Friday, 6 March 2026

ಮಹಿಳೆ – ಸಾಧನೆ, ಸವಾಲು ಮತ್ತು ಸಮಾಜದ ಪ್ರತಿಬಿಂಬ

 ಕೆ.ಎಸ್.ಧನಂಜಯ

                

 ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀಎಂಬ ಮಾತು ನಮ್ಮ ಸಂಸ್ಕೃತಿಯ ಮಹತ್ತರವಾದ ಮೌಲ್ಯವನ್ನು ಹೇಳುತ್ತದೆ. ಜನ್ಮ ನೀಡುವ ತಾಯಿ ಮತ್ತು ಜನ್ಮ ಭೂಮಿ ಎರಡೂ ಸ್ವರ್ಗಕ್ಕಿಂತಲೂ ಮಹತ್ತರವೆಂದು ನಾವು ಘೋಷಿಸುತ್ತೇವೆ. ಆದರೆ ಮಾತುಗಳನ್ನು ಉಚ್ಚರಿಸುವ ಸಮಾಜದಲ್ಲೇ, ತಾಯಿ, ಮಹಿಳೆ ಎದುರಿಸುತ್ತಿರುವ ಸವಾಲುಗಳು ಇನ್ನೂ ಕಡಿಮೆಯಾಗಿಲ್ಲ ಎಂಬುದು ನಗ್ನ ಸತ್ಯ. ಹೆಂಗಸರು ಪುರುಷರಿಗಿಂತ ಕಡಿಮೆ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದು ತಪ್ಪು ಕಲ್ಪನೆ. ಇತ್ತೀಚಿನ ವರ್ಷದಲ್ಲಿ ಬರುವ ಪರೀಕ್ಷೆಗಳ ಫಲಿತಾಂಶಗಳನ್ನು ನೋಡಿದರೆ, ಬಹುತೇಕ ಸಂದರ್ಭಗಳಲ್ಲಿ ಹುಡುಗಿಯರೇ ಹೆಚ್ಚು ಶೇಕಡಾವಾರು ಅಂಕಗಳನ್ನು ಪಡೆದು ಮುಂಚೂಣಿಯಲ್ಲಿ ಕಾಣಿಸುತ್ತಾರೆ. ಶಾಲೆಯ ತರಗತಿಗಳಲ್ಲಿ ಶಿಸ್ತಿನಿಂದ ಓದುತ್ತಿರುವ, ಪರಿಶ್ರಮದಿಂದ ಮುಂದುವರಿಯುವ ಹೆಣ್ಣುಮಕ್ಕಳು ಸಮಾಜದ ಭವಿಷ್ಯದ ಬೆಳಕಾಗಿ ಕಾಣುತ್ತಾರೆ ಎನ್ನುವುದು ನಿಜ , ಪರೀಕ್ಷಾ ಫಲಿತಾಂಶಗಳಲ್ಲಿ ಸಾಧನೆ  ಮೆರೆದ ಹುಡುಗಿಯರು ಮುಂದಿನ ಜೀವನದ ಹಾದಿಯಲ್ಲಿ ಎಲ್ಲಿ ಕಾಣೆಯಾಗುತ್ತಾರೆ? ಬಹಳಷ್ಟು ಸಂದರ್ಭಗಳಲ್ಲಿ ಶಿಕ್ಷಣದ ನಂತರ ಅವರ ಸಾಧನೆಗೆ ಅವಕಾಶಗಳು ಕಡಿಮೆಯಾಗುತ್ತದೆಯೋ ?  ಮನೆಯ ಹೊಣೆಗಾರಿಕೆಗಳು, ವಿವಾಹದ  ಒತ್ತಡ, ಉದ್ಯೋಗದಲ್ಲಿ ಇರುವ ಅಸಮಾನತೆ, ಸುರಕ್ಷತೆಗೆ ಸಂಬಂಧಿತ ಆತಂಕಗಳು  ಇವುಗಳೆಲ್ಲ ಸೇರಿ ಅವರ ಕನಸುಗಳನ್ನು ಸೀಮಿತಗೊಳಿಸುತ್ತವೆಯೇ ? ಎಂಬುದು ಸಾಮಾಜಿಕ ಜನ ಜೀವನದಲ್ಲಿ ಮರೆಯಾಗಿರುವ ಸತ್ಯ ಒಂದೆಡೆಯಾದರೆ,  ಪ್ರತಿಭೆ ಇರುವ ಮಹಿಳೆಯರಿಗೆ ಇನ್ನೂ ಸಮಾನ ವೇದಿಕೆ ಸಿಗದಿರುವುದು ಮತ್ತೊಂದು ಸತ್ಯ.

