Monday, 22 December 2025

 ಶ್ರದ್ದಾಂಜಲಿ...ಶ್ರೀನಿವಾಸನ್ 


ಕೆ.ಎಸ್‌.ಧನಂಜಯ

ಸಿನಿಮಾಗಳಲ್ಲಿ ನಟಿಸಿದ್ದರೂ ಬದುಕು ಸಾಗಿಸಲು ಹಣವಿಲ್ಲದ ಒಬ್ಬ ಯುವಕ. ಆತನಿಗೆ ಒಬ್ಬಳು ಪ್ರೇಯಸಿ  ಆದರೆ ಪ್ರೀತಿಯನ್ನು ಪೋಷಿಸಲು ಆರ್ಥಿಕ ಶಕ್ತಿ ಇರಲಿಲ್ಲ.ಅಂತಹ ಸಂಕಷ್ಟದ ಹೊತ್ತಲ್ಲಿಒಬ್ಬ ಕ್ರೈಸ್ತ ( ಇತ್ತೀಚೆಗೆ ಕ್ಯಾನ್ಸರ್‌ನಿಂದ ನಿಧನ ಹೊಂದಿದ ಇನೋಸಿಯಂಟ್ )ತನ್ನ ಹೆಂಡತಿಯ ಕೈ ಬಳೆಯನ್ನು ಗಿರವಿ ಅಂಗಡಿಯಲ್ಲಿಟ್ಟು ಅದರಲ್ಲಿ ಬಂದ ಹಣ  400 ರೂಪಾಯಿ ನೀಡಿದ, ಮತ್ತೊಬ್ಬ ಮುಸ್ಲಿಂ (ಮೇರು ನಟ ಮಮ್ಮೂಟ್ಟಿ) “ನಾಳೆ ನನ್ನ ಮದುವೆ ನನಗೆ 2000 ಹಣದ ಅವಶ್ಯಕತೆ ಇದೆ ಎಂದಾಗ 2000  ಕೊಟ್ಟು, ನಾನು ಮದುವೆಗೆ ಬರುತ್ತೇನೆ ಎಂದಾಗ ನೀವ್ಯಾರು ಬರುವುದು ಬೇಡ ಎಂದು ಸಂಭಂದಿಕರ ಮನೆಗೆಲ್ಲ ಆಟೋ ಮಾಡಿಕೊಂಡು ನಾಳೆ ನನ್ನ ಮದುವೆ ಆದರೆ ನೀವ್ಯಾರು ಬರುವುದು ಬೇಡ ಅಂತ ಹೇಳೊಕೆ ಬಂದೆ ಎಂದು ಹೇಳಿದ,  ಆ ಮೇರು ನಟ ಬೇರೆ ಯಾರು ಅಲ್ಲ ಮಲಯಾಳಂ ಚಿತ್ರರಂಗ ಕಂಡ ನಟ,ನಿರ್ದೇಶಕ, ನಿರ್ಮಾಪಕ, ಕಥೆಗಾರ ಶ್ರೀನಿವಾಸನ್. ಆ ಹಣದಲ್ಲಿ ಒಬ್ಬ ಹಿಂದು ಹುಡುಗಿಗೆ ತಾಳಿ ಕಟ್ಟಲಾಯಿತು. ರಿಜಿಸ್ಟರ್ ಆಫೀಸ್ ಆವರಣದಲ್ಲಿ, ಸದ್ದಿಲ್ಲದೆ, ಸಂಭ್ರಮವಿಲ್ಲದೆ ಆದರೆ ಮಾನವೀಯತೆಯಿಂದ ತುಂಬಿದ ಮದುವೆ ನಡೆಯಿತು.
ಇಲ್ಲಿ ಪ್ರಶ್ನೆ ಏನು ಗೊತ್ತಾ?
ಯಾವ ಧರ್ಮ? ಯಾರ ಧರ್ಮ? ಯಾವ ಜಾತಿ? ಯಾವ ಮತ? ಅಲ್ಲಿ ಇದ್ದದ್ದು ಒಂದೇ ಒಂದು ಧರ್ಮ ಅದು  ಮಾನವ ಧರ್ಮ, ಧರ್ಮಗಳು ಗೋಡೆಯಲ್ಲ ಸೇತುವೆಗಳಾಗಬೇಕು. ಜಾತಿ ಗುರುತಾಗಬಾರದು, ಗುಣ ಗುರುತಾಗಬೇಕು ಮತಗಳು ಮತಾಂತರಕ್ಕೆ ಅಲ್ಲ, ಹೊಸ ಮನ್ವಂತರಕ್ಕೆ ಕಾರಣವಾಗಬೇಕು. ಹಸಿದವನಿಗೆ ಊಟ ಕೊಟ್ಟ ಕೈ ಅದು ಯಾವ ಧರ್ಮದು ಎನ್ನುವುದಕ್ಕಿಂತ, ಅದು ಮನುಷ್ಯನ ಕೈ ಎನ್ನುವುದೇ ಮುಖ್ಯ. ಕಣ್ಣೀರು ಒರೆಸುವ ಹೃದಯ ಅದು ಯಾವ ದೇವರನ್ನು ಪೂಜಿಸುತ್ತದೆ ಎನ್ನುವುದಕ್ಕಿಂತ, ಅದು ಮನುಷ್ಯತ್ವವನ್ನು ನಂಬುತ್ತದೆ ಎನ್ನುವುದೇ ಸಾಕು.
ಕಡೆಯದಾಗಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಕಚ್ಚಾಡುವವರಿಗೆ ಒಂದು ಪ್ರಶ್ನೆ:
“ನಿಮ್ಮ ಧರ್ಮ ಮನುಷ್ಯನಾಗಿ ನಡೆದುಕೊಳ್ಳಲು ಕಲಿಸದಿದ್ದರೆ ,ಅದನ್ನು ನೀವು ನಿಜವಾಗಿಯೂ ಪಾಲಿಸುತ್ತಿದ್ದೀರಾ?”ಎಲ್ಲ ಧರ್ಮಗಳಿಗೂ ಗೌರವ ಇರಲಿ,ಆದರೆ ಮಾನವೀಯತೆಗೆ ಮೊದಲ ಸ್ಥಾನ ಇರಲಿ.ಯಾಕೆಂದರೆ ಧರ್ಮ ಮನುಷ್ಯನಿಗಾಗಿ,ಮನುಷ್ಯ ಧರ್ಮಕ್ಕಾಗಿ ಅಲ್ಲ.

