ಲೇ. ಕೆ.ಎಸ್.ಧನಂಜಯ
ಇವರ ಬದುಕಿನ ಮುಖ್ಯ ಭಾಗವೇ ಮೊಬೈಲ್
ಮತ್ತು ಇಂಟರ್ನೆಟ್.
ಮಾಹಿತಿ ಪಡೆಯುವುದರಿಂದ ಸ್ನೇಹ ಬೆಳೆಸುವವರೆಗೂ,
ಶಿಕ್ಷಣದಿಂದ ಮನರಂಜನೆವರೆಗೂ ಎಲ್ಲವೂ ಡಿಜಿಟಲ್
ಜಗತ್ತಿನಲ್ಲೇ ನಡೆಯುತ್ತಿದೆ.
ಇದರ ಪರಿಣಾಮವಾಗಿ ಜ್ಞಾನವನ್ನು ವೇಗವಾಗಿ ಪಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಿಗೆ ಇದ್ದರೂ , ತಾಳ್ಮೆ ಮತ್ತು ಆಳವಾದ ಚಿಂತನೆ ಕಡಿಮೆಯಾಗುತ್ತಿದೆ. ಒಂದು ನಿಮಿಷದ ವಿಡಿಯೋದಲ್ಲಿ ಬದುಕಿನ ಅರ್ಥ ಹುಡುಕುವ ಇವರುಗಳಲ್ಲಿ ಪುಸ್ತಕ ಓದುವ ಅಭ್ಯಾಸ, ದೀರ್ಘಕಾಲ ಗಮನ ಕೇಂದ್ರೀಕರಿಸುವ ಶಕ್ತಿ ಮತ್ತು ನೈಜ ಮಾನವೀಯ ಸಂವಹನ ನಿಧಾನವಾಗಿ ಕುಸುಯುತ್ತಿದೆ ಎಂದರೆ ತಪ್ಪಾಗಲಾರದು
ಜನರೇಷನ್ ಝಡ್ ಯುವ ಪೀಳಿಗೆಯ ಬದುಕಿನಲ್ಲಿ ಸಾಮಾಜಿಕ ಜಾಲತಾಣಗಳು ಅತ್ಯಂತ ದೊಡ್ಡ ಮಟ್ಟದ ಪ್ರಭಾವ ಬೀರಿದೆ ಮತ್ತು ಬೀರುತ್ತಿವೆ ಎಂದರೆ ತಪ್ಪಾಗಲಾರದು ಲೈಕ್, ಫಾಲೋವರ್ಸ್
ವೀವ್ಸ್ ಇವರ ವ್ಯಕ್ತಿತ್ವದ ಮಾನದಂಡಗಳಾಗಿ ಹೊರ ಹೊಮ್ಮುತ್ತಿರುವುದು ದುರಂತವೇ ಸರಿ. ಇದರ ಪರಿಣಾಮವಾಗಿ ಪರಸ್ಪರ ಹೋಲಿಕೆ, ಆತ್ಮವಿಶ್ವಾಸದ ಕೊರತೆ ಮತ್ತು ಮಾನಸಿಕ ಒತ್ತಡ ಹೆಚ್ಚುತ್ತಿರುವುದು ಅಧ್ಯಾಯನಗಳಲ್ಲಿ ಕಂಡುಬರುತ್ತಿದೆ.
ಯುವಕರು ತಮ್ಮ ನೈಜ ಬದುಕಿಗಿಂತ
“ಆನ್ಲೈನ್ ಇಮೇಜ್” ಉಳಿಸಿಕೊಳ್ಳಲು ಹೆಚ್ಚು ಶ್ರಮಿಸುತ್ತಿರುವುದು ನೋಡಿದರೆ, ಸಂತೋಷವನ್ನು ಅನುಭವಿಸುವುದಕ್ಕಿಂತ ಅದನ್ನು ಪೋಸ್ಟ್ ಮಾಡುವ ಚಿಂತೆಯೇ ಹೆಚ್ಚಾಗಿದೆ ಎಂಬುದು ಕಳವಳಕಾರಿ ಅಂಶ.
ಈ ಪೀಳಿಗೆಯ ದೊಡ್ಡ ಶಕ್ತಿ ಎಂದರೆ ಸ್ವಾತಂತ್ರ್ಯದ ಅರಿವು ಮತ್ತು ಪ್ರಶ್ನಿಸುವ ಮನೋಭಾವ ,ಜನರೇಷನ್ ಝಡ್ ಅನ್ಯಾಯ, ಅಸಮಾನತೆ ಮತ್ತು ಹಳೆಯ ಮೂಢನಂಬಿಕೆಗಳನ್ನು ಪ್ರಶ್ನಿಸುವ ಧೈರ್ಯ ಹೊಂದಿದೆ.
