Saturday, 31 January 2026

ತಂತ್ರಜ್ಞಾನ ನಮ್ಮ ಸೇವಕವಾಗಬೇಕು, ಮಾಲೀಕನಾಗಬಾರದು.

 ಕೆ.ಎಸ್.‌ ಧನಂಜಯ 



           ಮಾನವನ ಇತಿಹಾಸದಲ್ಲಿ ಸಂವಹನವೆಂಬುದು ಸದಾ ಬದಲಾಗುತ್ತಲೇ ಬಂದಿದೆ. ಒಮ್ಮೆ ಪತ್ರಗಳ ಕಾಲ, ನಂತರ ಟೆಲಿಫೋನ್‌, ಆಮೇಲೆ ಮೊಬೈಲ್‌—ಇಂದು ಡಿಜಿಟಲ್ ಸಂದೇಶಗಳ ಯುಗ. ಯುಗದ ಅತ್ಯಂತ ಜನಪ್ರಿಯ ಪ್ರತಿನಿಧಿ ವಾಟ್ಸಾಪ್. ಇದು ಕೇವಲ ಒಂದು ಅಪ್ಲಿಕೇಶನ್ ಅಲ್ಲ, ಸಂಬಂಧಗಳನ್ನು ಜೋಡಿಸುವ ಸೇತುವೆ. ದೂರವನ್ನು ಹತ್ತಿರವಾಗಿಸುವ ಸಾಧನ. ಕ್ಷಣಾರ್ಧದಲ್ಲಿ ಭಾವನೆಗಳನ್ನು ಹಂಚಿಕೊಳ್ಳುವ ವೇದಿಕೆ. ಸಂತೋಷದ ಸುದ್ದಿಯನ್ನೂ, ನೋವಿನ ಸಂಗತಿಗಳನ್ನೂ ಒಂದೇ ಕ್ಲಿಕ್ಕಿನಲ್ಲಿ ತಲುಪಿಸುವ ಶಕ್ತಿ ಇದಕ್ಕಿದೆ. ಆದರೆ ಶಕ್ತಿಶಾಲಿ ಸಾಧನವನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ಮುಖ್ಯ. ಜವಾಬ್ದಾರಿಯುತ ಬಳಕೆ ಮಾಡಿದರೆ ವಾಟ್ಸಾಪ್ ವರವಾಗುತ್ತದೆ. ಅಜಾಗರೂಕ ಬಳಕೆ ಮಾಡಿದರೆ ಅದೇ ಶಾಪವಾಗಬಹುದು. ಹಿನ್ನೆಲೆಯಲ್ಲೇ, ವಾಟ್ಸಾಪ್ ಇತಿಹಾಸ, ಅದರ ಬೆಳವಣಿಗೆ, ಉಪಯೋಗ, ಒಳಿತು-ಕೆಡುಕು ಮತ್ತು ಜವಾಬ್ದಾರಿಯುತ ಬಳಕೆಯ ಅರಿವು ಸಮಾಜಕ್ಕೆ ಅಗತ್ಯವಾಗಿದೆ.

           ವಾಟ್ಸಾಪ್‌ ಕಂಡು ಹಿಡಿದವನ ಯಶೋಗಾಥೆ ಬಗ್ಗೆ ಹೇಳಿದರೆ ಅದೋಂದು ಬೇರೆಯೆ ಲೇಖನ ಆಗುತ್ತದೆ ಆದರೂ ಜಾನ್ ಕೂಮ್ ಮತ್ತು ಬ್ರಿಯನ್ ಆಕ್ಟನ್  ಹೋರಾಟದ ಮೂಲಕ ಬದುಕು ಕಟ್ಟಿಕೊಂಡವರು.  ಉಕ್ರೇನ್ ದೇಶದ ಒಂದು ಸಣ್ಣ ಗ್ರಾಮದಲ್ಲಿ ಆರ್ಥಿಕವಾಗಿ ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿ , ಬಾಲ್ಯದಲ್ಲಿ ವಿದ್ಯುತ್‌, ಶುದ್ಧ ನೀರು, ದೂರವಾಣಿ ಮೊದಲಾದ ಮೂಲ ಸೌಲಭ್ಯಗಳೇ ಸರಿಯಾಗಿ ಲಭ್ಯವಿಲ್ಲದ ಊರಿನಲ್ಲಿ ಜನಿಸಿದ ಜಾನ್‌ ಕೂಮ್‌  1992ರಲ್ಲಿ, ಉತ್ತಮ ಬದುಕಿನ ಕನಸಿನೊಂದಿಗೆ  ತನ್ನ ತಾಯಿಯೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿ ರೇಷನ್‌ ಅಂಗಿಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಆಹಾರ ಮುಂತಾದನ್ನು ಪಡೆಯುತ್ತಿದ್ದವ. ಕಷ್ಟಪಟ್ಟು ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಕಲಿತು ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಜಾನ್ ಕೂಮ್ ಮತ್ತು ಬ್ರಿಯನ್ ಆಕ್ಟನ್  ಯಾಹೂನಲ್ಲಿ ಕೆಲಸ ಮಾಡಿದರು. ನಂತರ ಕೆಲಸದಿಂದ ಹೊರಬಂದು, ಹೊಸದೇನಾದರೂ ಮಾಡುವ ಕನಸನ್ನು ಕಟ್ಟಿಕೊಂಡರು. ದುರಂತವೆಂದರೆ ಆ ಕಾಲಕ್ಕೆ ಫೇಸ್‌ಬುಕ್ ಹಾಗೂ ಟ್ವಿಟರ್ ಕಂಪನಿಗಳಿಗೆ ಉದ್ಯೋಗಕ್ಕೆ ಅರ್ಜಿ ಹಾಕಿದರೂ ಇವರಿಬ್ಬರಿಗೂ ಆ ಸಮಯದಲ್ಲಿ ಅವಕಾಶ ಸಿಕ್ಕಿರಲಿಲ್ಲ ಎನ್ನುವುದು ಆಶ್ಚರ್ಯವೇ ಸರಿ . ಬಡತನ, ನಿರಾಕರಣೆ, ವಿಫಲತೆಗಳು ಎಂದಿಗೂ ಅಂತಿಮವಲ್ಲ. ಕನಸು ಮತ್ತು ಶ್ರಮ ಇದ್ದರೆ, ಅವುಗಳೇ ಯಶಸ್ಸಿನ ಮೆಟ್ಟಿಲುಗಳು ಅದರ ಫಲವೇ 2009 ರಲ್ಲಿ ವಾಟ್ಸ್ ಪ್‌  ಹುಟ್ಟಿಕೊಂಡಿತ್ತು.

            ಡಿಜಿಟಲ್ ಯುಗದಲ್ಲಿ ವಾಟ್ಸಾಪ್‌ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಂದೇಶ, ಧ್ವನಿ ಕರೆ, ವಿಡಿಯೋ ಕರೆ, ಚಿತ್ರ-ವೀಡಿಯೋ ಹಂಚಿಕೆ all-in-one ವೇದಿಕೆಯಾಗಿ ವಾಟ್ಸಾಪ್ ಜನಪ್ರಿಯವಾಗಿದೆ. ಆದರೆ ಇದರ ಒಳಗಿರುವ ಅನೇಕ ಉಪಯುಕ್ತ ಸೆಟ್ಟಿಂಗ್‌ಗಳ ಬಗ್ಗೆ ಬಹುತೇಕ ಬಳಕೆದಾರರಿಗೆ ಪೂರ್ಣ ಅರಿವು ಇಲ್ಲ. ಈ ಸೆಟ್ಟಿಂಗ್‌ಗಳನ್ನು ಸರಿಯಾಗಿ ಬಳಸಿದರೆ, ವಾಟ್ಸಾಪ್ ಬಳಕೆ ಇನ್ನಷ್ಟು ಸುರಕ್ಷಿತ ಮತ್ತು ಸುಲಭವಾಗುತ್ತದೆ.