ನೀವು ಕೊಡಗು ಮತ್ತು ಕರಾವಳಿ ಭಾಗದ ಸ್ತ್ರೀ ಸಮಾನತೆಯ ಪ್ರಾತಿನಿಧ್ಯವನ್ನು ಗಮನಿಸಿದರೆ ಅಲ್ಲಿ ನಿಮಗೆ ಕಾಣ ಸಿಗುವುದು ಅಳಿಯಕಟ್ಟು ಪದ್ದತಿ ಇದು ಆ ಭಾಗದಲ್ಲಿ ಸ್ತ್ರೀಯರಿಗೆ ದೊರೆತ ಗೌರವ ಎಂದರೆ ತಪ್ಪಾಗಲಿಕ್ಕಿಲ್ಲ , ಕರಾವಳಿ ಭಾಗದಲ್ಲಿ ಮದುವೆಯಾಗಿ ಹೋದ ಹೆಣ್ಣು ಮಗಳಿಗೆ ತನ್ನ ತಾಯಿಯ ಕುಟುಂಬವೇ ಪ್ರಧಾನ ಎನಿಸುತ್ತದೆ ಹೊರತು ತಂದೆಯ ಕುಟುಂಬವಲ್ಲ. ದೈವಾರಾಧನೆ ಜನಪದ , ಹುಟ್ಟು ಸಾವು  ಸೂತಕ ಎಲ್ಲವೂ ತಾಯಿಯ ಕುಟುಂಬದಲ್ಲಿ ನಡೆದರೆ ಅದು ಆತ/ಆಕೆ ಗೆ ಪ್ರಮುಖವಾಗಿ ಅನ್ವಯವಾಗುತ್ತದೆ. ಕುಟುಂಬದಲ್ಲಿ ಸ್ತ್ರೀಯರಿಗೆ ನೀಡಲ್ಪಟ್ಟ ಪ್ರಮುಖ ಸ್ಥಾನಮಾನ. ಮನೆಯ ಮೂಲವಂಶ ಮಹಿಳೆಯ ಮೂಲಕ ಮುಂದುವರಿಯುತ್ತದೆ ಎಂಬ ನಂಬಿಕೆ ಇದರಲ್ಲಿ ಕಾಣಿಸುತ್ತದೆ. ಕೇವಲ ಮನೆಯ ಸದಸ್ಯೆಯಾಗಿ ಮಾತ್ರವಲ್ಲ, ಕುಟುಂಬದ ಕೇಂದ್ರ ಬಿಂದುವಾಗಿ ಪರಿಗಣಿಸುವ ಸಾಮಾಜಿಕ ಚಿಂತನೆಯನ್ನೂ ಪ್ರತಿಬಿಂಬಿಸುತ್ತದೆ. ಇದರಿಂದ ಕಂಡು ಕೊಳ್ಳುವ ಅಂಶ ಎಂದರೆ ಮಹಿಳೆಯ ಗೌರವ ಮತ್ತು ಅವರ ಪಾತ್ರವನ್ನು ಗುರುತಿಸುವ ಸಮಾಜವೇ ಸಮತೋಲನದ ಸಮಾಜವಾಗುತ್ತದೆ. ಈ ಎಲ್ಲದರ ನಡುವೆಯೂ ಮಹಿಳೆ ತನ್ನ ಸಾಮರ್ಥ್ಯವನ್ನು ಮತ್ತೆ ಮತ್ತೆ ಸಾಬೀತು ಮಾಡುತ್ತಲೇ ಇದ್ದಾಳೆ. ವಿಜ್ಞಾನದಿಂದ ಸಾಹಿತ್ಯದವರೆಗೆ, ಆಡಳಿತದಿಂದ ಕ್ರೀಡೆಯವರೆಗೆ  ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯ ಸಾಧನೆಗಳು ಸಮಾಜದ ದಿಕ್ಕನ್ನು ಬದಲಿಸುತ್ತಿವೆ.