Tuesday, 9 December 2025

 ಏನಾದರೂ ಆಗು, ಮೊದಲು ಮಾನವನಾಗು

                                                         

ಕೆ.ಎಸ್.ಧನಂಜಯ

       
ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ನುಡಿ ಪ್ರಚಲಿತದಲ್ಲಿದೆ “ಪಂಪನಿಂದ ಕುವೆಂಪು ತನಕ” ಮನುಷ್ಯ ಜಾತಿ ತಾನೊಂದೇ ವಲಂ ಎಂದು ಘೋಷಿಸಿದ ಪಂಪ ವರ್ಣ ಗೋಪುರದ ತುತ್ತ ತುದಿಯವನು ಅದರ ನಂತರ ಬಂದ ಬಸವಣ್ಣ ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಜಾತಿ ಪದ್ಧತಿಯನ್ನು ಮೇಲ್ತರದಳಷ್ಟೇ ವಿರೋಧಿಸುತ್ತಾರೆ ಆದರೆ ಆಧುನಿಕ ಸಂದರ್ಭದಲ್ಲಿ ಜಾತಿ ಪದ್ಧತಿಯನ್ನು ವಿರೋಧಿಸಿ ನಿಷ್ಟೂರ ಅಭಿಪ್ರಾಯಗಳಿಂದ ಕೊಚ್ಚಿ ಹಾಕಿದ ಕುವೆಂಪು ವರ್ಣ ಗೋಪುರದ ಅತ್ಯಂತ ಕೆಳಗಿನ ಶ್ರೇಣಿಯ ಮೊದಲ ಶೂದ್ರ ಲೇಖಕ.  ಮನುಜ ಮತ ವಿಶ್ವಪಥ ಎಂಬ ಪರಿಕಲ್ಪನೆಯಲ್ಲಿ ವಿಶ್ವಮಾನವ ಸಂದೇಶವನ್ನು ಹುಟ್ಟು ಹಾಕಿದ್ದ ಕುವೆಂಪು ಸರ್ವಕಾಲಕ್ಕೂ ಮೇಲ್‌ಸ್ತರದಲ್ಲಿ ನಿಲ್ಲುತ್ತಾರೆ.

ಕುವೆಂಪು ಮೌಲ್ಯಗಳ ಆವರಣದಲ್ಲಿ ಬದುಕಿದವರು, ಬದುಕು ಅವರಿಗೆ ಅತ್ಯಂತ ಮಹತ್ವಪೂರ್ಣವಾದದ್ದು ಬದುಕಿನ ಸ್ವಚ್ಛಂದತೆಯನ್ನು ಬಿಡಿ ಬಿಡಿಯಾಗಿ ತೆಗೆದುಕೊಂಡವರಲ್ಲ, ಸಮಗ್ರವಾದದ್ದು ಆತ್ಮೀಯವಾದದ್ದು ಏನಿದೆಯೋ ಅದೆಲ್ಲವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಬಾಳಿನ ಸಮಸ್ತ ಸಂವೇದನೆಗಳಿಗೂ ತಮ್ಮನ್ನು ಒಗ್ಗಿಸಿಕೊಂಡಿದ್ದಾರೆ ನಿಸರ್ಗದ ಹುಚ್ಚು, ಅಸಮಾನತೆಯ ಕಿಚ್ಚು, ಶೋಷಣೆಯ ಅಸಹ್ಯ, ಇವು ಅವರ ಬರವಣಿಗೆಯಲ್ಲಿ ಹೆಚ್ಚಾಗಿ ಗೋಚರಿಸುವಂತದ್ದು. ಮಾನವೀಯತೆ ಸರ್ವ ಸಮಾನತೆ ಸಮತಾವಾದವನ್ನು ಬೋಧಿಸುವ ಕುವೆಂಪು, ವರ್ಗ ಸಂಘರ್ಷಕ್ಕಾಗಲಿ ಶೋಷಣೆಗಾಗಲಿ ತೀವ್ರ ವಿರೋಧಿ.  ಎಲ್ಲರ ಬದುಕು ಸರಳವೋ ಸುಂದರವೂ ಆಗಬೇಕು ವಿಶ್ವ ಶಾಂತಿ ನೆಲೆಸಿರಬೇಕು ಎಂದು ಅಪೇಕ್ಷಿಸುವ ಅವರು ಮನುಷ್ಯನನ್ನು ಕಿತ್ತು ತಿನ್ನುವ ಪರಿಸ್ಥಿತಿಯನ್ನು ಕಿಂಚಿತ್ತು ಸಹಿಸುತ್ತಿರಲಿಲ್ಲ. ಅಜ್ಞಾನ ಅಂಧಕಾರಗಳು ತೊಲಗಿ ಬದುಕಿನ ಬಡತನ ನಿವಾರಣೆಯಾಗಿ ಎಲ್ಲರೂ ಒಂದಾಗಿ ಸೋದರ ಮನೋಭಾವದಿಂದ ಬಾಳಬೇಕು ಎಂಬುವುದು ಅವರ ಜೀವನದ ಆಶಯವಾಗಿತ್ತು. ಆ ಮೂಲಕ ಅವರು ಸಾರ್ವಜನಿಕವಾಗಿ ಕೊಡುವ ಕರೆ ಇಂದಿಗೂ ರಿಂಗಣಿಸುತ್ತಿದೆ