ಲಿಂಗ ಸಮಾನತೆ, ಪರಿಸರ ಸಂರಕ್ಷಣೆ,
ಮಾನಸಿಕ ಆರೋಗ್ಯ, ವ್ಯಕ್ತಿ ಸ್ವಾತಂತ್ರ್ಯ ಇಂತಹ ವಿಷಯಗಳಲ್ಲಿ ಈ ಪೀಳಿಗೆ ಹೆಚ್ಚು ಜಾಗೃತವಾಗಿದೆ. ಪ್ರಶ್ನಿಸುವ ಗುಣ ಸಮಾಜದ ಪ್ರಗತಿಗೆ ಅತ್ಯಗತ್ಯವೇನೋ ಸರಿ ಆದರೆ ಹಳೆಯ ತಲೆಮಾರುಗಳು ಒಪ್ಪಿಕೊಂಡಿದ್ದ ಅನೇಕ ಅನ್ಯಾಯಗಳನ್ನು ಈ ಪೀಳಿಗೆ ನಿರಾಕರಿಸುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯ ಸಂಕೇತವಾದರೂ , ಸಂಪ್ರದಾಯಸ್ಥ ಕುಟುಂಬಗಳಲ್ಲಿ ಶಿಸ್ತು, ಸಂಯಮ ಮತ್ತು ಸ್ನೇಹಪರ ಬದುಕು ಬೆಳೆಸಿಕೊಂಡ ಹಿರಿಯರಿಗೆ ಇದು ಬಹಳಷ್ಟು ತಲೆನೋವಿನ ವಿಷಯವಾಗಿದೆ. ಎಲ್ಲೋ ಒಂದು ಕಡೆ ಮಕ್ಕಳು ನಮ್ಮ ಕೈ ತಪ್ಪಿ ಹೊಗುತ್ತಿದ್ದಾರೆ ಎನ್ನುವ ಆತಂಕವೂ ಕಾಡುತ್ತಿರವುದು ಸುಳ್ಳಲ್ಲ.
ಜನರೇಷನ್ ಝಡ್ ಸಂಬಂಧಗಳನ್ನು ಹೊಸ ರೀತಿಯಲ್ಲಿ ನೋಡುತ್ತಿದೆ. ಸ್ನೇಹ, ಪ್ರೀತಿ,
ಕುಟುಂಬ ಎಲ್ಲಾ ವಿಷಯಗಳಲ್ಲಿ ಹೆಚ್ಚು ವೈಯಕ್ತಿಕ ಸ್ವಾತಂತ್ರ್ಯವನ್ನು ಬಯಸುತ್ತಿದೆ. ಆದರೆ ವೇಗದ ಬದುಕಿನ ನಡುವೆ ಸಂಬಂಧಗಳ ಆಳ ಮತ್ತು ಬದ್ಧತೆ ಕೆಲವೊಮ್ಮೆ ಕಡಿಮೆಯಾಗುತ್ತಿದೆ. ತಂತ್ರಜ್ಞಾನ ಜನರನ್ನು ಜೋಡಿಸಿದರೂ,
ಮನಸ್ಸುಗಳ ನಡುವೆ ಅಂತರ ಹೆಚ್ಚುತ್ತಿರುವು ತುಂಬಾ ಕಳವಳಕಾರಿ ವಿಷಯ. ಒಂದೇ ಮನೆಯೊಳಗೆ ಕುಳಿತವರೂ ಮೊಬೈಲ್ ಮೂಲಕವೇ ಹೆಚ್ಚು ಸಂಪರ್ಕದಲ್ಲಿರುವುದು ಇಂದಿನ ವಾಸ್ತವಕ್ಕೆ ಹಿಡಿದ ಕನ್ನಡಿ.