 ವಾಟ್ಸಾಪ್‌ನ ಪ್ರಮುಖ ಸೆಟ್ಟಿಂಗ್‌ಗಳಲ್ಲಿ ಗೌಪ್ಯತಾ ನಿಯಂತ್ರಣ ಅತ್ಯಂತ ಮುಖ್ಯವಾಗಿದೆ. ( Settings → Privacy)   ನಿಮ್ಮ ಕೊನೆಯ ಬಾರಿ ಆನ್ಲೈನ್ಆಗಿದ್ದ ಸಮಯವನ್ನು ಯಾರಿಗೆ ಕಾಣಬೇಕು ಎಂದು ಆಯ್ಕೆಮಾಡಬಹುದು.( Last Seen), ನಿಮ್ಮ ಫೋಟೋ ಸಂಪರ್ಕದಲ್ಲಿರುವ ಎಲ್ಲಾರಿಗೆ ಅಥವಾ ಕೆಲವೇ ಮಂದಿಗೆ, ಅಥವಾ ಯಾರಿಗೂ ಕಾಣದಂತೆ ಮಾಡಬಹುದು. (  Profile Photo), ನಿಮ್ಮ ಸ್ಟೇಟಸ್‌ ಅನ್ನು ನಿಯಂತ್ರಿಸಬಹುದು. (About)  ಹಾಗೂ  ನೀಲಿ ಟಿಕ್‌ (Blue Tick) ಆನ್‌/ಆಫ್ಮಾಡಬಹುದು ( Read Receipts ) ಆಯ್ಕೆಗಳ ಮೂಲಕ ಯಾರು ಯಾವ ಮಾಹಿತಿಯನ್ನು ನೋಡಬೇಕು ಎಂಬುದನ್ನು ಬಳಕೆದಾರರು ತಾವೇ ನಿರ್ಧರಿಸಬಹುದು. ಇದರಿಂದ ವೈಯಕ್ತಿಕತೆ ಕಾಪಾಡಿಕೊಳ್ಳಲು ಸಾಧ್ಯ.

ಇಂದಿನ ಹಣ ಕಬಳಿಸುವಿಕೆ ಹ್ಯಾಕಿಂಗ್‌ ಮುಂತಾದ  ತೊಂದರೆಗಳನ್ನು ತಪ್ಪಿಸಲು ಖಾತೆಯ ಭದ್ರತೆ ಬಹಳ ಮುಖ್ಯ Two-Step Verification ( Settings → Account → Two-Step Verification) ಸೆಟ್ಟಿಂಗ್‌ ಬಹಳ ಉಪಯುಕ್ತ. ಇದರಲ್ಲಿ ಪಿನ್ ಸಂಖ್ಯೆಯನ್ನು ಸೆಟ್ ಮಾಡಿದರೆ, ಯಾರಾದರೂ ನಿಮ್ಮ ನಂಬರ್‌ ಬಳಸಿ ಲಾಗಿನ್‌ ಮಾಡಲು ಪ್ರಯತ್ನಿಸಿದರೆ ಈ ಪಿನ್‌ ಅಗತ್ಯವಾಗುತ್ತದೆ. ಈ ಪಿನ್‌ ಬಳಸದೆ ಇರುವ ವಾಟ್ಸ್‌ಪ್‌ಗಳನ್ನು ಖದೀಮರು ಬಹಳ ಬೇಗನೆ ಹ್ಯಾಕ್‌ ಮಾಡಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ನೀವು ಪಿನ್‌ ಸಂಖ್ಯೆ ನೀಡಿದ್ದೇ ಆದಲ್ಲಿ ಅನ್ಯ ವ್ಯಕ್ತಿಗಳು ಪ್ರಯತ್ನಿಸಿಸ ಕೂಡಲೇ ನಿಮ್ಮ ವಾಟ್ಸ್ ಪ್‌ ಲಾಕ್‌ ಆಗುತ್ತದೆ ನೀವು ನಿಮ್ಮ ಪಿನ್‌ ಸಂಖ್ಯೆ ನೀಡಿ ಅದನ್ನು ಮತ್ತೆ ಯಥಾ ಸ್ಥಿತಿಗೆ ತರಬಹುದು.  

ಫಿಂಗರ್‌ಪ್ರಿಂಟ್ / ಫೇಸ್‌ ಲಾಕ್‌ : ( Settings Privacy Fingerprint Lock / App Lock ) ವಾಟ್ಸಾಪ್‌ ತೆರೆಯಲು ಫಿಂಗರ್‌ಪ್ರಿಂಟ್‌ ಅಥವಾ ಮುಖ ಗುರುತು ಬೇಕಾಗುತ್ತದೆ ಇದರಿಂದ ಅನಧಿಕೃತವಾಗಿ ನಿಮ್ಮ ವಾಟ್ಸ್ ಪ್‌ ಗೆ ಅನ್ಯರು ಪ್ರವೇಶಿಸದಂತೆ ತಡೆಯಬಹುದು.

ಮ್ಯೂಟ್‌ ಮತ್ತು ಕಸ್ಟಮ್‌ ನೋಟಿಫಿಕೇಶನ್‌ ( Chat Contact/Group Info Mute / Custom Notifications ) ನಮಗೆ ಬರುವ ಅನಗತ್ಯ ಗುಂಪುಗಳ  ಸಂದೇಶಗಳಿಂದ ಮುಕ್ತಿ. ಮುಖ್ಯ ವ್ಯಕ್ತಿಗಳಿಗೆ ವಿಭಿನ್ನ ಟೋನ್‌ ಸೆಟ್‌ ಮಾಡುವ ಅವಕಾಶ ಇದೆ.

ಬಹಳಷ್ಟು ಮಂದಿ ಯಾರಿಗೋ ಚಾಟ್‌ ಮಾಡಿ ಅಥವಾ ಬೇಡದ ಸಂದೇಶ ಕಳುಹಿಸಿ ಡಿಲೀಟ್‌ ಮಾಡಿದರೆ ಮುಗಿಯಿತು ಎಂದು ತಿಳಿದುಕೊಂಡಿದ್ದಾರೆ ಆದರೆ ವಾಟ್ಸ್‌ ಪ್‌ ನಲ್ಲಿರುವ ಚಾಟ್‌ ಬ್ಯಾಕಪ್‌ (Chat Backup) Settings Chats Chat Backup ) ಎಷ್ಟು ದಿನದ ಮಾಹಿತಿ ಬೇಕು ಎಂದು ಗೂಗಲ್‌ ಡ್ರೈವ್‌ಗೆ ಬ್ಯಾಕಪ್ ತೆಗೆದುಕೊಳ್ಳಬಹುದು.  ಫೋನ್‌  ಬದಲಿಸಿದರೂ ಚಾಟ್‌ಗಳು ಸುರಕ್ಷಿತವಾಗಿರುತ್ತದೆ.  

ಸ್ಟೋರೇಜ್‌ ಮ್ಯಾನೇಜ್‌ಮೆಂಟ್‌ (Settings Storage and Data Manage Storage ) ಇದು ನಮಗೆ ಹೆಚ್ಚು ಜಾಗ ತೆಗೆದುಕೊಳ್ಳುವ ಫೈಲ್‌ಗಳನ್ನು ಕಂಡು ಅಳಿಸಬಹುದು. ಇದರಿಂದ ನಮ್ಮ ಫೋನ್‌ ಮೆಮೊರಿ ಉಳಿಸಿಕೋಳ್ಳಲು ಸಹಾಯವಾಗುತ್ತದೆ. .

ಡಿಸಪಿಯರಿಂಗ್‌ ಮೆಸೇಜ್‌ (Disappearing Messages) Chat Info Disappearing Messages ) ನಿರ್ದಿಷ್ಟ ಸಮಯದ ಇದರಲ್ಲಿ ಗೊತ್ತು ಮಾಡಿದರೆ ನಮಗೆ ಬಂದಂತಹ ಸಂದೇಶ ಮತ್ತು ಕಳುಹಿಸಿದ  ಸಂದೇಶಗಳು ಸ್ವಯಂ ಅಳಿಸಿ ಹೊಗುತ್ತದೆ.

ಮೀಡಿಯಾ ಆಟೋ ಡೌನ್‌ಲೋಡ್‌ ನಿಯಂತ್ರಣ (Settings Storage and Data Media Auto-Download ) ಕೆಲವು ದೊಡ್ಡ ಗಾತ್ರದ ಫೈಲ್ ಗಳನ್ನು  ವೈಫೈ ಇದ್ದಾಗ ಅಂದರೆ ನಿಮ್ಮ ಪೋನ್‌ ಯಾವುದೇ ವೈಫೈ ಸಂಪರ್ಕ ಹೊಂದಿದ್ದ ಸಮಯದಲ್ಲಿ ಮಾತ್ರ ಪೋಟೋ , ಆಡಿಯೋ,ವಿಡಿಯೋ,ಯಾವುದೇ ತರಹದ ದಾಖಲೆ ಫೈಲ್‌ ಗಳು  ಡೌನ್‌ಲೋಡ್‌ ಆಗುವಂತೆ ಸೆಟ್‌ ಮಾಡಬಹುದು. ಇದರಿಂದ ನಿಮಗೆ ಬೇಡದ ಮಾಹಿತಿ ಡೌನ್‌ ಲೋಡ್‌ ಆಗಿ ಅನಗತ್ಯ  ಡೇಟಾ ವ್ಯಯವಾಗುವುದು ಉಳಿಯುತ್ತದೆ.