ಸಿಲುಕದಿರಿ ಮತವೆಂಬ ಮೋಹದ ಜ್ಞಾನಕ್ಕೆ

ಮತಿಯಿಂದ ದುಡಿಯಿರೈ ಲೋಕ ಹಿತಕ್ಕೆ

ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು

 ಸೇರಿರೈ ಮನುಜ ಮತಕ್ಕೆ ವಿಶ್ವ ಪಥಕ್ಕೆ

ಜಾತಿ, ಮತ, ದೇವರುಗಳ ನೆಲೆಗಳಿಂದ ಹೊರಬಂದು, ನಿಸರ್ಗದ ನೆಲೆಯಲ್ಲಿ ನಾವೆಲ್ಲರೂ ಮನುಜ ಮತವೆಂಬ ಒಂದೇ ಗುಂಪಿನವರು ಎಂಬ ವಾಸ್ತವವನ್ನು ಅರಿತುಕೊಂಡು, ಪರಸ್ಪರ ಒಲವು ನಲಿವು ನೆಮ್ಮದಿಯಿಂದ ಜತೆಗೂಡಿ ಬಾಳಬೇಕೆಂಬ ಆಶಯದೊಂದಿಗೆ ವಿಶ್ವ ಮಾನವ ಸಂದೇಶದಲ್ಲಿ ಪಂಚ ಮಂತ್ರಗಳನ್ನು ಪ್ರತಿಪಾದಿಸುತ್ತಾರೆ ಪ್ರತಿಯೊಂದು ಮಗುವೂ ಹುಟ್ಟುತ್ತಲೆ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು 'ಅಲ್ಪಮಾನವನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು 'ವಿಶ್ವಮಾನವ'ನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು. ಹುಟ್ಟುವಾಗ 'ವಿಶ್ವಮಾನವನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾಂಗ, ವರ್ಣ ಇತ್ಯಾದಿ ಉಪಾಧಿಗಳಿಂದ ಬದ್ಧನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿಂದ ಪಾರಾಗಿ ಅವನನ್ನು 'ಬುದ್ಧ'ನನ್ನಾಗಿ, ಅಂದರೆ ವಿಶ್ವ ಮಾನವನ್ನಾಗಿ, ಪರಿವರ್ತಿಸುವುದೇ ನಮ್ಮ ವಿದ್ಯೆ, ಸಂಸ್ಕೃತಿ, ನಾಗರಿಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಲೋಕ ಉಳಿದು, ಬಾಳಿ ಬದುಕಬೇಕಾದರೆ! ಪ್ರಪಂಚದ ಮಕ್ಕಳೆಲ್ಲ 'ಅನಿಕೇತನ'ರಾಗಬೇಕು. ಕುವೆಂಪುರವರ ಜಲಗಾರ ಮತ್ತು ಶೂದ್ರ ತಪಸ್ವಿ ಸಮಾಜದ ಅವೈಚಾರಿಕ ರೋಗಗ್ರಸ್ತ ಮನೋಭಾವಕ್ಕೆ ಹಿಡಿದ ಕನ್ನಡಿಗಳಾಗಿವೆ. ಕುವೆಂಪು ವೈಜ್ಞಾನಿಕ ಸಮಾಜದ ತಳಹದಿಯ ಮೇಲೆ ತಮ್ಮ ವರ್ಗ ಸ್ವರೂಪ ಧೋರಣೆಗಳನ್ನ ಬೆಳೆಸಿಕೊಂಡವರು, ಸರ್ವರಿಗೂ ಸಮಪಾಲು ಸಮ ಬಾಳು ಎನ್ನುವುದು ಅವರ ಬದುಕಿನ ಧ್ಯೇಯವಾಗಿತ್ತು. ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸಂಭವಿಸಿ ಹೋಗಿದ್ದಾರೆ. ಅವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊಂಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆಂಬ ಸದುದ್ದೇಶದಿಂದ ಹುಟ್ಟಿ ಕೊಂಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒಂದು ಯುಗಕ್ಕೆ ಅಗತ್ಯವೆನ್ನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊಂದು ಹೊಸ ಧರ್ಮಕ್ಕೆ ಎಡೆಗೊಟ್ಟುದೂ ಉಂಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗುಂಪು ಗುಂಪಾಗಿ ಒಡೆದಿವೆ; ಯುದ್ಧಗಳನ್ನು ಹೊತ್ತಿಸಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲ ಕಾರಣವೆಂಬಂತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನು ಮುಂದೆ ಮತ-ಮೌಢ್ಯ ಒಪ್ಪಿಗೆಯಾಗದು. ಆಚಾರ್ಯ ವಿನೋಬಾ ಭಾವೆಯವರು ಹಿಂದೆ ಹೇಳಿದಂತೆ 'ಮತ ಮತ್ತು ರಾಜಕೀಯದ ಕಾಲ ಆಗಿ ಹೋಯಿತು. ಇನ್ನೇನಿದ್ದರೂ ಅಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.