ಸಂಪ್ರದಾಯಬದ್ಧ ಉದ್ಯೋಗ ಧೋರಣೆಗಳನ್ನು ಬದಲಿಸಿದ ಈ ಪೀಳಿಗೆ ಕೇವಲ ಸಂಬಳಕ್ಕಾಗಿ ಕೆಲಸ ಮಾಡುವುದಕ್ಕಿಂತ,
ತಮ್ಮ ಆಸಕ್ತಿ ಮತ್ತು ಜೀವನದ ಸಮತೋಲನಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ .ಸ್ಟಾರ್ಟ್ಅಪ್, ಫ್ರೀಲಾನ್ಸ್
ಡಿಜಿಟಲ್ ಕ್ರಿಯೇಟಿವಿಟಿ ಮುಂತಾದ ಹೊಸ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಿದೆ. ಆದರೆ ತಕ್ಷಣ ಫಲಿತಾಂಶ ಬೇಕೆಂಬ ಮನೋಭಾವದಿಂದ ತಾಳ್ಮೆ ಕಡಿಮೆಯಾಗುತ್ತಿರುವುದು ಹೆಚ್ಚಾಗಿ ಗೋಚರಿಸುತ್ತಿದೆ. ಗೆದ್ದೆ ಎಂದು ಮೆರೆಯುವವನಿಗೆ ಸೋಲನ್ನು ಸ್ವೀಕರಿಸುವ ಮನೋಸ್ಥೈರ್ಯ ಕೂಡ ಅಷ್ಟೇ ಪ್ರಮಾಣದಲ್ಲಿ ಇರಬೇಕಾಗುತ್ತದೆ ಆದರೆ ಅದು ಈ ಪೀಳಿಗೆಯಲ್ಲಿ ಕಡಿಮೆಯಾಗುತ್ತಿದ್ದು ಅದನ್ನು ಜಾಗೃತಗೊಳಿಸುವ ಕೆಲಸ ಹೆಚ್ಚಾಗಿ ಆಗಬೇಕಾಗಿದೆ.
ಪ್ರತಿ ಪೀಳಿಗೆಯೂ ತನ್ನದೇ ಆದ ವೈಶಿಷ್ಟ್ಯ ಮತ್ತು ಸವಾಲುಗಳನ್ನು ಹೊಂದಿರುತ್ತದೆ. ಜನರೇಷನ್ ಝಡ್ ಅನ್ನು ಕೇವಲ “ಮೊಬೈಲ್ ಪೀಳಿಗೆ” ಎಂದು ಟೀಕಿಸುವುದು ಕೂಡ ಸರಿಯಲ್ಲ; ಹಾಗೆಯೇ ಅವರನ್ನು ಅತಿಯಾಗಿ ಹೊಗಳುವುದು ಕೂಡ ಸರಿಯಾದ ಕ್ರಮವಲ್ಲ. ಇವರು ವೇಗದ ಯುಗದ ಮಕ್ಕಳು, ಅಪಾರ ಮಾಹಿತಿ, ಅನೇಕ ಆಯ್ಕೆಗಳು ಮತ್ತು ನಿರಂತರ ಸ್ಪರ್ಧೆಯ ನಡುವೆ ತಮ್ಮ ಗುರುತನ್ನು ಹುಡುಕುತ್ತಿರುವ ಪೀಳಿಗೆ. ಯಾವ ಪೀಳಿಗೆಯೆ ಬರಲಿ ನಾವು ಸ್ವಾಗತಿಸೋಣ ಆದರೆ ಬರುವಂತ ಎಲ್ಲಾ ಸಮೂದಾಯಗಳು ಪ್ರಕೃತಿಯ ನಿಯಮಗಳನ್ನು ಗೌರವಿಸಿ ವ್ಯವಸ್ಥೆಯನ್ನು ಪರಸ್ಪರ ಗೌರವಿಸುತ್ತಾ ಸರಿಯಾದ ಮಾರ್ಗದರ್ಶನ, ಮೌಲ್ಯಾಧಾರಿತ ಶಿಕ್ಷಣ ಮತ್ತು ಮಾನವೀಯ ಸಂವೇದನೆಗಳೊಂದಿಗೆ ಬೆಳೆದರೆ, ಈ ಪೀಳಿಗೆಯಿಂದ ಸಮಾಜಕ್ಕೆ ಹೊಸ ದಿಕ್ಕು ಸಿಗಬಲ್ಲದು. ತಂತ್ರಜ್ಞಾನ ಕೈಯಲ್ಲಿ ಇರಬೇಕು; ಮನಸ್ಸಿನ ಮೇಲೆ ಕುಳಿತು ಈ ಪೀಳಿಗೆಯನ್ನು ಆಳಬಾರದು. ಅದೇ ಝೇನ್ ಜೀ ಗಳು ಎಂದು ಕರೆಸಿಕೊಳ್ಳುತ್ತಿರುವವರು ಎದುರಿಸುತ್ತಿರುವ ದೊಡ್ಡ ಪ್ರಶ್ನೆ ಮತ್ತು ದೊಡ್ಡ ಸವಾಲು.