ಗ್ರೂಪ್‌ ಪ್ರೈವಸಿ ಸೆಟ್ಟಿಂಗ್‌ ( Settings Privacy Groups ) ನ್ನು ನೀವು ಸೆಟ್‌ ಮಾಡಿಕೊಂಡಿದ್ದೆ ಆದಲ್ಲಿ ಯಾರಾದರೂ ನಿಮ್ಮನ್ನು ಗುಂಪಿಗೆ ಸೇರಿಸುವ ಮೊದಲು ಅನುಮತಿ ಕೇಳಬೇಕಾಗುತ್ತದೆ.ಇದರಿಂದ ನಿಮ್ಮನ್ನು ಅನಗತ್ಯ ಗುಂಪಿಗೆ ಸೇರಿಸಿಕೊಳ್ಳುವುದನ್ನು ತಪ್ಪಿಸಬಹುದು.

ಡಾರ್ಕ್‌ ಮೋಡ್‌ (Settings Chats Theme Dark ) ಕಣ್ಣುಗಳ ಒತ್ತಡ ಕಡಿಮೆ ಮಾಡುವುದಲ್ಲದೆ .ಬ್ಯಾಟರಿ ಬಳಕೆಯನ್ನು ಹೆಚ್ಚು ಸಮಯ ಉಪಯೋಗಿಸಿಕೊಳ್ಳ ಬಹುದು.

ಈ ಮೇಲೆ ತಿಳಿಸಿದ ಬದಲಾವಣೆಗಳನ್ನು ನಾವು ಮಾಡಿಕೊಂಡಿದ್ದೆ ಆದರೆ, ಸೆಟ್ಟಿಂಗ್‌ಗಳನ್ನು ಸರಿಯಾಗಿ ಬಳಸಿದರೆ ವಾಟ್ಸಾಪ್‌ ಇನ್ನಷ್ಟು ಸುರಕ್ಷಿತ, ಸುಲಭ ಹಾಗೂ ಜವಾಬ್ದಾರಿಯುತವಾಗುತ್ತದೆ. ತಂತ್ರಜ್ಞಾನವನ್ನು ನಿಯಂತ್ರಿಸೋಣ ತಂತ್ರಜ್ಞಾನ ನಮ್ಮನ್ನು ನಿಯಂತ್ರಿಸದಂತೆ ನೋಡಿಕೊಳ್ಳೋಣ.

Friday, 23 January 2026

ಜಲಜಾ ಶೇಖರ್ ರವರ "ಕನ್ನಡಿಯ ಬಿಂಬ" ಕ್ಕೆ ನನ್ನ ಬೆನ್ನುಡಿ

 ಕೆ.ಎಸ್‌ .ಧನಂಜಯ

                             

   ಜಲಜಾ ಶೇಖರ್ ರವರು ರಚಿಸಿರುವ ಕನ್ನಡಿಯ ಬಿಂಬ ಕೃತಿಯು ತನ್ನ ಅಂತರಂಗದ ಭಾವನೆಗಳನ್ನು ಮತ್ತು ಜೀವನೋತ್ಸವದ ಅತ್ಯುತ್ತಮ ಕ್ಷಣಗಳನ್ನು ಸೆರೆ ಹಿಡಿದಿದೆ. ಏಕೆಂದರೆ ಇಲ್ಲಿರುವ ಕವನಗಳನ್ನು ಗಮನಿಸಿದಾಗ ಒಬ್ಬ ಬರಹಗಾರ್ತಿಗೆ ಜೀವನ ಪ್ರೀತಿಯ ಜೊತೆಗೆ ಏಕಕಾಲದಲ್ಲಿ ಅಂತರಂಗದ ಅನಿಸಿಕೆ ಮತ್ತು ಓದುಗನಿಗೆ  ಕೊಡಬೇಕಾದ ಸತ್ಯ, ಸಂತೋಷವನ್ನು ಒಟ್ಟಾಗಿ ಹಿಡಿದಿಡುವುದು ಸುಲಭದ ಮಾತಲ್ಲ ಅಂತಹ ಕವಿತೆಗಳು ಇಲ್ಲಿ ಅಪೂರ್ವವೆನಿಸುತ್ತದೆ.

ಬಾಲ್ಯ ಯವ್ವನ ಮತ್ತು ಮುಪ್ಪಿನ ನಡುವೆ ಇರುವ ದಿನಗಳು ಯಾವತ್ತೂ ಸ್ಮರಣೀಯ ಮತ್ತು ಅವು ನೆನಪುಗಳ ಮೂಲಕ ಸಂಜೀವಿನಿಗಳು ಇದ್ದಂತೆ. ಅಂತಹ ದಿನಗಳು ದಕ್ಕಿದಷ್ಟು ದಕ್ಕಿಸಿಕೊಂಡಷ್ಟು ಸಂಕಲನದಲ್ಲಿ ಇದೆ.  ವಾಸ್ತವವಾಗಿ ಲೇಖಕಿ ನೇರ ನುಡಿಯ ವ್ಯಕ್ತಿತ್ವ ಬೆಳೆಸಿಕೊಂಡವರು, ವೃತ್ತಿಯಲ್ಲಿ ಶಿಕ್ಷಕಿಯಾಗಿ ಮಕ್ಳಳ ಒಡನಾಟ ಸಹಜವಾಗಿ ಒಡಲು ತುಂಬಿಸುವಷ್ಟು ಅನುಭವ ನೀಡಿದೆ ಎಂದು ಇಲ್ಲಿಯ ಕವನಗಳನ್ನು ಓದಿಕೊಂಡು ಹೋದಾಗ ಸಿಗುವ ಅನುಭವ. ಮಾತ್ರವಲ್ಲ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ ರೀತಿಯೂ ಎದ್ದು ಕಾಣುತ್ತಿದೆ. ಲೇಖಕಿ ಪುಸ್ತಕವಾಗುತ್ತಿದೆ ಎನ್ನುವ ಡಂಬಾಚಾರಕ್ಕೆ ಕಟ್ಟು ಬಿದ್ದು ಯಾವುದನ್ನು ಮುಚ್ಚಿಡುವ ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ ಅದಕ್ಕೆ ಇಲ್ಲಿ ಆಯ್ದುಕೊಂಡ ವಿಷಯಗಳನ್ನು ಗಮನಿಸಿದಾಗ ತಿಳಿದು ಬರುವ ಅಂಶ. ಬಿಡಿ ಬಿಡಿಯ ಮೂಲಕ ಇಡಿಯಾಗಿ ಕಟ್ಟಿ ಕೊಡುವ ಕೆಲಸ ಸೊಗಸಾಗಿ ಪೂರೈಸಿದ್ದಾರೆ.

ಅನುಭವ ಯಾವತ್ತೂ ತಮ್ಮೊಬ್ಬರ ಸ್ವತ್ತಾಗಬಾರದು ಅದು ಸಮಾಜಕ್ಕೆ ರವಾನೆಯಾಗುವುದರ ಮೂಲಕ ಜನರನ್ನು ಚಿಂತನೆಗೆ ಒಳಪಡಿಸಬೇಕು ಎನ್ನುವ ಸಂದೇಶ ಈ ಕವನ ಸಂಕಲನ ಮೂಲಕ ಎದ್ದು ಕಾಣುವ ಅಂಶ. ಸಮಗ್ರವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರದ ಹಿಂದಿನ ಪೀಳಿಗೆಗೆ ಒಪ್ಪಿಗೆ ಆಗುವಂತೆ ಇಲ್ಲಿಯ ಬರಹಗಳು ಮೂಡಿಬಂದಿದೆ. ಹಲವು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುವ ಜೊತೆಗೆ ಕೆಲವು ಕವಿತೆಗಳು ಅಂತರಂಗ ಮತ್ತು ಬಹಿರಂಗ ಕೆಡುಕುಗಳ ವಿರುದ್ಧ ಸಮಾಜದಲ್ಲಿನ ಅಂಕುಡೊಂಕುಗಳು ಪ್ರಚಲಿತ ವಿದ್ಯಮಾನ ಹೀಗೆ ಹಲವಾರು ವಿಷಯಗಳ ಬಗ್ಗೆ ಕನ್ನಡಿ ಹಿಡಿದಂತಿದೆ.