ಮನುಜಮತವಿಶ್ವಪಥಸರ್ವೋದಯಸಮನ್ವಯಪೂರ್ಣದೃಷ್ಟಿ- ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; "ಮನುಜಮತ". ಆ ಪಥ ಈ ಪಥ ಅಲ್ಲ; "ವಿಶ್ವಪಥ". ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ ಅದುವೇ "ಸರ್ವೋದಯ". ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; "ಸಮನ್ವಯ"ಗೊಳ್ಳುವುದು. ಮಿತ ಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ "ಪೂರ್ಣದೃಷ್ಟಿ".

            ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅಂತಹ ಭಾವನೆ ಅಂತಹ ದೃಷ್ಟಿ ಬರಿಯ ಯಾವುದೊ ಒಂದು ಜಾತಿಗೆ, ಮತಕ್ಕೆ, ಗುಂಪಿಗೆ, ಒಂದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲ ಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆಸುವವು. ಗುಂಪುಗಾರಿಕೆಗೆಂದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಮತ ಗುಂಪು ಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒಂದು ಮತಕ್ಕೆ ಸೇರದೆ, ಪ್ರತಿಯೊಬ್ಬನೂ ತಾನು ಕಂಡು ಕೊಳ್ಳುವ 'ತನ್ನ' ಮತಕ್ಕೆ ಮಾತ್ರ ಸೇರಬೇಕು. ಅಂದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸಂಖ್ಯೆಯ ಮತಗಳಿರುವಂತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗುಂಪು ಕಟ್ಟಿ ಜಗಳ ಹಚ್ಚುವಂತಾಗಬಾರದು. ಯಾವ ಒಂದು ಗ್ರಂಥವೂ 'ಏಕೈಕ ಪರಮ ಪೂಜ್ಯ' ಧರ್ಮ ಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ 'ದರ್ಶನ'ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು ಸರ್ವಮತಗಳಿಗಿಂತಲೂ ಶುದ್ಧ ಹೃದಯದ ಮತ್ತು ಸನ್ಮತಿಯ ಮತವೇ ಮಹೋನ್ನತವಾದದ್ದು ಆ ಗುರು ಈ ಆಚಾರ್ಯ ಆ ಧರ್ಮಶಾಸ್ತ್ರ ಈ ಮನಸ್ಮೃತಿ ಮೊದಲಾದವು ಏನೇ ಹೇಳಲಿ ಎಲ್ಲವನ್ನು ವಿಮರ್ಶಿಸುವ ಪರೀಕ್ಷಿಸುವ ಓರೇಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ. ಕುವೆಂಪು ಈ ನಾಡಿನ ಇತಿಹಾಸದಲ್ಲಿ ಈ ನಾಡ ನೆಲದ ಬದುಕಿನಲ್ಲಿ ಕೆಂಡದುಂಡೆಯಾಗಿ ನಿಸರ್ಗ ಪ್ರೀತಿ ಪೋಣಿಸಿದ ಹಸಿರ ದಂಡೆಯಾಗಿ ಸಮ ಸಮಾಜದ ಆಶಯವಾಗಿ ಯಾವತ್ತೂ ಇರುತ್ತಾರೆ. ಅವರ ತಕಾರಾರು ಇರುವುದು ಮೌಢ್ಯ ಅಜ್ಞಾನ ಮತ್ತು ಸಂಪ್ರದಾಯಗಳನ್ನು ಪ್ರಚಾರ ಮಾಡುತ್ತಾ ಸಾಮಾಜಿಕ ಅನಾರೋಗ್ಯವನ್ನು ಹರಡುತ್ತಿರುವವರ ವಿರುದ್ಧ. ಜಾತಿ ಮತಗಳು ಈ ದೇಶದ ಜನರ ಬದುಕಿಗೆ ಬಡಿದಿರುವ ಭೀಕರ ರೋಗಗಳು ವ್ಯಕ್ತಿಯನ್ನು ಪ್ರೀತಿಸಲು ಸಾಧ್ಯವೇ ಇಲ್ಲದಂತ ಮಾಡಿರುವ ಈ ಕೋಟೆಗಳನ್ನು ನೆಲಸಮ ಮಾಡಿದಾಗ ಮಾತ್ರ ಬದುಕು ಸುಂದರವಾಗಿರಲು ಸಾಧ್ಯ. ಅವರ ಮಾರ್ಗದರ್ಶಕ ಮಾತನ್ನು ನೆನೆಯುವ ಮತ್ತು ಅದರಂತೆ ನಡೆದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ ಆದ್ದರಿಂದ ಕುವೆಂಪು ಇಂದಿಗೂ ಎಂದಿಗೂ ಪ್ರಸ್ತುತವೆನಿಸುತ್ತಾರೆ.