 ಮಹಿಳಾ ದಿನಾಚರಣೆ ಕೇವಲ ಒಂದು ದಿನದ ಆಚರಣೆ ಆಗಬಾರದು. ವರ್ಷಕ್ಕೆ ಒಂದು ದಿನ ಹೂಮಾಲೆ ಹಾಕಿ, ಅಭಿನಂದನೆ ಹೇಳಿ, ನಂತರ ಮರೆತು ಬಿಡುವ ಕಾರ್ಯಕ್ರಮವಾಗಬಾರದು. ಮಹಿಳೆಯ ಗೌರವ ಮತ್ತು ಸಮಾನತೆಯ ವಿಚಾರವು ದಿನನಿತ್ಯದ ಬದುಕಿನಲ್ಲಿ ಕಾಣಿಸಿಕೊಳ್ಳಬೇಕು. ಮನೆ, ಶಾಲೆ, ಕಚೇರಿ, ಸಮಾಜ ಎಲ್ಲೆಡೆ ಮಹಿಳೆಗೆ ಸಮಾನ ಅವಕಾಶ, ಗೌರವ ಮತ್ತು ಸುರಕ್ಷತೆ ದೊರಕಬೇಕು. ಮಹಿಳೆ ಮತ್ತು ಪುರುಷರು ಸಮಾನ ಹಕ್ಕುಗಳೊಂದಿಗೆ ಸಮಾಜದಲ್ಲಿ ಮುಂದೆ ಸಾಗುತ್ತಿರುವ ಕಾಲದಲ್ಲಿಯೂ, ಅವರ ದೈಹಿಕ ಮತ್ತು ಪ್ರಾಕೃತಿಕ ಲಕ್ಷಣಗಳಲ್ಲಿ ಕೆಲವು ಭಿನ್ನತೆಗಳಿರುವುದು ಸಹಜ. ವಿಶೇಷವಾಗಿ ಕೆಲಸದ ಸ್ಥಳಗಳಲ್ಲಿ ಪುರುಷ ಅಧಿಕಾರಿಗಳು ಮಹಿಳಾ ಸಹೋದ್ಯೋಗಿಗಳೊಂದಿಗೆ ವರ್ತಿಸುವಾಗ ಪ್ರಾಕೃತಿಕ ಬದಲಾವಣೆಗಳನ್ನು ಗೌರವಿಸುವುದು ಅತ್ಯಂತ ಅಗತ್ಯ. ಹಲವಾರು ಸಮಯದಲ್ಲಿ ಅಮ್ಮ, ತನ್ನ ಮಗಳು  , ತನ್ನ ಮಡದಿ  ಅಥವಾ ಪ್ರತಿದಿನ ಸೌಮ್ಯವಾಗಿ, ಸಂತೋಷದಿಂದ ಎಲ್ಲರೊಂದಿಗೆ ಮಾತನಾಡುವ ಒಬ್ಬ ಮಹಿಳಾ ಉದ್ಯೋಗಿ ಏಕಾಏಕಿ ಸ್ವಲ್ಪ ಕಿರಿಕಿರಿಯ ಸ್ವಭಾವ ತೋರಬಹುದು. ಸಣ್ಣ ವಿಷಯಕ್ಕೂ ವಾದಿಸಬಹುದು, ಅಸಹನೆ ವ್ಯಕ್ತಪಡಿಸಬಹುದು, ಕೆಲವೊಮ್ಮೆ  ತಪ್ಪುಗಳನ್ನು ಮಾಡಬಹುದು ಅಥವಾ ಭಾವನಾತ್ಮಕವಾಗಿ ಕಣ್ಣೀರಿಟ್ಟುಕೊಳ್ಳಬಹುದು.  ಇದು ಕೇವಲ ಕೆಲವರ ಮನೆಯ ಕೆಲವು ಕಚೇರಿಯ ಕಥೆಯಲ್ಲ ನಮ್ಮ ಮನೆಗಳಲ್ಲಿಯೂ ಇಂತಹ ಅನುಭವಗಳು ಕಂಡುಬರುತ್ತವೆ  ಈ ಬದಲಾವಣೆಗಳು ನಮ್ಮ ಅಕ್ಕ, ಅಮ್ಮ ತಂಗಿ, ಮಡದಿಯರ ಮಧ್ಯೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅದು ನಿಶ್ಚಯವಾಗಿ ಆಕೆಯ ಮಾಸಿಕ ಚಕ್ರದ ದಿನಗಳಲ್ಲಿ ಕಾಣಿಸಿಕೊಳ್ಳುವ ಪ್ರಾಕೃತಿಕ ಪರಿಣಾಮಗಳಾಗಿರಬಹುದು. ವೈಜ್ಞಾನಿಕವಾಗಿ ನೋಡಿದರೆ, ಈ ಸಮಯದಲ್ಲಿ ಮಹಿಳೆಯ ದೇಹದಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನಿನ ಪ್ರಮಾಣದಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಈ ಹಾರ್ಮೋನು ಮಹಿಳೆಯ ದೈಹಿಕ ಚೈತನ್ಯ ಮತ್ತು ಮಾನಸಿಕ ಸಮತೋಲನಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಮಟ್ಟ ಕಡಿಮೆಯಾಗುವ ಸಂದರ್ಭದಲ್ಲಿ ಮಹಿಳೆ ದೈಹಿಕವಾಗಿ ದುರ್ಬಲವಾಗಬಹುದು, ಮಾನಸಿಕವಾಗಿ ಸ್ವಲ್ಪ ಕುಗ್ಗಿದಂತಾಗಬಹುದು. ಮಹಿಳೆಯ ದೇಹದಲ್ಲಿ ಸಮತೋಲನದಲ್ಲಿರುವಾಗ ಆಕೆ ಲವಲವಿಕೆಯಿಂದ, ಉತ್ಸಾಹದಿಂದ ತನ್ನ ಕೆಲಸಗಳನ್ನು ನಿರ್ವಹಿಸುತ್ತಾಳೆ. ಆದ್ದರಿಂದ ಮಹಿಳೆಯ ಪ್ರಾಕೃತಿಕ ಬದಲಾವಣೆಗಳನ್ನು ಅರ್ಥೈಸುವುದು ಮತ್ತು ಗೌರವಿಸುವುದು ಕೇವಲ ವೈಯಕ್ತಿಕ ಸಂವೇದನೆಯಲ್ಲ, ಸುಸಂಸ್ಕೃತ ಸಮಾಜದ ಲಕ್ಷಣವೂ ಹೌದು. ಇಂತಹ ಸಂದರ್ಭಗಳಲ್ಲಿ ಸಹೋದ್ಯೋಗಿಗಳಾಗಲಿ, ಕುಟುಂಬದ ಸದಸ್ಯರಾಗಲಿ ವಿಶೇಷವಾಗಿ ಗಂಡ ಅಥವಾ ಪುರುಷ ಅಧಿಕಾರಿಗಳಾಗಲಿ ಮಹಿಳೆಯೊಂದಿಗೆ ಹೆಚ್ಚು ಸಂವೇದನಾಶೀಲವಾಗಿ, ಸಹಾನುಭೂತಿಯಿಂದ ಮಾತನಾಡುವುದು ಅಗತ್ಯ. ಅರ್ಥೈಸುವ ಮನೋಭಾವ ಮತ್ತು ಸಹಕಾರದ ವಾತಾವರಣ ಮಹಿಳೆಗೆ ಬಹಳಷ್ಟು ಧೈರ್ಯ ನೀಡುತ್ತದೆ.