Friday, 16 January 2026

ನಾನು ಬದುಕುತ್ತೇನೆ  ಹೇಗೋ ಅಲ್ಲ, ಉತ್ತಮ ಪ್ರಜೆಯಾಗಿ

    
ಕೆ.ಎಸ್‌ .ಧನಂಜಯ

ಮಾದಕ ವಸ್ತು ಇತ್ತೀಚಿನ ದಿನಗಳಲ್ಲಿ ಯುವ ಜನತೆಯ ಮದ್ಯೆ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ. ಡ್ರಗ್ಸ್ಎನ್ನುವುದು ಒಂದು ಪದವಲ್ಲ ಅದು ಯುವ ಮನಸ್ಸಿನ ಮೇಲೆ ಬೀಳುವ ಅಂಧಕಾರದ ನೆರಳುಕ್ಷಣಿಕ ಸುಖದ ಭ್ರಮೆಯನ್ನು ತೋರಿಸಿ, ಶಾಶ್ವತ ನೋವಿನ ದಾರಿಯತ್ತ ಕರೆದುಕೊಂಡು ಹೋಗುವ ಮೌನ ವಂಚಕ. ಅದು ಸ್ನೇಹವಲ್ಲ, ಸಹಾಯವಲ್ಲ, ಆಶ್ರಯವೂ ಅಲ್ಲ ಮೆದುಳಿನ ನೈಸರ್ಗಿಕ ಬೆಳಕನ್ನು ಆರಿಸಿ
ಕೃತಕ ಹೊಳಪಿನಿಂದ ಬದುಕನ್ನು ಮಂಕಾಗಿಸುವ ಅಪಾಯಕಾರಿ ಮೋಸ.  ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಕಳೆದುಹೋದರೆ ಅವು ಮರಳಿ ಬರಲಾರವು  ಆದ್ದರಿಂದ, ಇಂದೇ ಒಂದು ದೃಢ ನಿರ್ಧಾರಕ್ಕೆ ಬನ್ನಿ

ಇಂದು ಡ್ರಗ್ಸ್ ಅನ್ನು ಕೆಲವರು ಟ್ರೆಂಡ್, ಸ್ಟೈಲ್, ಕೂಲ್ನೆಸ್  ಅಂತ ಕರೆಯುತ್ತಾರೆ. ಆದರೆ ನಿಜ ಹೇಳಬೇಕೆಂದರೆ  ಡ್ರಗ್ಸ್ ಒಂದು ನಿಧಾನವಾದ ಆತ್ಮಹತ್ಯೆ.  ಮಾದಕ ವಸ್ತು ಮಾರಾಟ, ಸೇವನೆ ಮತ್ತು ಸಾಗಾಟ NDPS ಕಾಯ್ದೆಯಡಿಯಲ್ಲಿ ಪೊಲೀಸರಿಗೆ FiR ದಾಖಲಿಸುವ ಅವಕಾಶವಿದೆ, 2 ವರ್ಷ ಸೆರೆವಾಸ ಎಲ್ಲವೂ ಇದರಲ್ಲಿ ಸೇರಿದೆ. ಮಾದಕ ವಸ್ತುಗಳು ಮನಸ್ಥಿತಿಯನ್ನು ಹದಗೊಳಿಸುವ ಅಥವಾ ಮೂಡ್ ಕೊಡುವ  ಸಾಧನವಂತು ಅಲ್ಲವೇ ಅಲ್ಲ. ಯುವಕನಾಗಿರುವುದು ಅಪಾಯ ತೆಗೆದುಕೊಳ್ಳುವುದಕ್ಕೆ ಅಲ್ಲ ಯುವಕನಾಗಿರುವುದು ಜವಾಬ್ದಾರಿ ಹೊರುವುದಕ್ಕೆ. ಡ್ರಗ್ಸ್‌ ಎನ್ನುವುದು  ಮೆದುಳಿನ ನೈಸರ್ಗಿಕ ರಾಸಾಯನಿಕವನ್ನು ಕುಗ್ಗಿಸಿ, ತಾತ್ಕಾಲಿಕ ರಾಸಾಯನಿಕದ ಮೂಲಕ ಮೆದುಳಿನ ಕಾರ್ಯವಿಧಾನವನ್ನು ಏರು ಪೇರು ಮಾಡುವ ಸಾಧನ. ಮಾದಕ ವಸ್ತು ಉಪಯೋಗಿಸುವುದರಿಂದ ಮೆದುಳಿನಲ್ಲಿ ಬದಲಾವಣೆ ಉಂಟಾಗಿ ಹೆಚ್ಚಾಗಿ ಬಳಸುವಂತೆ ಪ್ರಚೋದಿಸುತ್ತದೆ. ವ್ಯಸನಕ್ಕೆ ಒಳಾಗಾದ ವ್ಯಕ್ತಿಯನ್ನು ಗಂಭೀರ ಅಪರಾಧದಲ್ಲಿ ತೊಡಗುವಂತೆ ಮಾಡುತ್ತದೆ.  ವಾಹನ ಚಾಲನೆ ಮಾಡುವಾಗ ಡ್ರಗ್ಸ್ ತೆಗೆದುಕೊಂಡು ವಾಹನ ಚಾಲನೆ ಮಾಡುವುದು ಮಾತ್ರವಲ್ಲ ಅದು ವಿಪರೀತ ವೇಗವಾಗಿ ವಾಹನ ಚಾಲನೆ ಮಾಡುವುದಕ್ಕೂ ಅಪಘಾತವಾಗುವುದಕ್ಕೂ ಪ್ರೇರಪಿಸುವ ಎಲ್ಲಾ ಸಾಧ್ಯತೆ ಇರುತ್ತದೆ. ದುರ್ಬಲ ಮತ್ತು  ಕಡಿಮೆ ಮನೋ ಸಾಮರ್ಥ್ಯದ ವ್ಯಕ್ತಿಗಳು ಇದಕ್ಕೆ ಹೆಚ್ಚು ಬಲಿಯಾಗುತ್ತಾರೆ. ಸೋಮಾರಿತನ ಮತ್ತು ದೈನಂದಿನ ವರ್ತನೆಯಲ್ಲಿ ಬದಲಾವಣೆ, ಏಕಾಂಗಿತನ ಬಯಸುವುದು, ಸಮಾಜ ಮತ್ತು ಜನರಿಂದ ದೂರವೇ ಉಳಿಯುವುದು ಇದರ ಪ್ರಮುಖ ಲಕ್ಷಣ.

ಡ್ರಗ್ಸ್ ಸೇವನೆಯಿಂದ ಡೋಪಮೈನ್ ಎನ್ನುವ ಸಂವಾಹಕ ಬಿಡುಗಡೆಯಾಗುತ್ತದೆ ಇದನ್ನು ಸೇವಿಸುವವರಲ್ಲಿ ಹೆಚ್ಚಾಗಿ ಮೆದುಳಿನ ಸಂದೇಶ ಪುನಾರವರ್ತನೆಯಾಗುತ್ತದೆ, ಅಂದರೆ ಅಪರಾಧಗಳನ್ನು ಮಾಡಲು ಪ್ರಚೋದನೆ. ಮೆದುಳಿನ ಸೂಕ್ಷ್ಮತೆ ಕಡಿಮೆಯಾಗುವುದು, ವಸ್ತು ಮತ್ತು ವಿಷಯದಲ್ಲಿ ಆಸಕ್ತಿ ಕಡಿಮೆಯಾಗುವುದು, ಆಲೋಚನಾ ಕ್ರಮದಲ್ಲಿ ಗೊಂದಲವಾಗುವುದಲ್ಲದೆ ಯಾವುದೇ ಪ್ರಯೋಜನವಿಲ್ಲ. ಕಲಿಕೆ, ನಿರ್ಧಾರ, ತೀರ್ಪು, ಮತ್ತು ವರ್ತನೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮನಸ್ಸು ದುರ್ಬಲವಾಗುವುದರ ಜೊತೆಗೆ, ಖಿನ್ನತೆ, ಮತ್ತು ಸಮಾಜದ ತಿರಸ್ಕಾರಕ್ಕೆ ಒಳಗಾಗಿ, ತೀವ್ರ ತರಹದ ಖಾಯಿಲೆಗೆ ಒಳಗಾಗಬಹುದು. ಮಾತ್ರವಲ್ಲ ನಡುಗುವಿಕೆ, ನಿದ್ರೆ ಮತ್ತು ಹಸಿವಿನಲ್ಲಿ ಏರು ಪೇರು, ಮೂರ್ಛೆ ಹೋಗುವುದು, ತೂಕದಲ್ಲಿ ಏರಿಳಿತ, ಅತಿಯಾದ ಅಥವಾ ಅತೀರೇಕದ ಚಟುವಟಿಕೆಗಳು ಮಾಡುವಂತೆ ಪ್ರಚೋದಿಸುವ ಸಾಧ್ಯತೆಯೇ ಹೆಚ್ಚು.  ಮನೋ ವೈದ್ಯರ ಮತ್ತು ಆಪ್ತ ಸಮಾಲೋಚನೆ ಮೂಲಕ ಚಿಕತ್ಸೆ ಇದ್ದರೂ ವಿಧ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಇದರಲ್ಲೇ ಕಳೆದು ಹೋದರೆ ಹೇಗೆ?