Thursday, 4 December 2025

ಮಾತಿನಾಚೆ ನಗುವ ಮಿಂಚ ಹೇಗೆ ಹಿಡಿದು ತೋರಲಿ? 🥰🥰

 ಕೆ.ಎಸ್.ಧನಂಜಯ

            ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ನಮ್ಮ ದಾರಿಗಳು ಒಂದೇ ದೀಪದಿಂದ ಬೆಳಗಿದ್ದರೂ ನಂತರ ಬೇರೆ ದಿಕ್ಕಿನಲ್ಲಿ ಹರಡಿಕೊಂಡವು. ಆದರೆ ಬೆಳಕು ಒಂದೇ ಆಗಿದ್ದರಿಂದ, ದೂರವಾದರೂ ನಾನು ನಿನ್ನ ನೆರಳನ್ನು ನನ್ನೊಳಗೆ ಎಂದೂ ಕಳೆದುಕೊಂಡಿರಲಿಲ್ಲ. ಜಗತ್ತು ನಮ್ಮಿಬ್ಬರ ಭೇಟಿಗೆ ಎಷ್ಟು ಬಣ್ಣಗಳು, ಎಷ್ಟು ಅರ್ಥಗಳು, ಎಷ್ಟು ವ್ಯಾಖ್ಯಾನಗಳನ್ನು ನೀಡಲಿ ನಾವು  ಎನಾಗಿದ್ದೆವೋ, ಹೇಗಿದ್ದೇವು, ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬರಿಗೊಬ್ಬರು ಏನು, ಹೇಗೆ ನಡೆದುಕೊಂಡೆವು ಎಂದು ನಮ್ಮಿಬ್ಬರಿಗಷ್ಟೇ ಗೊತ್ತು. ನಾವೇಕೆ ಪರಸ್ಪರ ದೂರಾದೆವು ಎನ್ನುವುದು ನನಗೂ, ನಿನಗೂ, ಭಗವಂತನಿಗೂ ಮಾತ್ರ ತಿಳಿದ ರಹಸ್ಯ.ಅದು ಲೋಕಕ್ಕೆ ಪ್ರಕಟವಾಗಬೇಕಾದ ಶಾಸನವಲ್ಲ. ನಿನ್ನೊಳಗೆ ನನಗೆ ನೋವು ಕೊಡುವ ಮನಸ್ಸಿದ್ದರೆ,ಮೋಸ ಮಾಡುವ ಅವಕಾಶವೂ ನಿನಗೆ ಇತ್ತು.ಆದರೆ ನೀನು ಆಯ್ದುಕೊಂಡ ದಾರಿ ಸುಳ್ಳಿನದಲ್ಲ, ಸತ್ಯದ ಹಾದಿ. ನಿನ್ನನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾರೆ ಎನ್ನುವ ಒಂದು ನೇರವಾದ ವಾಕ್ಯದಲ್ಲೇ ನೀನು ನನ್ನ ಬದುಕಿನಲ್ಲಿ ಶಾಶ್ವತವಾಗಿ ಉಳಿದುಬಿಟ್ಟೆ.  ಮೋಸಕ್ಕಿಂತ ಸತ್ಯವೇ ಹೆಚ್ಚು ನೋಯಿಸುತ್ತದೆಆದರೂ ಅದೇ ಹೆಚ್ಚು ಪವಿತ್ರಇವಳು ನನಗೆ ಸಿಗಲ್ಲ ಎಂದು ಬದುಕನ್ನು ದೌರ್ಜನ್ಯದಿಂದ ಕಸಿದುಕೊಂಡವರಿಗೆ ಕೊನೆಗೆ ಸಿಕ್ಕಿದ್ದು ಏನು? ಯೋಗ ಎನ್ನುವುದು ನಮಗೆ ಒಂದು ಜೀವವಾಗಲಿ , ವಸ್ತುವಾಗಲಿ ಒಲಿದು ಬರುವುದು , ಯೋಗ್ಯತೆ ಎನ್ನುವುದು ಅದನ್ನು ಬದುಕಿನ ಉದ್ದಕ್ಕೂ ಪ್ರೀತಿಸಿ ಉಳಿಸಿಕೊಂಡು ಹೋಗುವುದು. ಪ್ರೀತಿ ಸಿಗಲಿಲ್ಲ, ಗೌರವ ಉಳಿಯಲಿಲ್ಲ,ಮಾನವೀಯತೆ ಕೈ ತಪ್ಪಿತು. ಹಿಡಿದಿದ್ದು ದೇಹವನ್ನೇ ಹೊರತು ಹೃದಯವನ್ನಲ್ಲ. ಪ್ರತಿ ದಿನ ನಿನ್ನ ನೆನಪು ನನ್ನ ಹೃದಯಕ್ಕೆ ಅಂಟಿಕೊಂಡೇ ಇರುತ್ತದೆ. ಆದರೆ ಈ ನೆನಪುಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ ಹಂಚಿಕೊಂಡರೆ ನೋವು ಹೆಚ್ಚುತ್ತದೆ, ಮೌನಿಸಿದ್ದರೆ ಹೃದಯ ತುಂಬಿ ಕಕ್ಕುತ್ತದೆ.