ಒಂದು ಸಮಾಜ ಎಷ್ಟು ಪ್ರಗತಿ ಶೀಲವೋ ಎಂಬುದನ್ನು ಅಳೆಯುವ ಒಂದು ಪ್ರಮುಖ ಮಾನದಂಡ ಮಹಿಳೆಯ ಸ್ಥಾನಮಾನ. ಮಹಿಳೆಗೆ ಗೌರವ, ಅವಕಾಶ ಮತ್ತು ಭದ್ರತೆ ದೊರಕಿದಾಗ ಮಾತ್ರ ಸಮಾಜ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹೊಂದುತ್ತದೆ. ಮಹಿಳೆಯನ್ನು ಗೌರವಿಸುವುದು ಎಂದರೆ ಮಾನವೀಯತೆಯನ್ನು ಗೌರವಿಸುವುದು. ಇಲ್ಲದೆ ಹೋದರೆ ಸ್ತ್ರೀ ಎಂದರೆ ಅಷ್ಟೇ ಸಾಕೆ ,ಎಲ್ಲಿ ಹೆಂಗಸರನ್ನು ದೇವಿಯಂತೆ ಪೂಜಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ.” ಎನ್ನುವುದು ಕೇವಲ ಪುಸ್ತಕದಲ್ಲಿ ಸಿಗುವ ಸುಂದರ ವಾಕ್ಯವಾಗಿ ಉಳಿದು ಬಿಡುತ್ತದೆ.  ಹಾಗಾಗ ಬಾರದು ಎಂದಾದರೆ ಆಚರಣೆ ನಮ್ಮ ನಡೆ ನುಡಿಗಳಲ್ಲೂ ಕಾಣಿಸಬೇಕು. ಮಹಿಳೆಯನ್ನು ಗೌರವಿಸುವುದು ಎಂದರೆ ಅವಳ ಭಾವನೆಗಳನ್ನು, ಆರೋಗ್ಯವನ್ನು ಮತ್ತು ಅವಳ ಪ್ರಾಕೃತಿಕ ಸ್ಥಿತಿಯನ್ನು ಅರ್ಥೈಸುವುದೂ ಆಗಿದೆ. ಮಹಿಳೆಯ ಮೇಲೆ ಗೌರವ ಕೇವಲ ಮಾತಿನಲ್ಲಿ ಮಾತ್ರವಲ್ಲ, ಅವಳಿಗೆ ಅಗತ್ಯವಿರುವ ಸಮಯದಲ್ಲಿ ವಿಶ್ರಾಂತಿ, ಸಹಾನುಭೂತಿ ಮತ್ತು ಬೆಂಬಲ ನೀಡುವಲ್ಲಿ ವ್ಯಕ್ತವಾಗಬೇಕು. ಅಂದಾಗ ಮಾತ್ರ “ಮಹಿಳೆ ದೇವಿ” ಎಂಬ ಮಾತು ಒಂದು ಘೋಷಣೆಯಾಗಿ ಉಳಿಯದೆ, ಸಮಾಜದ ಸಂಸ್ಕೃತಿ ಮತ್ತು ಮಾನವೀಯತೆಯ ಜೀವಂತ ಮೌಲ್ಯದ ಜೊತೆಗೆ ಸಮಾನತೆ, ಗೌರವ ಮತ್ತು ಸಂಸ್ಕೃತಿಯ ನಿರಂತರ ಪಯಣವಾಗುತ್ತದೆ.

Saturday, 31 January 2026

ತಂತ್ರಜ್ಞಾನ ನಮ್ಮ ಸೇವಕವಾಗಬೇಕು, ಮಾಲೀಕನಾಗಬಾರದು.

 ಕೆ.ಎಸ್.‌ ಧನಂಜಯ 



           ಮಾನವನ ಇತಿಹಾಸದಲ್ಲಿ ಸಂವಹನವೆಂಬುದು ಸದಾ ಬದಲಾಗುತ್ತಲೇ ಬಂದಿದೆ. ಒಮ್ಮೆ ಪತ್ರಗಳ ಕಾಲ, ನಂತರ ಟೆಲಿಫೋನ್‌, ಆಮೇಲೆ ಮೊಬೈಲ್‌—ಇಂದು ಡಿಜಿಟಲ್ ಸಂದೇಶಗಳ ಯುಗ. ಯುಗದ ಅತ್ಯಂತ ಜನಪ್ರಿಯ ಪ್ರತಿನಿಧಿ ವಾಟ್ಸಾಪ್. ಇದು ಕೇವಲ ಒಂದು ಅಪ್ಲಿಕೇಶನ್ ಅಲ್ಲ, ಸಂಬಂಧಗಳನ್ನು ಜೋಡಿಸುವ ಸೇತುವೆ. ದೂರವನ್ನು ಹತ್ತಿರವಾಗಿಸುವ ಸಾಧನ. ಕ್ಷಣಾರ್ಧದಲ್ಲಿ ಭಾವನೆಗಳನ್ನು ಹಂಚಿಕೊಳ್ಳುವ ವೇದಿಕೆ. ಸಂತೋಷದ ಸುದ್ದಿಯನ್ನೂ, ನೋವಿನ ಸಂಗತಿಗಳನ್ನೂ ಒಂದೇ ಕ್ಲಿಕ್ಕಿನಲ್ಲಿ ತಲುಪಿಸುವ ಶಕ್ತಿ ಇದಕ್ಕಿದೆ. ಆದರೆ ಶಕ್ತಿಶಾಲಿ ಸಾಧನವನ್ನು ನಾವು ಹೇಗೆ ಬಳಸುತ್ತೇವೆ ಎಂಬುದೇ ಮುಖ್ಯ. ಜವಾಬ್ದಾರಿಯುತ ಬಳಕೆ ಮಾಡಿದರೆ ವಾಟ್ಸಾಪ್ ವರವಾಗುತ್ತದೆ. ಅಜಾಗರೂಕ ಬಳಕೆ ಮಾಡಿದರೆ ಅದೇ ಶಾಪವಾಗಬಹುದು. ಹಿನ್ನೆಲೆಯಲ್ಲೇ, ವಾಟ್ಸಾಪ್ ಇತಿಹಾಸ, ಅದರ ಬೆಳವಣಿಗೆ, ಉಪಯೋಗ, ಒಳಿತು-ಕೆಡುಕು ಮತ್ತು ಜವಾಬ್ದಾರಿಯುತ ಬಳಕೆಯ ಅರಿವು ಸಮಾಜಕ್ಕೆ ಅಗತ್ಯವಾಗಿದೆ.

           ವಾಟ್ಸಾಪ್‌ ಕಂಡು ಹಿಡಿದವನ ಯಶೋಗಾಥೆ ಬಗ್ಗೆ ಹೇಳಿದರೆ ಅದೋಂದು ಬೇರೆಯೆ ಲೇಖನ ಆಗುತ್ತದೆ ಆದರೂ ಜಾನ್ ಕೂಮ್ ಮತ್ತು ಬ್ರಿಯನ್ ಆಕ್ಟನ್  ಹೋರಾಟದ ಮೂಲಕ ಬದುಕು ಕಟ್ಟಿಕೊಂಡವರು.  ಉಕ್ರೇನ್ ದೇಶದ ಒಂದು ಸಣ್ಣ ಗ್ರಾಮದಲ್ಲಿ ಆರ್ಥಿಕವಾಗಿ ತುಂಬಾ ಕಷ್ಟಕರ ಪರಿಸ್ಥಿತಿಯಲ್ಲಿ , ಬಾಲ್ಯದಲ್ಲಿ ವಿದ್ಯುತ್‌, ಶುದ್ಧ ನೀರು, ದೂರವಾಣಿ ಮೊದಲಾದ ಮೂಲ ಸೌಲಭ್ಯಗಳೇ ಸರಿಯಾಗಿ ಲಭ್ಯವಿಲ್ಲದ ಊರಿನಲ್ಲಿ ಜನಿಸಿದ ಜಾನ್‌ ಕೂಮ್‌  1992ರಲ್ಲಿ, ಉತ್ತಮ ಬದುಕಿನ ಕನಸಿನೊಂದಿಗೆ  ತನ್ನ ತಾಯಿಯೊಂದಿಗೆ ಅಮೆರಿಕಕ್ಕೆ ವಲಸೆ ಹೋಗಿ ರೇಷನ್‌ ಅಂಗಿಡಿಯಲ್ಲಿ ಸರದಿ ಸಾಲಿನಲ್ಲಿ ನಿಂತು ಆಹಾರ ಮುಂತಾದನ್ನು ಪಡೆಯುತ್ತಿದ್ದವ. ಕಷ್ಟಪಟ್ಟು ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಕಲಿತು ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಜಾನ್ ಕೂಮ್ ಮತ್ತು ಬ್ರಿಯನ್ ಆಕ್ಟನ್  ಯಾಹೂನಲ್ಲಿ ಕೆಲಸ ಮಾಡಿದರು. ನಂತರ ಕೆಲಸದಿಂದ ಹೊರಬಂದು, ಹೊಸದೇನಾದರೂ ಮಾಡುವ ಕನಸನ್ನು ಕಟ್ಟಿಕೊಂಡರು. ದುರಂತವೆಂದರೆ ಆ ಕಾಲಕ್ಕೆ ಫೇಸ್‌ಬುಕ್ ಹಾಗೂ ಟ್ವಿಟರ್ ಕಂಪನಿಗಳಿಗೆ ಉದ್ಯೋಗಕ್ಕೆ ಅರ್ಜಿ ಹಾಕಿದರೂ ಇವರಿಬ್ಬರಿಗೂ ಆ ಸಮಯದಲ್ಲಿ ಅವಕಾಶ ಸಿಕ್ಕಿರಲಿಲ್ಲ ಎನ್ನುವುದು ಆಶ್ಚರ್ಯವೇ ಸರಿ . ಬಡತನ, ನಿರಾಕರಣೆ, ವಿಫಲತೆಗಳು ಎಂದಿಗೂ ಅಂತಿಮವಲ್ಲ. ಕನಸು ಮತ್ತು ಶ್ರಮ ಇದ್ದರೆ, ಅವುಗಳೇ ಯಶಸ್ಸಿನ ಮೆಟ್ಟಿಲುಗಳು ಅದರ ಫಲವೇ 2009 ರಲ್ಲಿ ವಾಟ್ಸ್ ಪ್‌  ಹುಟ್ಟಿಕೊಂಡಿತ್ತು.

            ಡಿಜಿಟಲ್ ಯುಗದಲ್ಲಿ ವಾಟ್ಸಾಪ್‌ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಸಂದೇಶ, ಧ್ವನಿ ಕರೆ, ವಿಡಿಯೋ ಕರೆ, ಚಿತ್ರ-ವೀಡಿಯೋ ಹಂಚಿಕೆ all-in-one ವೇದಿಕೆಯಾಗಿ ವಾಟ್ಸಾಪ್ ಜನಪ್ರಿಯವಾಗಿದೆ. ಆದರೆ ಇದರ ಒಳಗಿರುವ ಅನೇಕ ಉಪಯುಕ್ತ ಸೆಟ್ಟಿಂಗ್‌ಗಳ ಬಗ್ಗೆ ಬಹುತೇಕ ಬಳಕೆದಾರರಿಗೆ ಪೂರ್ಣ ಅರಿವು ಇಲ್ಲ. ಈ ಸೆಟ್ಟಿಂಗ್‌ಗಳನ್ನು ಸರಿಯಾಗಿ ಬಳಸಿದರೆ, ವಾಟ್ಸಾಪ್ ಬಳಕೆ ಇನ್ನಷ್ಟು ಸುರಕ್ಷಿತ ಮತ್ತು ಸುಲಭವಾಗುತ್ತದೆ.