ವಿದ್ಯಾರ್ಥಿ ಜೀವನದ ಅಮೂಲ್ಯ ಕ್ಷಣಗಳು ಕಳೆದುಹೋದರೆ ಅವು ಮರಳಿ ಬರಲಾರವು. ಡ್ರಗ್ಸ್‌ ಎನ್ನುವುದು ಒಂದು ಬಾರಿ ಸ್ಪರ್ಶಿಸಿದರೆ ಸಾಕು, ಆಲೋಚನೆಗಳ ಹಗ್ಗ ಸಡಿಲಗೊಳ್ಳುತ್ತದೆ. ಗುರಿಗಳು ಮಸುಕಾಗುತ್ತವೆ, ಕನಸುಗಳು ನಿಧಾನವಾಗಿ ಉಸಿರುಗಟ್ಟುತ್ತವೆ. ಡ್ರಗ್ಸ್ ಸುಖ ಕೊಡದು  ಅದು ಆಸೆ ಹುಟ್ಟಿಸುತ್ತದೆ ಆಸೆ ತೃಪ್ತಿ ಕೊಡುವುದಿಲ್ಲ  ಅದು ವ್ಯಸನವಾಗಿ ಬಂಧಿಸುತ್ತದೆ. ಅಂತಹ ವ್ಯಸನಕ್ಕೆ ಸಿಲುಕಿದ ವ್ಯಕ್ತಿ ಒಬ್ಬನೇ ಅಲ್ಲ, ಅವನೊಂದಿಗೆ ಕುಟುಂಬ, ಸಮಾಜ, ಭವಿಷ್ಯ ಎಲ್ಲವೂ ಗಾಯಗೊಳ್ಳುತ್ತವೆ. ಡ್ರಗ್ಸ್ ವಿರುದ್ಧ ಹೋರಾಟ ಕಾನೂನಿನ ವಿಷಯ ಮಾತ್ರವಲ್ಲ  ಅದು ಆತ್ಮಜಾಗೃತಿಯ ಆವಾಹನೆ.  ಆಗಾಗಿ ಇಂದೇ ಒಂದು ಉತ್ತಮವಾದ ನಿರ್ಧಾರಕ್ಕೆ ಬನ್ನಿ, ಮಾದಕ ವಸ್ತು ತೆಗೆದುಕೊಳ್ಳುವುದಿಲ್ಲ ಅದರ ಬಳಿಗೆ ಹೋಗುವುದಿಲ್ಲ ಎಂದು ಇಂದೇ ನಿರ್ಧರಿಸಿ ನಿಮ್ಮ ಬದುಕು ನಿಮ್ಮ ಕೈಯಲ್ಲಿದೆ, ನಾನು ಬದುಕುತ್ತೇನೆ ಹೇಗೂ ಅಲ್ಲ ಉತ್ತಮ ಪ್ರಜೆಯಾಗಿ ಎನ್ನುವುದನ್ನು ಇಂದೇ ಶಪಥ ಮಾಡಿ.

Thursday, 8 January 2026

ಸಾಹಿತಿ, ಚಿಂತಕ , ಶ್ರೀ ಅರವಿಂದ ಚೊಕ್ಕಾಡಿಯವರ ಈ ದಿನ ಪುಸ್ತಕಕ್ಕೆ ಬರೆದ ಮುನ್ನುಡಿ

 ಕೆ.ಎಸ್‌.ಧನಂಜಯ.


  
            
           ಮುಂಜಾನೆ ನನ್ನ ಹಾಗೆ ಎಲ್ಲಾರೂ ಮೊಬೈಲ್‌ ನೊಡುವುದು ಇಂದಿನ ದಿನಗಳಲ್ಲಿ ಸರ್ವೆ ಸಾಮನ್ಯ, ಒಂದು ಸಂದೇಶ ಬಹಳ ವಿಶೇಷವಾಗಿ ಕಾಣಿಸಿತ್ತು. ನಾನು ನಿಮ್ಮ ಬಳಿ ಪುಸ್ತಕಕ್ಕೆ ಒಂದು ಮುನ್ನುಡಿ ಕೇಳಿದ್ದೆ , ನಾನು ಆಷ್ಟೇ ನಯವಾಗಿ ನುಣುಚಿಕೊಳ್ಳುವ ಎಂದು ನೆನೆಸಿ “ ಸರ್‌ ನನಗೆ ಮುನ್ನುಡಿ ಎಲ್ಲಾ ಬರೆಯಲು ಆಗಲ್ಲಎಂದೆ , ಮತ್ತೊಂದು ಸಂದೇಶ ಬಂತು  ನಿಮ್ಮಿಂದ ಆಗುತ್ತದೆ ನೀವು ಬರೆಯಿರಿ. ಇದು ಪಕ್ಕಾ ಗುರುಗಳ ಆದೇಶದ ಶೈಲಿ ನಾನು ಮೌನವಾದೆ. ಹೌದು "ಈ ದಿನ" ಬಹಳಷ್ಟು ಜನರಿಗೆ ಹೇಗೆ ಬದುಕಬೇಕು ಎನ್ನುವ ರಾಮಾಯಣ ತಾಯಿಯಾದರೆ, ಹೇಗೆ ಬದುಕಬಾರದು ಎನ್ನುವ ಮಹಾಭಾರತ ತಂದೆಯಾಗಬೇಕು. ಆ ಮೂಲಕ ಒಳ್ಳೆಯ ಸಂಸ್ಕಾರ ಕಲಿಸುವ ಅಗತ್ಯ ಈ ದಿನದ ಪ್ರಸ್ತುತತೆ. 
        ಒಟ್ಟು 43 ಲೇಖನಗಳ ಕೃತಿಯಲ್ಲಿ ಶಿಕ್ಷಣ, ಕೃಷಿ, ರಾಜಕೀಯ, ಆರ್ಥಿಕತೆ, ಸಾಹಿತ್ಯದ ವಿಷಯಗಳ ಜೊತೆಗೆ ಗಾಂಧಿ ವಿಚಾರಧಾರೆಯನ್ನು ವಿಶ್ಲೇಸಿಸುವ ಮೂಲಕ ಬೆಳಕು ಚೆಲ್ಲುವ ಪ್ರಯತ್ನವನ್ನು ಅರವಿಂದ ಸರ್ ಮಾಡಿದ್ದಾರೆ ಮಾತ್ರವಲ್ಲ ಅವರ ಅನುಭವಕ್ಕೆ ಕೈಗನ್ನಡಿಯಂತೆ ಕೃತಿ ಹೊರಹೊಮ್ಮಿದೆ. ನಿಜ, ಮನುಷ್ಯ ಅಂತರಂಗದ  ಕೆಡುಕುಗಳ ವಿರುದ್ದ ಸಂಘರ್ಷಕ್ಕಿಳಿದು ಒಳಿತನ್ನು ಸಾಧಿಸಬೇಕು ಅದು ಧರ್ಮಕ್ಕೆ ಪೂರಕ, ಅದು ಹೊರಗಿನ ವಿಚಾರಕ್ಕೆ ಬಳಸಿದರೆ ಅದು ಮಾರಕ ಎನ್ನುವ ಮೂಲಕ ಜಿಹಾದ್‌ನ ಅರ್ಥ, ಸಮಾನ ನಾಗರಿಕ ಸಂಹಿತೆ ಎನ್ನುವುದು ಸಮಾನ ಧಾರ್ಮಿಕ ಸಂಹಿತೆಯಲ್ಲ, ಭಾಗ್ಯಗಳೊಂದಿಗೆ ಸಲ್ಲಾಪ, ಆದರ್ಶಗಳಿಲ್ಲದ ಸಮಾಜದಲ್ಲಿ ನಾಯಕತ್ವದ ಸವಾಲುಗಳು, ಮಕ್ಕಳಲ್ಲಿ ಉಳಿಸಿಕೊಳ್ಳಬೇಕಾದ ಶೈಕ್ಷಣಿಕ ಪ್ರಜ್ಞೆ ಎನ್ನುವುದುದರೊಂದಿಗೆ ಲೇಖಕರು ಹತ್ತು ಹಲವಾರು ಪ್ರಚಲಿತ ವಿದ್ಯಾಮಾನಳ ಬಗ್ಗೆ ಚರ್ಚೆ ನಡೆಸಿದ್ದಾರೆ.  ಜೊತೆಗೆ ಹೆಚ್ಚು ಶೈಕ್ಷಣಿಕ ಕ್ಷೇತ್ರದ  ವಿಷಯಗಳ ಬಗ್ಗೆ ಪ್ರಸ್ತಾಪಮಾಡಿರುವುದು ಒಳ್ಳೆಯ ಬೆಳವಣಿಗೆ. ಏಕೆಂದರೆ ಯಾವುದೇ ಒಂದು ಉತ್ತಮ ವಿಷಯಗಳನ್ನು ವಿಧ್ಯಾರ್ಥಿಗಳ ಮನಸಿನಲ್ಲಿ ಭಿತ್ತಿದರೆ ಅದಕ್ಕಿಂತ ಒಳ್ಳೇಯ ಕಾರ್ಯ ಮತ್ತೊಂದಿಲ್ಲ. ಸಂಗ್ರಹಿಸಿದ ನೀರು ಮಲೀನವಾಗಿದ್ದರೆ ಆ ನೀರನ್ನು ಶುದ್ದ ನೀರಿನೊಂದಿಗೆ ಬಿಟ್ಟರೆ ಅದು ಕೂಡ ಮಲೀನವಾಗುತ್ತದೆ. ಶಿಕ್ಷಣ ಸಂಸ್ಥೆಗಳು ಅಂತಹ ಶುದ್ದ ನೀರನ್ನು ಉತ್ಪಾದಿಸುವ ಘಟಕಗಳಾದರೆ ಮಾತ್ರ ಉತ್ತಮ ಸಮಾಜದ ನಿರೀಕ್ಷೆ ಸಾಧ್ಯ.  ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಕ್ತಿಯಾಗಿ ತಳ ಮಟ್ಟದಲ್ಲಿ ವ್ಯವಸ್ಥೆಯನ್ನು ಸರಿಪಡಿಸುವ ಅನಿವಾರ್ಯತೆ ಪ್ರಸ್ತುತ ಸಮಾಜಕ್ಕೆ ಇದೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ ಇದು ಈ ದಿನದ ಅನಿವ್ಯಾರ್ಯತೆಯೂ ಹೌದು.  