         ಸಾಕಷ್ಟು ಬಾರಿ ನೀನು ನಮ್ಮ ಮನೆಗೆ ಬಂದು  ಉಳಿದು ಹೋಗಿದ್ದೆ. ಆ ದಿನಗಳ ಬೆಳಕು ಇಂದಿಗೂ ನನ್ನ ಮನೆಯಲ್ಲಿ ಜೀವಂತವಾಗಿದೆ. ನಿನ್ನ ಜೊತೆ ಕೈ ಕೈ ಹಿಡಿದು ನದಿಯ ದಡದಲ್ಲಿ ನಡೆದ ಆ ಹಾದಿಗಳು ಇಂದಿಗೂ ನನ್ನ ಜೀವನದ ಅತ್ಯಂತ ಪವಿತ್ರ ನೆನಪುಗಳೇ. ನೀನು ಜಗತ್ತಿಗೆ ಕಣ್ಮರೆಯಾಗಿರಬಹುದು ಆದರೆ ನಿನ್ನ ಸ್ಪರ್ಶ, ನಿನ್ನ ಮಾತು ನಿನ್ನ ನೋಟ ಪ್ರತಿ ಕ್ಷಣವೂ ನನ್ನೊಳಗೆ ಜೀವಂತ. ಹೇಗೆ ಮರೆಯಲಿ ನಿನ್ನ ?  ಹೇಗೆ ಮರೆಯಲಿ ನಿನ್ನೊಡನೆ  ಕಳೆದ ಆ ಜೀವನದ  ಚಿಕ್ಕ ಚಿಕ್ಕ ಅಮೂಲ್ಯ ಕ್ಷಣಗಳನ್ನು ? ನಿನ್ನನ್ನು ಪ್ರೀತಿಯಿಂದ, ಕಣ್ಣೀರಿನಿಂದ, ಸ್ಮರಣೆಯಿಂದ ಸ್ಮರಿಸುತ್ತಾ ಈ ಸಾಲುಗಳನ್ನು ಬರೆಯುತ್ತಿರುವೆ ಬರೆಯುವಾಗ ನನ್ನ ಕಣ್ಣಾಲಿಗಳು ತುಂಬಿ ಬರುತ್ತಿದೆ. ಎಷ್ಟೋ ವರ್ಷಗಳ ನಂತರವೂ, ನನ್ನ ಮನಸ್ಸಿನ ಒಂದು ನಿಜವಾದ ಮೂಲೆಯಲ್ಲಿ ನೀನು ಇಂದು ಕೂಡಾ ಮೃದುವಾಗಿ, ನಿಶ್ಶಬ್ದವಾಗಿ ಬದುಕಿರುವೆ. ಜಗತ್ತಿನ ಪಾಲಿಗೆ ನೀನು ಸತ್ತಿರಬಹುದು ಆದರೆ ನನಗೆ ನನ್ನೋಳಗೆ ಎಂದಿಗೂ ಜೀವಂತ ಇರುತ್ತೀಯ. ಪ್ರೀತಿಯೆಂದರೆ ಒಂದೇ ದಾರಿಗೆ ನಡೆಯಬೇಕೆಂಬ ನಿಯಮವಿಲ್ಲ ಎಂಬುದನ್ನು ನನ್ನ  ಜೀವನವೇ ಆಗಿದ್ದಾಗ ನೀನೆ ನನಗೆ ಹೇಳಿಕೊಟ್ಟ ಪಾಠ. ಬಾಲ್ಯದಲ್ಲಿ ಹಿಡಿದ ನಿನ್ನ ಕೈಯ ಬಿಸಿಯ ಸ್ಪರ್ಶ ಇನ್ನು ಹಾಗೇಯೆ ಇದೆ ಇಂದಿಗೂ ನೀನು ನನ್ನ ಕೈ ಬಿಟ್ಟಿಲ್ಲ ಎನ್ನುವುದು ಸ್ಪಷ್ಟ. ಕಾಲ ಬದಲಾಯಿತು, ಜೀವನ ನಮ್ಮನ್ನು ಬೇರೆ ಮನೆಗಳಿಗೆ, ಬೇರೆ ಕರ್ತವ್ಯಗಳಿಗೆ ಕರೆದೊಯ್ದಿತು, ನಾನೂ ನನ್ನ ಬದುಕನ್ನು ಕಟ್ಟಿಕೊಂಡೆ,ನೀನೂ ನಿನ್ನ ಸಂತೋಷವನ್ನು ಹುಡುಕಿಕೊಂಡೆ. ಆದರೂ ಹೃದಯದ  ಮೌನ ಮೂಲೆಯಲ್ಲಿ ನಾವು ಇಬ್ಬರೂ ಪರಸ್ಪರ ಬಾಗಿಲು ತೆರೆದಿಟ್ಟಿದ್ದೆವು ಬರುವೆಯಾ ಎಂಬ ನಿರೀಕ್ಷೆಗೆ ಅಲ್ಲ,ಬರಲಿಲ್ಲ ಎಂಬ ಮೌನ ಗೌರವಕ್ಕೆ. ಇಂದು ನೀನು ಈ ಲೋಕದಲ್ಲಿಲ್ಲವೆಂಬ ಸುದ್ದಿ ಹೃದಯಕ್ಕೆ ಸುಳಿಯಂತೆ ತಾಗಿದಾಗ, ನಾನು ಕಣ್ಣೀರಲ್ಲಿ ಹುಡುಕಿದ್ದು ನಿನ್ನ ನೋವಲ್ಲ ನಿನ್ನ ಸಂತೋಷ ಎಂದಿಗೂ ನಾನು ಬಯಸಿದ್ದು ನೀನು ಎಲ್ಲೋ ಒಂದು ಕೋಣೆಯಲ್ಲಿ ಶಾಂತವಾಗಿರು ಎಂದು ಆದರೆ ಇಂದು ನಿನ್ನದಾಗಿ ಉಳಿದಿರುವುದು ಒಂದು ಮೌನ ಪ್ರೀತಿ, ಒಂದು ಮಧುರ ನೆನಪು, ಮತ್ತು ನನ್ನ ಹೃದಯದ ಒಳಗಿನ ಶಾಶ್ವತ ಸ್ಥಳ. ನೀನು ಇಲ್ಲದೆ ಜೀವನ ಮುಂದುವರಿದರೂ,ನಿನ್ನ  ನೆನಪುಗಳಿಲ್ಲದೆ ಅದು ಸಂಪೂರ್ಣವಲ್ಲ. ನೀನು ಬದುಕಿದ್ದ ದಿನಗಳು ಪ್ರೀತಿಯ ಅರ್ಥ ಕಲಿಸಿದವು. ನೀನು ಇಲ್ಲದ ದಿನಗಳು ನೆನಪಿನ ಮೌಲ್ಯ ಕಲಿಸುತ್ತಿವೆ. ಇಂದು ನೀನು ಕಣ್ಣಿಗೆ ಕಾಣದಿದ್ದರೂ ನಿನ್ನ ಪ್ರೀತಿ ಮತ್ತು ನೀನು ಎಂದಿಗೂ ಮಸುಕಾಗುವುದಿಲ್ಲ. 
       ಕುವೆಂಪು ಒಂದು ಸಂಧರ್ಭದಲ್ಲಿ ಹೀಗೆ ಹೇಳುತ್ತಾರೆ  ಯಾರೋ ಎಲ್ಲೋ ಇದ್ದವರು ಸಿಗಬೇಕೆಂದರೆ ಋಣವಂತು ಇರಲೇಬೇಕು, ಸಿಕ್ಕವರೆಲ್ಲ ಬದುಕೊಳಗೆ ಬರಬೇಕೆಂದರೆ ಹಣೆ ಬರಹದೊಳಗೆ ಬರೆದಿರಲೇಬೇಕು, ಎಲ್ಲೋ ಇದ್ದವರು ಒಂದೆಡೆ ಸೇರಿಸಲು ಹಣೆ ಬರಹದೊಳಗಿದ್ದವರೆ ನಮ್ಮವರಾಗಿರಲು, ಪ್ರೀತಿಸಲು ನಿಯಮಗಳೆಕಿರಬೇಕು ಕಾಳಜಿಗೆ ಕಾರಣಗಳೇಕಿರಬೇಕು ಅಲ್ವೇ ?  ನೀ ಬಂದೆ ಬೆಳಗಿದೆ, ರೂಪ ಕೊಟ್ಟೆ ನಂತರ ಶಾಂತವಾಗಿ ಮತ್ತೊಂದು ಲೋಕದತ್ತ ಹೊರಟು ಹೋದೆ. ನಾವು ಹಂಚಿಕೊಂಡ ಮೌನ ಕ್ಷಣಗಳು, ನಗು, ನೋವುಗಳು ಇವೆಲ್ಲಾ ಈಗ ನನ್ನ ಆತ್ಮದ ಒಂದು ಭಾಗ. ನಿನ್ನನ್ನು ಈ ಲೋಕದಿಂದ ಕರೆಯುವ ದೇವರ ನಿರ್ಧಾರವನ್ನು  ನಾನು ಎಂದಿಗೂ ಪ್ರಶ್ನೆ ಮಾಡಲ್ಲ. ನೀನು ಈ ಜಗತ್ತಿನಿಂದ ನಿರ್ಗಮಿಸಿದನ್ನು ನಾನು ದುಃಖದಿಂದ ಅಲ್ಲ ಭಕ್ತಿಯಿಂದ ಸ್ವೀಕರಿಸುತ್ತೇನೆ ಬಹುಶಃ ನಿನ್ನ ಆತ್ಮಕ್ಕೆ ಈ ಮನುಷ್ಯ ಜೀವನ ಸಾಕಾಗಿರಬೇಕು ಎನಿಸುತ್ತಿದೆ , ಆ ದೇಹ ಇನ್ನೊಂದು ಶಾಂತಿಯ ದಾರಿಯನ್ನು ಬಯಸಿತೋ ಎನೋ ?  