 ವಾಟ್ಸಾಪ್‌ನ ಪ್ರಮುಖ ಸೆಟ್ಟಿಂಗ್‌ಗಳಲ್ಲಿ ಗೌಪ್ಯತಾ ನಿಯಂತ್ರಣ ಅತ್ಯಂತ ಮುಖ್ಯವಾಗಿದೆ. ( Settings → Privacy)   ನಿಮ್ಮ ಕೊನೆಯ ಬಾರಿ ಆನ್ಲೈನ್ಆಗಿದ್ದ ಸಮಯವನ್ನು ಯಾರಿಗೆ ಕಾಣಬೇಕು ಎಂದು ಆಯ್ಕೆಮಾಡಬಹುದು.( Last Seen), ನಿಮ್ಮ ಫೋಟೋ ಸಂಪರ್ಕದಲ್ಲಿರುವ ಎಲ್ಲಾರಿಗೆ ಅಥವಾ ಕೆಲವೇ ಮಂದಿಗೆ, ಅಥವಾ ಯಾರಿಗೂ ಕಾಣದಂತೆ ಮಾಡಬಹುದು. (  Profile Photo), ನಿಮ್ಮ ಸ್ಟೇಟಸ್‌ ಅನ್ನು ನಿಯಂತ್ರಿಸಬಹುದು. (About)  ಹಾಗೂ  ನೀಲಿ ಟಿಕ್‌ (Blue Tick) ಆನ್‌/ಆಫ್ಮಾಡಬಹುದು ( Read Receipts ) ಆಯ್ಕೆಗಳ ಮೂಲಕ ಯಾರು ಯಾವ ಮಾಹಿತಿಯನ್ನು ನೋಡಬೇಕು ಎಂಬುದನ್ನು ಬಳಕೆದಾರರು ತಾವೇ ನಿರ್ಧರಿಸಬಹುದು. ಇದರಿಂದ ವೈಯಕ್ತಿಕತೆ ಕಾಪಾಡಿಕೊಳ್ಳಲು ಸಾಧ್ಯ.

ಇಂದಿನ ಹಣ ಕಬಳಿಸುವಿಕೆ ಹ್ಯಾಕಿಂಗ್‌ ಮುಂತಾದ  ತೊಂದರೆಗಳನ್ನು ತಪ್ಪಿಸಲು ಖಾತೆಯ ಭದ್ರತೆ ಬಹಳ ಮುಖ್ಯ Two-Step Verification ( Settings → Account → Two-Step Verification) ಸೆಟ್ಟಿಂಗ್‌ ಬಹಳ ಉಪಯುಕ್ತ. ಇದರಲ್ಲಿ ಪಿನ್ ಸಂಖ್ಯೆಯನ್ನು ಸೆಟ್ ಮಾಡಿದರೆ, ಯಾರಾದರೂ ನಿಮ್ಮ ನಂಬರ್‌ ಬಳಸಿ ಲಾಗಿನ್‌ ಮಾಡಲು ಪ್ರಯತ್ನಿಸಿದರೆ ಈ ಪಿನ್‌ ಅಗತ್ಯವಾಗುತ್ತದೆ. ಈ ಪಿನ್‌ ಬಳಸದೆ ಇರುವ ವಾಟ್ಸ್‌ಪ್‌ಗಳನ್ನು ಖದೀಮರು ಬಹಳ ಬೇಗನೆ ಹ್ಯಾಕ್‌ ಮಾಡಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರೆ. ನೀವು ಪಿನ್‌ ಸಂಖ್ಯೆ ನೀಡಿದ್ದೇ ಆದಲ್ಲಿ ಅನ್ಯ ವ್ಯಕ್ತಿಗಳು ಪ್ರಯತ್ನಿಸಿಸ ಕೂಡಲೇ ನಿಮ್ಮ ವಾಟ್ಸ್ ಪ್‌ ಲಾಕ್‌ ಆಗುತ್ತದೆ ನೀವು ನಿಮ್ಮ ಪಿನ್‌ ಸಂಖ್ಯೆ ನೀಡಿ ಅದನ್ನು ಮತ್ತೆ ಯಥಾ ಸ್ಥಿತಿಗೆ ತರಬಹುದು.  

ಫಿಂಗರ್‌ಪ್ರಿಂಟ್ / ಫೇಸ್‌ ಲಾಕ್‌ : ( Settings Privacy Fingerprint Lock / App Lock ) ವಾಟ್ಸಾಪ್‌ ತೆರೆಯಲು ಫಿಂಗರ್‌ಪ್ರಿಂಟ್‌ ಅಥವಾ ಮುಖ ಗುರುತು ಬೇಕಾಗುತ್ತದೆ ಇದರಿಂದ ಅನಧಿಕೃತವಾಗಿ ನಿಮ್ಮ ವಾಟ್ಸ್ ಪ್‌ ಗೆ ಅನ್ಯರು ಪ್ರವೇಶಿಸದಂತೆ ತಡೆಯಬಹುದು.

ಮ್ಯೂಟ್‌ ಮತ್ತು ಕಸ್ಟಮ್‌ ನೋಟಿಫಿಕೇಶನ್‌ ( Chat Contact/Group Info Mute / Custom Notifications ) ನಮಗೆ ಬರುವ ಅನಗತ್ಯ ಗುಂಪುಗಳ  ಸಂದೇಶಗಳಿಂದ ಮುಕ್ತಿ. ಮುಖ್ಯ ವ್ಯಕ್ತಿಗಳಿಗೆ ವಿಭಿನ್ನ ಟೋನ್‌ ಸೆಟ್‌ ಮಾಡುವ ಅವಕಾಶ ಇದೆ.

ಬಹಳಷ್ಟು ಮಂದಿ ಯಾರಿಗೋ ಚಾಟ್‌ ಮಾಡಿ ಅಥವಾ ಬೇಡದ ಸಂದೇಶ ಕಳುಹಿಸಿ ಡಿಲೀಟ್‌ ಮಾಡಿದರೆ ಮುಗಿಯಿತು ಎಂದು ತಿಳಿದುಕೊಂಡಿದ್ದಾರೆ ಆದರೆ ವಾಟ್ಸ್‌ ಪ್‌ ನಲ್ಲಿರುವ ಚಾಟ್‌ ಬ್ಯಾಕಪ್‌ (Chat Backup) Settings Chats Chat Backup ) ಎಷ್ಟು ದಿನದ ಮಾಹಿತಿ ಬೇಕು ಎಂದು ಗೂಗಲ್‌ ಡ್ರೈವ್‌ಗೆ ಬ್ಯಾಕಪ್ ತೆಗೆದುಕೊಳ್ಳಬಹುದು.  ಫೋನ್‌  ಬದಲಿಸಿದರೂ ಚಾಟ್‌ಗಳು ಸುರಕ್ಷಿತವಾಗಿರುತ್ತದೆ.  