        ನಿಜ, ಲೇಖಕರೇ ಹೇಳಿದಂತೆ ಸುಧಾರಣೆಯಾಗಬೇಕಾಗಿರುವುದು ಜನರು ಮತ್ತು ಸಮಾಜ. ಜನರು ಹೆಚ್ಚು ಹೆಚ್ಚು ಇತಿಹಾಸವನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ.  ಇತಿಹಾಸದ ಅರಿವಿಲ್ಲದೆ ಭವಿ಼ಷ್ಯವನ್ನು ಕಟ್ಟಲು ಸಾಧ್ಯವಿಲ್ಲ ಎನ್ನುವ  ಅಂಬೇಡ್ಕರ್‌ ವಾಣಿಯನ್ನು ಸಮರ್ಥವಾಗಿ ತಮ್ಮ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ, ಆ ಮೂಲಕ ಯುವ ಸಮುದಾಯವನ್ನು ಚಿಂತನೆಗೆ ದೂಡುವ ಅವರ ಪ್ರಯತ್ನ ಹಲವಾರು ಲೇಖನಗಳಲ್ಲಿ ಎದ್ದು ಕಾಣುವ ಅಂಶವಾಗಿದೆ, ಸ್ವಾಭಾವಿಕವಾಗಿ ಅರವಿಂದ ಸರ್‌ ಅವರದು ಚರ್ಚೆಗೆ ಆಹ್ವಾನಿಸುವ ಸ್ವಭಾವ. ಅದಕ್ಕಾಗಿ ಅವರು ಪ್ರಚಲಿತ ವಿದ್ಯಾಮಾನಗಳನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಾರೆ, ಆ ಮೂಲಕ ಈ ಜಡ್ಡು ಕಟ್ಟಿದ ಸಮಾಜಕ್ಕೆ ಅವರದೆ ಆದ ರೀತಿಯಲ್ಲಿ ಚಿಕಿತ್ಸೆಯನ್ನು ಕೊಡುವ ಕೆಲಸವನ್ನು ಯತ್ತೇಚ್ಚವಾಗಿ ಮಾಡುತ್ತಿರುವುದು ಅವರ ಮುಖ ಪುಸ್ತಕ ಗೆಳೆಯರಾದ ನನ್ನಂತೆ ಹಲವರಿಗೆ ಗೊತ್ತಿರುವ ವಿಷಯವೇ.
  ಚರಕ-ಬಟ್ಟೆ, ಬ್ರಿಟನ್‌ ಆರ್ಥಿಕತೆಗೆ ಪೆಟ್ಟು ಕೊಟ್ಟ ಪರಿಣಾಮ ಬ್ರಿಟೀಷರು ದೇಶ ಬಿಟ್ಟು ಹೋದರೇನೋ ಸರಿ, ಎಲ್ಲಾದಕ್ಕೂ ಮಿಗಿಲಾಗಿ ಒಂದು ಕಂದಕವನ್ನು ನಿರ್ಮಿಸಿ ಹೋದರು ಅದು ಇಂದಿಗೂ ಜೀವಂತವಾಗಿದೆ ವಾಸ್ತವವಾಗಿ ಅದು ಯಾರಿಗೂ ಬೇಡ, ಆ ಕಂದಕ ಜೀವಂತವಾಗಿದ್ದರೆ ಮಾತ್ರ ನಮ್ಮ ಕೆಲಸಗಳು ಸಲೀಸು ಎನ್ನುವ ಕಲ್ಪನೆ ಕೆಲವು ವ್ಯಕ್ತಿಗಳ ಮದ್ಯೆ  ಇನ್ನೂ ಗಾಢವಾಗಿದೆ. ಏಕೆಂದರೆ ಬೇಡದ ವಿಷಯಗಳು ಸುಲಭವಾಗಿ ಅರ್ಥವಾಗುವ ಹಾಗೆ ಮುದ್ರ ಯೋಜನೆ ಅರ್ಥವಾಗೋಲ್ಲ. ಲೇಖಕರಿಗೆ ಬ್ಯಾರಿಗಳೊಂದಿಗೆ ಸಾಕಷ್ಟು ಒಡನಾಟ ಇದೆ ಎನ್ನುವುದು ಅವರ ಬರಹದ ಮೂಲಕ ಅರ್ಥವಾದರೂ ಅವರ ಪರವಾಗಿ ಮಾತನಾಡಿ, ಅವರಿಗೆ ಇಷ್ಟವಾಗಿ ಮಾತನಾಡಿ  ಆಗಬೇಕಾದ ಲಾಭವೇನು ಇಲ್ಲ ಎನ್ನುವ ಲೇಖಕರ ನಿಲುವು ಪ್ರಶಂಸನೀಯ. ಎಲ್ಲಿದೆ ನಂದನ ? ಎಲ್ಲಿದೆ ಬಂಧನ ? ಎಲ್ಲಾವೂ ನಮ್ಮೊಳಗೆ ಇದೆ ಆದರೆ ಒಳಗಿನ ತಿಳಿಯನು ಕಲಕದೆ ಇದ್ದರೆ ಮಾತ್ರ ಅಮೃತದ ಸವಿಯಿರುವುದು  ಎನ್ನುವ ಕವಿವಾಣಿಯಂತೆ ಲೇಖಕನಾದವನು ಯಾರ ಮುಲಾಜಿಗೂ ಬರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬಾರದು ಅದರಿಂದ ಸಮಾಜಕ್ಕೆ ದಕ್ಕುವ ಲಾಭವಾದರೂ ಏನು ? ಅಡೆ ತಡೆಗಳು ಪ್ರತಿ ಕೆಲಸದಲ್ಲೂ ಬಂದೇ ಬರುತ್ತದೆ, ನಿಜ ಹೇಳಬೇಕೆಂದರೆ ಅಡೆತಡೆಗಳು ನಮ್ಮನ್ನು ಹೊರದಬ್ಬುವಂತೆ ಕಂಡರೂ ಅದು ವಾಸ್ತವವಾಗಿ ಹೊರದಬ್ಬಲು ಇರುವುದಿಲ್ಲ, ಬದಲಾಗಿ ಅವುಗಳನ್ನು ದಾಟಿ ಮುನ್ನುಗ್ಗಲು ನಮಗೆ ಅವಕಾಶ ನೀಡುವುದಕ್ಕಾಗಿರುತ್ತದೆ ಸೂಕ್ತ ಸಮಯಕ್ಕಾಗಿ ನಾವು ಸಂಯಮದಿಂದ ಕಾಯಬೇಕು ಅಷ್ಟೇ.
        ಲೇಖಕರು  ಸಾಮಾಜಿಕ , ಶಿಕ್ಷಣ ಗಾಂಧಿ ವಿಚಾರಧಾರೆ ಬಗ್ಗೆ  ಮಾತ್ರ ಮಾತನಾಡಿಲ್ಲ. ಐದನೆ ಆಧ್ಯಾಯದಲ್ಲಿ ಗುರು ನಮನ ಲೇಖನದಲ್ಲಿ ತನ್ನ ಸ್ವಂತ ಬದುಕು ಪಟ್ಟ ಪಾಡು ಕುರಿತು ಆತ್ಮಾವಲೋಕನದ ಒಳನೋಟ ನೀಡಿರುವುದು ವಿಶಿಷ್ಟವಾಗಿ ತೋರುತ್ತದೆ. ಲೇಖಕರು ತನ್ನ ಅಮ್ಮ, ಗುರುಗಳ ಬಗ್ಗೆ ಪ್ರಸ್ತಾಪಿಸುವಾಗ ನನಗೆ ಸಹಜವಾಗಿ ಕಣ್ಣಾಲಿಗಳು ಒದ್ದೆಯಾಯಿತು. ಆದರೆ ನಾನು ಸೋತೆ ನನ್ನಿಂದ ಏನು ಆಗಲ್ಲ ಎಂದು ಕುಳಿತ್ತಿದ್ದರೆ ಅವರೊಳಗಿನ ಒಬ್ಬ ಸಹೃದಯ ಹಾಗೂ ಒಬ್ಬ ಛಲವಂತ ಮನುಷ್ಯ, ಬರಹಗಾರ ಸತ್ತು ಹೋಗುತ್ತಿದ್ದನೋ ಎನೋ. ತಾವನುಭವಿಸಿದ ತಳಮಳ ನೋವು ಆತಂಕದ ಜೊತೆಗೆ ಅವರ ಜೀವನೋತ್ಸಾಹ ಮಾತ್ರ ಅದ್ಬುತ ಮಾತ್ರವಲ್ಲ ಅನುಕರಣೀಯ ಕೂಡ. ಎರಡು ತರಹದ ಅನುಭವಗಳು ಒಬ್ಬ ಓದುಗನಾಗಿ ನನಗೆ ಅನುಭವಕ್ಕೆ ಬಂದರೂ ಎಲ್ಲೋ ಒಂದು ಕಡೆ ಬೇಂದ್ರೆಯವರ ಸಾಲುಗಳು ನೆನಪಾಯಿತು "ಎನ್ನ ಪಾಡೆನಗಿರಲಿ,ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ .ಲೇಖಕರು ಕೂಡ ಈ ನಿಯಮವನ್ನು ಈ ಕೃತಿಯಲ್ಲಿ ಗಂಭೀರವಾಗಿ ಪಾಲಿಸಿದಂತೆ ಇದೆ. ಮನುಷ್ಯ ಜೀವನ ರಹಸ್ಯದ ಸತ್ವಕ್ಕೆ ಶರಣಾಗಬೇಕು ಜೀವನವನ್ನು ಸಮವೆನಿಸುವ ಯತ್ನಕ್ಕೆ ಶರಣಾಗಿಸಿ ಬದುಕಬೇಕು. ಕೇವಲ ಖಗ-ಮಿಗಗಳಂತೆ ಹೊಟ್ಟೆಪಾಡನ್ನು ಮಾತ್ರ ನಾವುಗಳು  ನೋಡಿಕೊಂಡರೆ ಸಮಾಜಕ್ಕೆ ನಮ್ಮ ಹೆಚ್ಚುಗಾರಿಕೆ ಏನೂ ಇಲ್ಲ.
    ಸಾಮಾಜಿಕ ಜಾಲತಾಣದಲ್ಲಿ ತಲೆ ಬಗ್ಗಿಸಿ ಮಗ್ನವಾಗಿರುವ ಇಂದಿನ ಯುವಜನತೆಗೆ ಈ ದಿನದಲ್ಲಿರುವ ಲೇಖನಗಳು ಈ ದಿನದ ದೈನಂದಿನ ಆಗು-ಹೋಗುಗಳು ತಲೆ ಎತ್ತಿ ನೋಡುವಂತೆ  ಓದುಗರ ಕಣ್ತೆರಸಲಿ, ಅರವಿಂದ ಸರ್‌ ನಿಮ್ಮಿಂದ ಇನ್ನು ಹೆಚ್ಚು ಕೃತಿಗಳು ಹೊರಹೊಮ್ಮುವ ಮೂಲಕ ಪ್ರಸ್ತುತ ಸಮಾಜಕ್ಕೆ ಮುಂದಿನ ದಾರಿ ದೀಪವಾಗಿ ಕಂಗೊಳಿಸಲಿ ಎಂದು ಹಾರೈಸುವೆ.

