ಇಲ್ಲಿ ಉಲ್ಲೇಖಿಸಲೇ ಬೇಕು ಸೊಳ್ಳೆ ಹರಡುವ ರೋಗಗಳು, ಡಾ.ಜಾಕೀರ್ ಹುಸೇನ್ ಮತ್ತು ಮಲ್ಲಿಗೆ ಹಳ್ಳಿಯ ಜಾಣರು ಇವೆ  ಕೃತಿಗಳು. ಈಗೇ ಭಾರತಿಸುತರ ಸಾಹಿತ್ಯವನ್ನು ನಾವು ಮರೆತಿರುವುದು ದುರಂತವೆ ಸರಿ.