ಸ್ಟೋರೇಜ್‌ ಮ್ಯಾನೇಜ್‌ಮೆಂಟ್‌ (Settings Storage and Data Manage Storage ) ಇದು ನಮಗೆ ಹೆಚ್ಚು ಜಾಗ ತೆಗೆದುಕೊಳ್ಳುವ ಫೈಲ್‌ಗಳನ್ನು ಕಂಡು ಅಳಿಸಬಹುದು. ಇದರಿಂದ ನಮ್ಮ ಫೋನ್‌ ಮೆಮೊರಿ ಉಳಿಸಿಕೋಳ್ಳಲು ಸಹಾಯವಾಗುತ್ತದೆ. .

ಡಿಸಪಿಯರಿಂಗ್‌ ಮೆಸೇಜ್‌ (Disappearing Messages) Chat Info Disappearing Messages ) ನಿರ್ದಿಷ್ಟ ಸಮಯದ ಇದರಲ್ಲಿ ಗೊತ್ತು ಮಾಡಿದರೆ ನಮಗೆ ಬಂದಂತಹ ಸಂದೇಶ ಮತ್ತು ಕಳುಹಿಸಿದ  ಸಂದೇಶಗಳು ಸ್ವಯಂ ಅಳಿಸಿ ಹೊಗುತ್ತದೆ.

ಮೀಡಿಯಾ ಆಟೋ ಡೌನ್‌ಲೋಡ್‌ ನಿಯಂತ್ರಣ (Settings Storage and Data Media Auto-Download ) ಕೆಲವು ದೊಡ್ಡ ಗಾತ್ರದ ಫೈಲ್ ಗಳನ್ನು  ವೈಫೈ ಇದ್ದಾಗ ಅಂದರೆ ನಿಮ್ಮ ಪೋನ್‌ ಯಾವುದೇ ವೈಫೈ ಸಂಪರ್ಕ ಹೊಂದಿದ್ದ ಸಮಯದಲ್ಲಿ ಮಾತ್ರ ಪೋಟೋ , ಆಡಿಯೋ,ವಿಡಿಯೋ,ಯಾವುದೇ ತರಹದ ದಾಖಲೆ ಫೈಲ್‌ ಗಳು  ಡೌನ್‌ಲೋಡ್‌ ಆಗುವಂತೆ ಸೆಟ್‌ ಮಾಡಬಹುದು. ಇದರಿಂದ ನಿಮಗೆ ಬೇಡದ ಮಾಹಿತಿ ಡೌನ್‌ ಲೋಡ್‌ ಆಗಿ ಅನಗತ್ಯ  ಡೇಟಾ ವ್ಯಯವಾಗುವುದು ಉಳಿಯುತ್ತದೆ.

ಗ್ರೂಪ್‌ ಪ್ರೈವಸಿ ಸೆಟ್ಟಿಂಗ್‌ ( Settings Privacy Groups ) ನ್ನು ನೀವು ಸೆಟ್‌ ಮಾಡಿಕೊಂಡಿದ್ದೆ ಆದಲ್ಲಿ ಯಾರಾದರೂ ನಿಮ್ಮನ್ನು ಗುಂಪಿಗೆ ಸೇರಿಸುವ ಮೊದಲು ಅನುಮತಿ ಕೇಳಬೇಕಾಗುತ್ತದೆ.ಇದರಿಂದ ನಿಮ್ಮನ್ನು ಅನಗತ್ಯ ಗುಂಪಿಗೆ ಸೇರಿಸಿಕೊಳ್ಳುವುದನ್ನು ತಪ್ಪಿಸಬಹುದು.

ಡಾರ್ಕ್‌ ಮೋಡ್‌ (Settings Chats Theme Dark ) ಕಣ್ಣುಗಳ ಒತ್ತಡ ಕಡಿಮೆ ಮಾಡುವುದಲ್ಲದೆ .ಬ್ಯಾಟರಿ ಬಳಕೆಯನ್ನು ಹೆಚ್ಚು ಸಮಯ ಉಪಯೋಗಿಸಿಕೊಳ್ಳ ಬಹುದು.

ಈ ಮೇಲೆ ತಿಳಿಸಿದ ಬದಲಾವಣೆಗಳನ್ನು ನಾವು ಮಾಡಿಕೊಂಡಿದ್ದೆ ಆದರೆ, ಸೆಟ್ಟಿಂಗ್‌ಗಳನ್ನು ಸರಿಯಾಗಿ ಬಳಸಿದರೆ ವಾಟ್ಸಾಪ್‌ ಇನ್ನಷ್ಟು ಸುರಕ್ಷಿತ, ಸುಲಭ ಹಾಗೂ ಜವಾಬ್ದಾರಿಯುತವಾಗುತ್ತದೆ. ತಂತ್ರಜ್ಞಾನವನ್ನು ನಿಯಂತ್ರಿಸೋಣ ತಂತ್ರಜ್ಞಾನ ನಮ್ಮನ್ನು ನಿಯಂತ್ರಿಸದಂತೆ ನೋಡಿಕೊಳ್ಳೋಣ.