17.10.2023                      

Monday, 5 January 2026


ಹಸಿರಿನ ಮಡಿಲಲ್ಲಿ ಶಾಂತಿಯ ಮಹಾಧಾಮ            

                ಸುಂಟಿಕೊಪ್ಪ ನಾಕೂರಿನ ಜಿರಾವಾಲಾ ಧಾಮ

ಕೆ.ಎಸ್.ಧನಂಜಯ
                            
            ಶಾಂತಿಯ ಕಲ್ಲುಗೋಡೆಗಳು ಕಾಲದೊಂದಿಗೆ ಮೌನವಾಗುತ್ತಿದ್ದ ಹೊತ್ತಿನಲ್ಲಿ, ಕೊಡಗಿನ ಸುಂಟಿಕೊಪ್ಪದ ನಾಕೂರಿನ ನೆಲದಲ್ಲಿ ಮತ್ತೆ ಒಂದು ಮಹತ್ವದ ಜೈನ ಅಧ್ಯಾಯ ಬರೆಯಲ್ಪಡುತ್ತಿದೆ. ಶ್ರೀ ಓಂ ಶಾಂತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ, ಸುಮಾರು 60–70 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜಿರಾವಾಲಾ ಧಾಮ, ಜೈನ ಧರ್ಮದ ಆತ್ಮಸೌಂದರ್ಯಕ್ಕೆ ಹೊಸ ಜೀವ ತುಂಬುವ ಮಹಾಸಂಕಲ್ಪವಾಗಿದೆ. ಪರ್ವತಗಳ ಮಡಿಲಲ್ಲಿ, ಹಸಿರಿನ ಮಧ್ಯೆ ಉದಯಿಸುತ್ತಿರುವ ಜಿರಾವಾಲಾ ಧಾಮ ಕೇವಲ ಭವ್ಯ ಮಂದಿರವಲ್ಲ ಬದಲಾಗಿ ಅದು ಅಹಿಂಸೆ, ಶಾಂತಿ ಮತ್ತು ಆತ್ಮಸಾಧನೆಯ ಆಧುನಿಕ ತೀರ್ಥಕ್ಷೇತ್ರ. ಶತಮಾನಗಳ ಹಿಂದೆ ಮುನಿಗಳ ಪಾದಸ್ಪರ್ಶದಿಂದ ಪವಿತ್ರಗೊಂಡ ಕೊಡಗಿನ ನೆಲ, ಇಂದು ಮತ್ತೆ ಜೈನ ಧ್ಯಾನದ ಶಬ್ದರಹಿತ ನಾದವನ್ನು ಆಲಿಸಲು ಸಜ್ಜಾಗಿದೆ.