ಅದನ್ನು ನಾನು ಗೌರವಿಸುತ್ತೇನೆ. ಇಷ್ಟೂ ತನಕ ಎಲ್ಲೀಯೋ ಸುಖದಿಂದ  ಇದ್ದೀಯ ಎನ್ನುವ ಖುಷಿ ಇತ್ತು ಇನ್ನೂ ಆ ಖುಷಿಯೂ ಇಲ್ಲ,  ನೀನು ಇಲ್ಲವೆಂಬ ಸುದ್ದಿ ಕೇಳಿದಾಗ ಅದು ನನ್ನನ್ನು ನೆಲಕ್ಕೊರಗಿಸಿತು ಆದರೆ ಅಲ್ಲೇ ಬಿದ್ದಿದ್ದಾಗ ಆಕಾಶದತ್ತ ನೋಡಿದ ಕ್ಷಣದಲ್ಲಿ ಒಂದು ಸ್ಪಷ್ಟತೆ ಒಳಗೆ ಮೂಡಿತು ಪ್ರೀತಿ ಎಂದರೆ ದೇಹದ ವಿಷಯವಲ್ಲ ಅದು ಆತ್ಮದ ಸಂಬಂಧ, ಪರಸ್ಪರ ದೇಹಕ್ಕೆ ಯಾವತ್ತೂ ನಾವು ಆದ್ಯತೆ ನೀಡಲಿಲ್ಲ  ಎನ್ನುವುದು ಬೇರೆ ಮಾತು. ಇಂದೂ ಕೂಡ  ರಾತ್ರಿ ಗಾಳಿ ಮೃದುವಾಗಿ ಸ್ಪರ್ಶಿಸಿದಾಗ ಅದರೊಳಗೆ ನಿನ್ನ ಮೌನ ಸಾನ್ನಿಧ್ಯವಿದೆ, ಪ್ರಾರ್ಥನೆಗೆ ಕೈ ಜೋಡಿಸಿದಾಗ ನಿನ್ನ ನೆನಪಿನ ದೀಪ ಬೆಳಗುತ್ತದೆ, ನಕ್ಷತ್ರಗಳನ್ನು ನೋಡಿದಾಗ ನಿನ್ನ ಶಾಂತ ನಗು ಅದರ ಬೆಳಕುಗಳಲ್ಲಿ ಕರಗುತ್ತದೆ, ನೀನು ಈಗ ದೇವರ ಅಂಗಳದಲ್ಲಿ, ಲೋಕದ ನೋವುಗಳಿಂದ ದೂರ. ಶುದ್ಧ ಬೆಳಕಿನ ನಡುವೆ  ಅಲ್ಲಿ ನಿನ್ನ ಆತ್ಮ ಶಾಂತವಾಗಿರುವ ವಿಚಾರ ನನ್ನ ಮನಕ್ಕೆ ಆರಾಮ. ಈ ಜನ್ಮ ನಮ್ಮನ್ನು ದೂರವಿಟ್ಟರೂ, ಮತ್ತೊಂದು ಜನ್ಮದ ಮಾರ್ಗದಲ್ಲಿಈ ಪ್ರೀತಿಯ ಬೆಳಕು ಮತ್ತೆ ನಮ್ಮನ್ನು ಸೇರ್ಪಡಿಸಬಹುದು. 
    ಬಲವಂತದಿಂದ ಪಡೆದ ಸಂಬಂಧ ಸಂಬಂಧವಾಗುವುದಿಲ್ಲ, ಅದು ಜೀವನ ಪೂರ್ತಿ ಹೊತ್ತೊಯ್ಯಬೇಕಾದ ಪಾಪದ ನೆರಳಷ್ಟೇ. ಭಗವಂತನ ಇಚ್ಚೆಯಂತೆ ಇಂದಿಗೂ ನೀನು ನನ್ನ ಪ್ರಾರ್ಥನೆಗಳಲ್ಲಿ, ನನ್ನ ಮೌನಗಳಲ್ಲಿ, ನನ್ನ ಹೃದಯದ ನಿಶ್ಶಬ್ದ ದೇವಾಲಯದಲ್ಲಿ ಬೆಳಗುತ್ತಿರುವೆ. ನಿನಗಾಗಿ ನಿನ್ನ ನೆನಪಿಗಾಗಿ ನಾವು ಹಂಚಿಕೊಳ್ಳದ ಬದುಕಿಗಾಗಿ ಪ್ರೀತಿಯೊಂದು ನಿರಂತರ ಕಾಯುತ್ತೆ ಸುಮ್ಮನೆ ನಗುತ್ತಾ.