Friday, 23 January 2026

ಜಲಜಾ ಶೇಖರ್ ರವರ "ಕನ್ನಡಿಯ ಬಿಂಬ" ಕ್ಕೆ ನನ್ನ ಬೆನ್ನುಡಿ

 ಕೆ.ಎಸ್‌ .ಧನಂಜಯ

                             

   ಜಲಜಾ ಶೇಖರ್ ರವರು ರಚಿಸಿರುವ ಕನ್ನಡಿಯ ಬಿಂಬ ಕೃತಿಯು ತನ್ನ ಅಂತರಂಗದ ಭಾವನೆಗಳನ್ನು ಮತ್ತು ಜೀವನೋತ್ಸವದ ಅತ್ಯುತ್ತಮ ಕ್ಷಣಗಳನ್ನು ಸೆರೆ ಹಿಡಿದಿದೆ. ಏಕೆಂದರೆ ಇಲ್ಲಿರುವ ಕವನಗಳನ್ನು ಗಮನಿಸಿದಾಗ ಒಬ್ಬ ಬರಹಗಾರ್ತಿಗೆ ಜೀವನ ಪ್ರೀತಿಯ ಜೊತೆಗೆ ಏಕಕಾಲದಲ್ಲಿ ಅಂತರಂಗದ ಅನಿಸಿಕೆ ಮತ್ತು ಓದುಗನಿಗೆ  ಕೊಡಬೇಕಾದ ಸತ್ಯ, ಸಂತೋಷವನ್ನು ಒಟ್ಟಾಗಿ ಹಿಡಿದಿಡುವುದು ಸುಲಭದ ಮಾತಲ್ಲ ಅಂತಹ ಕವಿತೆಗಳು ಇಲ್ಲಿ ಅಪೂರ್ವವೆನಿಸುತ್ತದೆ.

ಬಾಲ್ಯ ಯವ್ವನ ಮತ್ತು ಮುಪ್ಪಿನ ನಡುವೆ ಇರುವ ದಿನಗಳು ಯಾವತ್ತೂ ಸ್ಮರಣೀಯ ಮತ್ತು ಅವು ನೆನಪುಗಳ ಮೂಲಕ ಸಂಜೀವಿನಿಗಳು ಇದ್ದಂತೆ. ಅಂತಹ ದಿನಗಳು ದಕ್ಕಿದಷ್ಟು ದಕ್ಕಿಸಿಕೊಂಡಷ್ಟು ಸಂಕಲನದಲ್ಲಿ ಇದೆ.  ವಾಸ್ತವವಾಗಿ ಲೇಖಕಿ ನೇರ ನುಡಿಯ ವ್ಯಕ್ತಿತ್ವ ಬೆಳೆಸಿಕೊಂಡವರು, ವೃತ್ತಿಯಲ್ಲಿ ಶಿಕ್ಷಕಿಯಾಗಿ ಮಕ್ಳಳ ಒಡನಾಟ ಸಹಜವಾಗಿ ಒಡಲು ತುಂಬಿಸುವಷ್ಟು ಅನುಭವ ನೀಡಿದೆ ಎಂದು ಇಲ್ಲಿಯ ಕವನಗಳನ್ನು ಓದಿಕೊಂಡು ಹೋದಾಗ ಸಿಗುವ ಅನುಭವ. ಮಾತ್ರವಲ್ಲ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ ರೀತಿಯೂ ಎದ್ದು ಕಾಣುತ್ತಿದೆ. ಲೇಖಕಿ ಪುಸ್ತಕವಾಗುತ್ತಿದೆ ಎನ್ನುವ ಡಂಬಾಚಾರಕ್ಕೆ ಕಟ್ಟು ಬಿದ್ದು ಯಾವುದನ್ನು ಮುಚ್ಚಿಡುವ ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ ಅದಕ್ಕೆ ಇಲ್ಲಿ ಆಯ್ದುಕೊಂಡ ವಿಷಯಗಳನ್ನು ಗಮನಿಸಿದಾಗ ತಿಳಿದು ಬರುವ ಅಂಶ. ಬಿಡಿ ಬಿಡಿಯ ಮೂಲಕ ಇಡಿಯಾಗಿ ಕಟ್ಟಿ ಕೊಡುವ ಕೆಲಸ ಸೊಗಸಾಗಿ ಪೂರೈಸಿದ್ದಾರೆ.

ಅನುಭವ ಯಾವತ್ತೂ ತಮ್ಮೊಬ್ಬರ ಸ್ವತ್ತಾಗಬಾರದು ಅದು ಸಮಾಜಕ್ಕೆ ರವಾನೆಯಾಗುವುದರ ಮೂಲಕ ಜನರನ್ನು ಚಿಂತನೆಗೆ ಒಳಪಡಿಸಬೇಕು ಎನ್ನುವ ಸಂದೇಶ ಈ ಕವನ ಸಂಕಲನ ಮೂಲಕ ಎದ್ದು ಕಾಣುವ ಅಂಶ. ಸಮಗ್ರವಾಗಿ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರದ ಹಿಂದಿನ ಪೀಳಿಗೆಗೆ ಒಪ್ಪಿಗೆ ಆಗುವಂತೆ ಇಲ್ಲಿಯ ಬರಹಗಳು ಮೂಡಿಬಂದಿದೆ. ಹಲವು ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿರುವ ಜೊತೆಗೆ ಕೆಲವು ಕವಿತೆಗಳು ಅಂತರಂಗ ಮತ್ತು ಬಹಿರಂಗ ಕೆಡುಕುಗಳ ವಿರುದ್ಧ ಸಮಾಜದಲ್ಲಿನ ಅಂಕುಡೊಂಕುಗಳು ಪ್ರಚಲಿತ ವಿದ್ಯಮಾನ ಹೀಗೆ ಹಲವಾರು ವಿಷಯಗಳ ಬಗ್ಗೆ ಕನ್ನಡಿ ಹಿಡಿದಂತಿದೆ.