ಕ್ರಿ.. ಐದುಆರು ಶತಮಾನಗಳ ಹಿಂದೆ ಜೈನ ಮುನಿಗಳು ಅರಣ್ಯಪಥಗಳನ್ನು ದಾಟಿಕೊಂಡು ಕೊಡಗಿಗೆ ಬಂದಾಗ, ಅವರು ಜೊತೆ ತಂದಿದ್ದು ಕೇವಲ ಧರ್ಮವಲ್ಲ ಬದಲಾಗಿ ಬದುಕಿನ ಹೊಸ ಶಿಸ್ತು. ಗಂಗ, ಕದಂಬ ಹಾಗೂ ಹೊಯ್ಸಳರ ರಾಜಾಶ್ರಯದಿಂದ ಜೈನ ಧರ್ಮ ಇಲ್ಲಿ ಬೇರು ಬಿಟ್ಟಿತು ಎನ್ನುವುದು ಇತಿಹಾಸದಿಂದ ತಿಳಿದು ಬರುವ ಸತ್ಯ. ಅರಣ್ಯಗಳ ಅಂಚಿನಲ್ಲಿ, ಗ್ರಾಮಗಳ ನೆಮ್ಮದಿಯಲ್ಲಿ, ಶಾಂತಿಯ ಆಶ್ರಯಗಳಾಗಿ ಬಸದಿಗಳು ಉದಯಿಸಿದವು. ಬಸದಿ ಎಂದರೆ ದೇವಾಲಯ ಮಾತ್ರವಲ್ಲ ಅದು ಆತ್ಮದೊಳಗೆ ತಿರುಗಿ ನೋಡುವ ದ್ವಾರ. ಕೊಡಗಿನ ಜೈನ ಬಸದಿಗಳು ಅಲಂಕಾರದ ಗದ್ದಲವಿಲ್ಲದೆ, ಸರಳತೆಯಲ್ಲೇ ಭವ್ಯತೆಯನ್ನು ಕಂಡುಕೊಂಡವು. ಕಲ್ಲಿನ ಸ್ತಂಭಗಳು ಕಾಲದ ಹೊರೆ ಹೊತ್ತಿದ್ದರೂ, ಅವುಗಳೊಳಗಿನ ಶಾಂತಿ ಎಂದಿಗೂ ಕುಸಿಯಲಿಲ್ಲ. ತೀರ್ಥಂಕರರ ಧ್ಯಾನಮುದ್ರೆ ಮನಸ್ಸಿಗೆ ಮೌನದ ಭಾಷೆ ಕಲಿಸಿತು. ಜೈನ ಧರ್ಮ ಕೊಡಗಿನ ಸಮಾಜಕ್ಕೆ ಅಹಿಂಸೆ, ಸತ್ಯ, ತ್ಯಾಗ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ನೀಡಿತು. ಜೈನರು ವ್ಯಾಪಾರ, ಕೃಷಿ, ವಿದ್ಯಾಭ್ಯಾಸದ ಮೂಲಕ ಸಮಾಜದ ಅಭಿವೃದ್ಧಿಗೆ ಶಾಂತವಾಗಿ, ಅಂದರೆ ಸ್ಥಿರವಾಗಿ ಕೊಡುಗೆ ನೀಡಿದರು. ಬಸದಿಗಳು ಮೌಲ್ಯಗಳ ಮೌನ ಸಾಕ್ಷಿಗಳಾಗಿ ಉಳಿದಿವೆ. ಕಾಲ ಬದಲಾಗುತ್ತಿದ್ದಂತೆ, ಕೆಲವು ಬಸದಿಗಳಲ್ಲಿ ದೀಪ ಇನ್ನೂ ಬೆಳಗುತ್ತಿವೆ; ಕೆಲವು ಬಸದಿಗಳು ಮೌನವಾಗಿ ಸಂರಕ್ಷಣೆಯನ್ನು ಕಾಯುತ್ತಿವೆ. ಇತಿಹಾಸವನ್ನು ಉಳಿಸುವ ಜವಾಬ್ದಾರಿ ಇಂದಿನ ಪೀಳಿಗೆಯ ಕೈಯಲ್ಲಿದೆ ಎಂಬ ಸಂದೇಶವನ್ನು ಅವು ನಮಗೆ ನೆನಪಿಸುತ್ತವೆ.

ಧಾಮದಲ್ಲಿ ಕಲ್ಲಿನ ಶಿಲ್ಪಗಳಿಗೆ ಜೀವ ತುಂಬುವ ಕೈಗಳು, ಕೇವಲ ವಾಸ್ತುಶಿಲ್ಪವನ್ನು ಕಟ್ಟುತ್ತಿಲ್ಲ   ಅವು ನಂಬಿಕೆ, ತ್ಯಾಗ ಮತ್ತು ಭಕ್ತಿಯ ಭವಿಷ್ಯವನ್ನು ರೂಪಿಸುತ್ತಿವೆ. ತೀರ್ಥಂಕರರ ಪ್ರತಿಮೆಗಳು ಇಲ್ಲಿ ಧ್ಯಾನಮುದ್ರೆಯಲ್ಲಿ ನಿಂತು, ಅಶಾಂತ ಬದುಕಿಗೆ ಮೌನದ ಉತ್ತರ ನೀಡುವಂತೆ ಭಾಸವಾಗುತ್ತಿದೆ. ಕೊಡಗಿನ ಪುರಾತನ ಜೈನ ಬಸದಿಗಳು ಇತಿಹಾಸದ ಪುಟಗಳಾದರೆ, ಜಿರಾವಾಲಾ ಧಾಮ ವರ್ತಮಾನ ಮತ್ತು ಭವಿಷ್ಯದ ಸೇತುವೆ. ಕೊಡಗಿನ ಜೈನ ಬಸದಿಗಳು ಕಲ್ಲಿನಿಂದ ನಿರ್ಮಿತ ಕಟ್ಟಡಗಳಲ್ಲ; ಅವು ಶಾಂತಿಯ ತತ್ತ್ವವನ್ನು ಹೊತ್ತುಕೊಂಡ ಜೀವಂತ ಕಾವ್ಯಗಳು. ಕಾವ್ಯಕ್ಕೆ ಇಂದು ಜಿರಾವಾಲಾ ಧಾಮ ಹೊಸ ಪದ್ಯವನ್ನು ಸೇರಿಸುತ್ತಿದೆ. ಅಹಿಂಸೆಯ ಬೆಳಕು, ಮೌನದ ಮೂಲಕ ಮುಂದಿನ ಪೀಳಿಗೆಗಳ ಮನಸ್ಸಿನಲ್ಲಿ ಬೆಳಗುತ್ತಲೇ ಇರಲಿ. ಧಾಮದ ನಿರ್ಮಾಣವು ಪೂರ್ಣವಾಗಲು ಇನ್ನೋಂದೆರಡು ವರ್ಷ ಬೇಕಾಗುತ್ತದೆ ಎಂದು ಅಲ್ಲಿಯ ಮೇಲ್ವಿಚಾರಕರನ್ನು ಮಾತನಾಡಿಸಿದಾಗ ತಿಳಿದು ಬಂದ ವಿಷಯ. ಈ ಧಾಮ ಒಂದು ಸತ್ಯವನ್ನು ಮತ್ತೆ ಮತ್ತೆ ನೆನಪಿಸುತ್ತಿದೆ  ಧರ್ಮವು ಕಾಲಕ್ಕೆ ಬಂಧಿತವಲ್ಲ. ಶತಮಾನಗಳು ಬದಲಾಗಬಹುದು ಆದರೆ ಶಾಂತಿಯ ಅಗತ್ಯ ಎಂದಿಗೂ ಹಳೆಯದಾಗುವುದಿಲ್ಲ. ಕೊಡಗಿನ ಹಸಿರು ಮಡಿಲಲ್ಲಿ ಉದಯಿಸುತ್ತಿರುವ ಧಾಮ, ಅಹಿಂಸೆಯ ಶಾಶ್ವತ ಬೆಳಕನ್ನು ಮುಂದಿನ ಪೀಳಿಗೆಗಳಿಗೆ ಹಸ್ತಾಂತರಿಸುವ ದೀಪವಾಗಲಿ ಎನ್ನುವುದೆ ಆಶಯ ಕೂಡ.